ಬಂಟ್ವಾಳದಲ್ಲಿ ಶಾಸಕರ ಹಿಂಬಾಲಕರು ಮರಳು ದಂಧೆಯಲ್ಲಿ ಭಾಗಿ: ಜಗದೀಶ್ ಕೊಯ್ಲ

ಮಂಗಳೂರು, ಜು.24: ಬಂಟ್ವಾಳದಲ್ಲಿ ಶಾಸಕ ರಾಜೇಶ್ ನಾಯ್ಕ ಉಳೆಪಾಡಿಯ ಹಿಂಬಾಲಕರು ಮರಳು ದಂಧೆಯಲ್ಲಿ ಭಾಗಿಯಾಗಿದ್ದಾರೆ ಎಂದು ಬಂಟ್ವಾಳ ಕಾಂಗ್ರೆಸ್ ಮುಖಂಡ ಜಗದೀಶ್ ಕೊಯ್ಲ ಆರೋಪಿಸಿದ್ದಾರೆ.
ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು, ಶಾಸಕರ ಹಿಂಬಾಲಕರಾದ ಪ್ರವೀಣ್ ಆಳ್ವ, ನಂದಪ್ಪ ರೈ, ಪ್ರಕಾಶ್ ಆಳ್ವ ನೇತೃತ್ವದಲ್ಲಿ ಮರಳು ದಂಧೆ ನಡೆಯುತ್ತಿದೆ. ಮುಲ್ಲರಪಟ್ಣ ಸೇತುವೆ ಬಳಿ ಇತ್ತೀಚೆಗೆ ವಶಪಡಿಸಿಕೊಳ್ಳಲಾದ ಅಕ್ರಮ ಮರಳು, ಟಿಪ್ಪರ್ ಕೂಡ ಪ್ರವೀಣ್ ಆಳ್ವರಿಗೆ ಸೇರಿದ್ದಾಗಿದೆ. ಇದನ್ನು ಮರೆಮಾಚಿ ಅಲ್ಲಿನ ಬಿಜೆಪಿಗರು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ರಮಾನಾಥ ರೈ ವಿರುದ್ಧ ಆರೋಪ ಹೊರಿಸುತ್ತಿದ್ದಾರೆ ಎಂದರು.
ಮುಲ್ಲರಪಟ್ಣ ಸೇತುವೆ ಕುಸಿಯಲು ರಮಾನಾಥ ರೈ ಹಿಂಬಾಲಕರು ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿಸಿಕೊಂಡದ್ದೇ ಕಾರಣ ಎಂದು ಆರೋಪಿಸಲಾಗುತ್ತದೆ. ಆದರೆ, ಈ ದಂಧೆಯಲ್ಲಿ ಯಾರು ತೊಡಗಿಸಿಕೊಂಡಿದ್ದಾರೆ ಎಂಬುದು ಎಲ್ಲರಿಗೂ ತಿಳಿದ ವಿಚಾರವಾಗಿದೆ. ಈ ಮಧ್ಯೆ ಮುಲ್ಲರಪಟ್ಣ ಸೇತುವೆಯ ಪಿಲ್ಲರ್ನ ಬುಡದಲ್ಲೇ ಡ್ರಜ್ಜಿಂಗ್ ನಡೆಸಿ ನೀರಿನ ಪೈಪ್ಲೈನ ಅಳವಡಿಸಲಾಗಿದೆ. ಡ್ರಜ್ಜಿಂಗ್ ಮೂಲಕ ತೆಗೆಯಲಾದ ಮರಳನ್ನು ಬಂಟ್ವಾಳ ಪುರಸಭೆಯ ಬಿಜೆಪಿ ಕೌನ್ಸಿಲರ್ ಗೋವಿಂದ ಪ್ರಭು ಸ್ವತಃ ತನ್ನ ಟಿಪ್ಪರ್ನಲ್ಲಿ ಬೇರೆ ಕಡೆ ಸಾಗಿಸಿದ್ದಾರೆ. ಇಷ್ಟೆಲ್ಲಾ ಇದ್ದರೂ ಕೂಡ ಬಿಜೆಪಿಗರು ವಾಸ್ತವಾಂಶ ಮರೆಮಾಚಿ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಜಗದೀಶ್ ಕೊಯ್ಲ ಹೇಳಿದರು.
ಬಂಟ್ವಾಳದ ಮರಳು ದಂಧೆಯಲ್ಲಿ ಭಾಗಿಯಾದ ಬಿಜೆಪಿಗರ ವಿರುದ್ಧ ಕಾಂಗ್ರೆಸ್ ಕಾನೂನು ಹೋರಾಟ ಮಾಡಲಿದೆ. ಪುರಸಭೆಯ ಕೌನ್ಸಿಲರ್ ಗೋವಿಂದ ಪ್ರಭು ಮತ್ತು ಕಂಪೆನಿಯ ಇಂಜಿನಿಯರ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ, ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗುವುದು ಎಂದು ತಿಳಿಸಿದ ಜಗದೀಶ್ ಕೊಯ್ಲ, ಸೇತುವೆ ಕುಸಿತದ ಬಳಿಕ ಮುಲ್ಲರಪಟ್ಣ ಪರಿಸರದ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಶಾಸಕರಾದ ರಾಜೇಶ್ ನಾಯ್ಕ ಉಳೆಪಾಡಿ ಮತ್ತು ಡಾ.ಭರತ್ ಶೆಟ್ಟಿ ಈ ಬಗ್ಗೆ ಗಮನ ಹರಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಪಂ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ ಜೈನ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಬುಡಾ ಅಧ್ಯಕ್ಷ ಸದಾಶಿವ ಬಂಗೇರಾ, ಪಕ್ಷದ ಮುಖಂಡ ಬೇಬಿ ಕುಂದರ್ ಉಪಸ್ಥಿತರಿದ್ದರು.