ನ. 23ರಿಂದ ದುಬೈಯಲ್ಲಿ ವಿಶ್ವ ತುಳು ಸಮ್ಮೇಳನ

ಮಂಗಳೂರು, ಜು.24: ಸಾಗರೋತ್ತರ ತುಳುವರು, ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಮತ್ತು ಅಖಿಲ ಭಾರತ ತುಳು ಒಕ್ಕೂಟದ ಸಹಯೋಗದಿಂದ ನ.23 ಹಾಗೂ 24ರಂದು ದುಬೈಯ ಅಲ್ ನಾಸರ್ ಲೀಸರ್ ಲ್ಯಾಂಡ್ ಐಸ್ರಿಂಕ್ ಒಳಾಂಗಣ ಕ್ರೀಡಾಂಗಣದಲ್ಲಿ ವಿಶ್ವ ತುಳು ಸಮ್ಮೇಳನ ನಡೆಯಲಿದೆ ಎಂದು ಸಾಗರೋತ್ತರ ತುಳುವರು ಇದರ ಮುಖ್ಯ ಸಂಘಟಕ ಸರ್ವೋತ್ತಮ ಶೆಟ್ಟಿ ತಿಳಿಸಿದ್ದಾರೆ.
ನಗರದ ಪ್ರೆಸ್ಕ್ಲಬ್ನಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅರಬ್ ಸಂಯುಕ್ತ ಸಂಸ್ಥಾನದಲ್ಲಿಯೇ ಮೊದಲ ಬಾರಿಗೆ ಆಯೋಜಿಸಲಾಗುತ್ತಿರುವ ಅನಿವಾಸಿ ತುಳುವರ ಬೃಹತ್ ಸಮಾವೇಶ ಇದಾಗಿದೆ. ಸಮ್ಮೇಳನಕ್ಕೆ ಮುಖ್ಯ ಅತಿಥಿಯಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಆಗಮಿಸಲಿದ್ದಾರೆ.
ಸಮಾರಂಭದ ಅಧ್ಯಕ್ಷತೆಯನ್ನು ಅಬುಧಾಬಿ ಎನ್ಎಂಸಿ ಸಮೂಹ ಸಂಸ್ಥೆಯ ಸ್ಥಾಪಕ ಡಾ. ಬಿ.ಆರ್. ಶೆಟ್ಟಿ ವಹಿಸಲಿದ್ದಾರೆ. ಗೌರವ ಅತಿಥಿಗಳಾಗಿ ಮಂಗಳೂರು ಧರ್ಮಪ್ರಾಂತದ ಬಿಷಪರು, ಮುಸ್ಲಿಮ್ ಪ್ರವಚನಕಾರರು ಭಾಗವಹಿಸಲಿದ್ದಾರೆ. ಇದರ ಜತೆಗೆ ರಾಜ್ಯ ಹಾಗೂ ಸಾಗರದಾಚೆಯ ಗಲ್ಪ್, ಅಮೆರಿಕ, ಆಸ್ಟ್ರೇಲಿಯಾ, ಯು.ಕೆ. ತುಳು ಸಂಘಟನೆಗಳ ಅಧ್ಯಕ್ಷರು ಹಾಗೂ ಹೊರನಾಡ ತುಳು ಸಂಘಟನೆಗಳಾದ ಮುಂಬೈ, ದಿಲ್ಲಿ, ಬರೋಡ, ನಾಸಿಕ್, ಸಾಂಗಿ, ಪುಣೆ, ಚೆನ್ನೈ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಮತ್ತಿತರ ಕಡೆಗಳಿಂದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.
ವಿಶ್ವ ತುಳು ಸಮ್ಮೇಳನದ ಅಂಗವಾಗಿ ವಿಶ್ವ ತುಳು ಐಸಿರಿ ವಿಶೇಷ ಸ್ಮರಣ ಸಂಚಿಕೆ ಅನಾವರಣಗೊಳ್ಳಲಿದೆ. ಇದರ ಜತೆಗೆ ತುಳು ಜಾನಪದ ಸ್ಪರ್ಧೆಗಳು ನಡೆಯಲಿದೆ. ಇದರಲ್ಲಿ ಗಲ್ಪ್ ರಾಷ್ಟ್ರಗಳಾದ ಮಸ್ಕತ್, ಬಹರಿನ್, ಕತರ್, ಕುವೈತ್, ಸೌದಿ ಅರೇಬಿಯಾ, ಒಮನ್ ಮತ್ತು ಯುಎಇಯ ಹಲವು ಜಾನಪದ ತಂಡಗಳು ಕಾಣಿಸಿಕೊಳ್ಳಲಿದೆ. ಅಲ್ಲದೆ ತಾಳ ಮದ್ದಳೆ, ಯಕ್ಷಗಾನ ನಾಟ್ಯವೈಭವ, ತುಳುರಸಮಂಜರಿ, ತುಳು ಸಾಹಿತ್ಯ ಗೋಷ್ಠಿ, ತುಳು ಕೋಡೆ ಇನಿ ಎಲ್ಲೆ, ದೈವಾರಾಧನೆ, ನಾಗಾರಾಧನೆ ಮತ್ತು ಭೂತಾರಾಧನೆ ಬಗ್ಗೆ ತುಳು ಮಾಧ್ಯಮ ಗೋಷ್ಠಿ, ತುಳು ಹಾಸ್ಯ ಸಂಜೆ, ತುಳು ಕವನ ವಾಚನ, ತುಳು ಚುಟುಕು ಗೋಷ್ಠಿ, ತುಳುರಂಗಭೂಮಿ ಮತ್ತು ಚಲನಚಿತ್ರ ಗೋಷ್ಠಿ, ಹೊರನಾಡ ತುಳು ಸಂಘಟನೆಗಳ ಅಧ್ಯಕ್ಷರ ಗೋಷ್ಠಿ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಯು.ಧರ್ಮಪಾಲ್ ದೇವಾಡಿಗ, ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ್ ಶೆಟ್ಟಿ, ತುಳು ಅಕಾಡಮಿಯ ಅಧ್ಯಕ್ಷ ಎ.ಸಿ.ಭಂಡಾರಿ ಹಾಗೂ ನಿಟ್ಟೆ ಶಶಿಧರ್ ಶೆಟ್ಟಿ ಉಪಸ್ಥಿತರಿದ್ದರು.