ನೂತನ ಕೈಗಾರಿಕೆಗಳ ಸ್ಥಾಪನೆಗೆ ಸರಕಾರ ಬದ್ಧ: ಸಚಿವ ಕೆ.ಜೆ.ಜಾರ್ಜ್

ಮೈಸೂರು,ಜು.24: ನೂತನ ಕೈಗಾರಿಕೆಗಳ ಸ್ಥಾಪನೆಗೆ ಸರಕಾರ ಮುಂದಾಗಿದ್ದು, ಹೂಡಿಕೆ ಮಾಡುವವರಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುವುದಾಗಿ ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಹೂಡಿಕೆದಾರರು ಮುಂದಾಗಿದ್ದು, ಇನ್ನಷ್ಟು ಹೂಡಿಕೆದಾರರನ್ನು ಸೆಳೆಯಲು ಪ್ರಯತ್ನ ಮಾಡುವುದಾಗಿ ಹೇಳಿದರು.
ಗ್ಲೋಬಲ್ ಇನ್ವೆಸ್ಟರ್ಸ್ ಮೀಟ್ ನಲ್ಲಿ ಭಾಗವಹಿಸಿದವರು ಈಗಾಗಲೇ ಕೈಗಾರಿಕೆಗಳ ಸ್ಥಾಪನೆಗೆ ಮುಂದಾಗಿದ್ದಾರೆ. ರಾಜ್ಯದ ಎಲ್ಲಾ ಕಡೆ ಹೆಚ್ಚು ಕೈಗಾರಿಕೆಗಳನ್ನು ಸ್ಥಾಪಿಸಿ ಯುವಕರು ಮತ್ತು ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಠಿ ಮಾಡಲು ಸರಕಾರ ಮುಂದಾಗಿದೆ ಎಂದು ಹೇಳಿದರು.
ಮೈಸೂರಿಗೆ 4 ಸಾವಿರ ಕೋಟಿ ಹೂಡಿಕೆ: ಮೈಸೂರು ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಈಗಾಗಲೇ ಸುಮಾರು 4ಸಾವಿರ ಕೋಟಿ ಬಂಡವಾಳ ಹೂಡಲಾಗಿದೆ. ಪ್ರಮುಖ ಕೈಗಾರಿಕೆ ಕಂಪನಿಗಳಾದ ಏಶಿಯನ್ ಪೇಂಟ್ ಕಾರ್ಖಾನೆ ನಂಜನಗೂಡಿನಲ್ಲಿ 2500 ಕೋಟಿ ರೂ. ಬಂಡವಾಳ ಹೂಡಿ ಕೆಲಸ ನಡೆಯುತ್ತಿದೆ, ಇನ್ನು ಆರು ತಿಂಗಳಲ್ಲಿ ಕಾರ್ಖಾನೆ ಪ್ರಾರಂಭವಾಗಲಿದೆ ಎಂದರು.
ಅದೇ ರೀತಿ ಕಾಲ್ರ್ಸ್ ಬರ್ಗ್ 130 ಕೋಟಿ ರೂ. ಪೆಪ್ಸಿ ಕೋಲಾ 150 ಕೋಟಿ.ರೂ, ಚೀರಾ ಬ್ರೀವರೀಸ್ 100 ಕೋಟಿ ರೂ, ಕೆನ್ ವುಡ್ಸ್ 500 ಕೋಟಿ ರೂ, ಕಂಟೇನರ್ ಕಾರ್ಪೋರೇಷನ್ ಆಫ್ ಇಂಡಿಯಾ 200 ಕೋಟಿ ರೂ, ಪಾರ್ಲೆ ಇಂಡಸ್ಟ್ರೀಸ್ 600 ಕೋಟಿ ರೂ, ರುಚ ಇಂಜಿನಿಯರಿಂಗ್ 137 ಕೋಟಿ ರೂ, ಮಿಂಡಾಸ್ ಸಾಯಿ 16 ಕೋಟಿ ರೂ, ಮೆಟಲ್ ಮ್ಯಾನ್ ಆಟೋ ಪ್ರೈ ಲಿ. 96.75 ಕೋಟಿ ರೂ ಬಂಡವಾಳ ಹೂಡಿ ಕೆಲಸ ಪ್ರಗತಿಯಲ್ಲಿದೆ ಎಂದು ಹೇಳಿದರು.
ಫಾಲ್ಕನ್ ಟೈರ್ಸ್ ಆರಂಭಕ್ಕೆ ಕ್ರಮ: ಫಾಲ್ಕನ್ ಟೈರ್ಸ್ ಫ್ಯಾಕ್ಟರಿ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಕಾರ್ಖಾನೆ ಪುನರಾರಂಭಕ್ಕೆ ಮತ್ತೊಂದು ಬ್ಯಾಂಕ್ ಸಾಲ ನೀಡಲು ಮುಂದೆ ಬರಬೇಕು. ಹಳೆ ಮಾಲಿಕ, ಹೊಸ ಮಾಲೀಕರ ನಿಯಮಗಳ ಬಗ್ಗೆ ಚರ್ಚೆ ನಡೆಯಬೇಕಿದೆ. ಕಾರ್ಖಾನೆ ಮತ್ತೆ ಆರಂಭಕ್ಕೆ ಕಾರ್ಮಿಕ ಇಲಾಖೆ ಅಧಿಕಾರಿಗಳು ಪ್ರಯತ್ನ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಸಭೆಯಲ್ಲಿ ಸಚಿವರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಶಾಸಕರಾದ ಯತೀಂದ್ರ ಸಿದ್ದರಾಮಯ್ಯ, ತನ್ವೀರ್ ಸೇಠ್, ಎಲ್.ನಾಗೇಂದ್ರ, ಹರ್ಷವರ್ಧನ್, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಸೇರಿದಂತೆ ಹಲವು ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಮಿಕರ ಭದ್ರತೆ ದೃಷ್ಟಿಯಿಂದ ಕೈಗಾರಿಕೆಗಳ ನಿಯಂತ್ರಣ
ಅಲ್ಪ ಅವಧಿಯಲ್ಲೇ ಕೈಗಾರಿಕೆಗಳನ್ನು ಮುಚ್ಚಿ ಕಾರ್ಮಿಕರಿಗೆ ಅಭದ್ರತೆ ಉಂಟು ಮಾಡುವ ಕೈಗಾರಿಕೆಗಳ ನಿಯಂತ್ರಣಕ್ಕೆ ಕೈಗಾರಿಕಾ ನೀತಿಯನ್ನು ಪುನರ್ ಪರಿಶೀಲಿಸಿ ಹೊಸ ಮಾರ್ಪಾಮಾಡುವುದಾಗಿ ಕೆ.ಜೆ.ಜಾರ್ಜ್ ಹೇಳಿದರು.
ಕೆಲವರು ಕೈಗಾರಿಕೆಗಳನ್ನು ಕೆಲವು ವರ್ಷಗಳಷ್ಟೆ ನಡೆಸಿ ನಂತರ ಏಕಾ ಏಕಿ ಮುಚ್ಚಿಕೊಂಡು ಹೋಗುತ್ತಾರೆ. ಅಂತಹ ಕಂಪನಿಯಗಳನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಹಿಂದೆ ಕನಿಷ್ಟ 15 ವರ್ಷವಾದರೂ ಕಾರ್ಖಾನೆಗಳನ್ನು ಮುಂದುವರೆಸಬೇಕು ಎಂಬ ನೀತಿಯನ್ನು ತರಲಾಗಿತ್ತು. ಅದನ್ನು ಪುನರ್ ಪರಿಶೀಲಿಸಿ ಮತ್ತಷ್ಟು ಬಲಿಷ್ಟಗೊಳಿಸಿ ಕಾರ್ಮಿಕರಿಗೆ ಭದ್ರತೆ ಒದಗಿಸಿಕೊಡಲು ಮುಂದಾಗುವುದಾಗಿ ತಿಳಿಸಿದರು.
ಮೈಸೂರಿನಲ್ಲೂ ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡಿ: ಶಾಸಕ ಹರ್ಷವರ್ಧನ್ ಮನವಿ
ಬಂಡವಾಳ ಹೂಡಿಕೆದಾರರ ಸಮಾವೇಶ ಬೆಂಗಳೂರಿಗಷ್ಟೇ ಸೀಮಿತವಾಗುತ್ತಿದ್ದು, ಈ ಬಾರಿ ಮೈಸೂರಿಗೆ ವಿಸ್ತರಿಸಿ ಎಂದು ಶಾಸಕ ಹರ್ಷವರ್ಧನ್ ಮನವಿ ಮಾಡಿದರು.
ಸಚಿವ ಜಾರ್ಜ್ ಪತ್ರಿಕಾಗೋಷ್ಠಿ ನಡೆಸುತ್ತಿದ್ದ ವೇಳೆ ಬಂಡವಾಳ ಹೂಡಿಕೆದಾರರ ವಿಚಾರ ಪ್ರಸ್ತಾಪವಾದಾಗ ಈ ಮೇಲಿನಂತೆ ಹೇಳಿದರು.
ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಬೆಂಗಳೂರಿಗಷ್ಟೇ ಕೇಂದ್ರಿಕರಣ ಮಾಡಲಾಗುತ್ತಿದೆ. ಬೆಂಗಳೂರು ಬಿಟ್ಟರೆ ಮೈಸೂರು ಅತೀ ಹೆಚ್ಚು ಕಾರ್ಖಾನೆಗಳನ್ನು ಹೊಂದಿದೆ. ಮೈಸೂರಿನಲ್ಲಿ ಮತ್ತಷ್ಟು ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜನ ನೀಡುವ ದೃಷ್ಟಿಯಿಂದ ಒಮ್ಮೆಯಾದರೂ ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡುವ ಅಗತ್ಯವಿದೆ ಎಂದರು.
ಇದಕ್ಕೆ ಸ್ಪಂಧಿಸಿದ ಸಚಿವ ಜಾರ್ಜ್ ಬೆಂಗಳೂರು ಎಲ್ಲಾ ರೀತಿಯಲ್ಲೂ ಅನುಕೂಲವನ್ನು ಹೊಂದಿದೆ. ಅಲ್ಲಿ ಸಮಾವೇಶ ಮಾಡಿದರೆ ಬೆಂಗಳೂರಿಗಷ್ಟೇ ಸೀಮಿತವಾಗುವುದಿಲ್ಲ. ಆದರೂ ನಿಮ್ಮ ಮನವಿಯನ್ನು ಪರಿಗಣಿಸಿ ಮುಂದೆ ಮೈಸೂರಿನಲ್ಲಿ ಮಾಡುವುದಾಗಿ ಹೇಳಿದರು.







