‘ರಾಮಜನ್ಮಭೂಮಿ ವಿವಾದ: ಸಮನ್ವಯ ಸಮಿತಿಗೆ ಪೇಜಾವರಶ್ರೀ ಅಧ್ಯಕ್ಷರಾಗಲಿ’
ಉಡುಪಿ, ಜು. 23: ಈಗ ಸುಪ್ರೀಂ ಕೋರ್ಟಿನಲ್ಲಿದ್ದು, ಯಾವದೇ ಕ್ಷಣದಲ್ಲಿ ತೀರ್ಪನ್ನು ಎದುರು ನೋಡುತ್ತಿರುವ ಅಯೋಧ್ಯೆಯ ಬಾಬರಿ ಮಸೀದಿ- ರಾಮಜನ್ಮ ಭೂಮಿ ವಿವಾದದ ವಿಚಾರದಲ್ಲಿ ಸಾಧು ಸಂತರ ಸಮಿತಿ ಹಾಗೂ ಎರಡೂ ಸಮುದಾಯವನ್ನು ಒಳಗೊಂಡ ಸಮನ್ವಯ ಸಮಿತಿ ರಚನೆಯ ಪ್ರಸ್ತಾಪವಿದ್ದು, ಈ ಎರಡೂ ಸಮಿತಿಗಳಿಗೆ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಯನ್ನೇ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕೆಂದು ಉಡುಪಿಯ ಶ್ರೀ ಪೇಜಾವರ ಸ್ವಾಮೀಜಿಗಳ ಮುಸ್ಲಿಂ ಅಭಿಮಾನಿ ಬಳಗ ಒತ್ತಾಯಿಸಿದೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಳಗದ ಅಧ್ಯಕ್ಷ ಅನ್ಸಾರ್ ಅಹ್ಮದ್, ಪೇಜಾವರ ಮಠದ ಹಿರಿಯ ಸ್ವಾಮೀಜಿಗಳಾದ ಶ್ರೀ ವಿಶ್ವೇಶತೀರ್ಥರು ಪ್ರಾರಂಭದಿಂದಲೂ ಬಾಬರಿ ಮಸೀದಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದು, ಈ ಸಮಸ್ಯೆಯ ಕುರಿತಂತೆ ಎರಡೂ ಸಮುದಾಯದವರ ಮನವೊಲಿಸಿ ಸಾಮರಸ್ಯದ ಮೂಲಕ ಈ ವಿವಾದವನ್ನು ಬಗೆಹರಿಸಲು ಪ್ರಥಮ ಹೆಜ್ಜೆ ಇಟ್ಟವರು ಎಂದರು.
ಆದರೆ ಸ್ಥಾಪಿತ ಹಿತಾಸಕ್ತಿಗಳ ಕುಮ್ಮಕ್ಕಿನಿಂದ ಅವರ ಪ್ರಯತ್ನಕ್ಕೆ ತಾತ್ಕಾಲಿಕ ಹಿನ್ನಡೆಯಾಗಿದೆ. ದೇಶದ ಹಲವು ಜಟಿಲ ಸಮಸ್ಯೆಗಳಿಗೆ ಪೇಜಾವರ ಶ್ರೀಗಳು ಪರಿಹಾರ ನೀಡುತ್ತಾ ಬಂದಿದ್ದಾರೆ. ಹೀಗಾಗಿ ಈಗ ರಚನೆಯಾಗಲಿರುವ ಎರಡೂ ಸಮಿತಿಗಳಿಗೆ ಇವರನ್ನೇ ಅಧ್ಯಕ್ಷರನ್ನಾಗಿ ಮಾಡಿ ವಿವಾದವನ್ನು ಬಗೆಹರಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಬಳಗದ ಮುಖಂಡರಾದ ಮಹಮ್ಮದ್ ಅಲಿ, ಕೊಯಾ ಅಲಿ ಅಹ್ಮದ್, ಎಂ.ಎಸ್.ಅಬ್ದುಲ್ ರೆಹಮಾನ್ ಉಪಸ್ಥಿತರಿದ್ದರು.