ಕೆಥೊಲಿಕ್ ಯುವ ಸಂಚಾಲನದ ಉಡುಪಿ ವಲಯ ಸಮಾವೇಶ

ಉಡುಪಿ, ಜು.24: ಭಾರತೀಯ ಕೆಥೊಲಿಕ್ ಯುವ ಸಂಚಾಲನ ಉದ್ಯಾ ವರ ಘಟಕದ ಆಶ್ರಯದಲ್ಲಿ ಉಡುಪಿ ವಲಯ ಮಟ್ಟದ ಸಮಾವೇಶವನ್ನು ರವಿವಾರ ಉದ್ಯಾವರ ಸಂತ ಫ್ರಾನ್ಸಿಸ್ ಝೇವಿಯರ್ ಚರ್ಚಿನ ಸಭಾಂಗಣ ದಲ್ಲಿ ಆಯೋಜಿಸಲಾಗಿತ್ತು.
ಸಮಾವೇಶವನ್ನು ಉದ್ಘಾಟಿಸಿದ ಸಂತ ಫ್ರಾನ್ಸಿಸ್ ಝೇವಿಯರ್ ಚರ್ಚಿನ ಪ್ರಧಾನ ಧರ್ಮಗುರು ವಂ.ಸ್ಟ್ಯಾನಿ ಬಿ.ಲೋಬೊ ಮಾತನಾಡಿ, ಯುವ ಜನತೆ ತಮಗೆ ಲಭಿಸಿದ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವುದರ ಜೊತೆಗೆ ಸಮಾಜದಲ್ಲಿ ಅಭಿವೃದ್ಧಿಯನ್ನು ಹೊಂದಬೇಕು ಎಂದು ಹೇಳಿದರು.
ಕ್ರೈಸ್ತರ ನಾಯಕತ್ವದ ಕುರಿತು ವಿಚಾರ ಮಂಡಿಸಿದ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲ ಡಾ.ವಿನ್ಸೆಂಟ್ ಆಳ್ವ, ಕ್ರೈಸ್ತ ಯುವ ಜನತೆ ಸಮಾಜ ದಲ್ಲಿ ಪ್ರಸ್ತುತ ನಡೆಯುತ್ತಿರುವ ಪ್ರಚಲಿತ ವಿದ್ಯಮಾನಗಳನ್ನು ಗಂಭೀರವಾಗಿ ಪರಿಗಣಿಸಿ ಅಸಮಾನತೆಯ ವಿರುದ್ದ ದನಿ ಎತ್ತುವ ಕೆಲಸ ಮಾಡಬೇಕು. ಅದರೊಂದಿಗೆ ಭಾರತವನ್ನು ಒಂದು ಜಾತ್ಯಾತೀತ ಮತ್ತು ಸುರಕ್ಷಿತ ರಾಷ್ಟ್ರವಾಗಿ ಕಟ್ಟುವಲ್ಲಿ ತಮ್ಮ ಕೊಡುಗೆ ನೀಡಬೇಕು ಎಂದರು.
ಉಡುಪಿ ವಲಯದ 9 ಘಟಕಗಳ ಯುವಜನತೆ ವಿವಿಧ ವಿಷಯಗಳನ್ನು ಆಧರಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ಸಂಜೆ ನಡೆದ ಸಮಾ ರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ನೀಡಲಾಯಿತು. ಉದ್ಯಾವರ ಘಟಕ ಪ್ರಥಮ, ಕಟಪಾಡಿ ಘಟಕ ಪ್ರಥಮ ರನ್ನರ್ ಅಪ್ ಮತ್ತು ಮೂಡುಬೆಳ್ಳೆ ಘಟಕ ದ್ವಿತೀಯ ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿತು.
ಕಾರ್ಯಕ್ರಮದಲ್ಲಿ ಐಸಿವೈಎಂ ಉಡುಪಿ ಧರ್ಮಪ್ರಾಂತದ ನಿರ್ದೇಶಕ ವಂ. ಎಡ್ವಿನ್ ಡಿಸೋಜ, ಉಡುಪಿ ವಲಯ ಧರ್ಮಗುರು ವಂ.ವಲೇರಿಯನ್ ಮೆಂಡೊನ್ಸಾ, ವಲಯ ಯುವ ನಿರ್ದೇಶಕ ವಂ.ಲೋರೆನ್ಸ್ ಕುಟಿನ್ಹಾ, ಇತರ ಧರ್ಮಗುರುಗಳಾದ ವಂ.ರೊಲ್ವಿನ್ ಆರಾನ್ಹಾ, ವಂ.ಅನಿಲ್ ಡಿಸೋಜ, ವಂ. ವಿಲ್ಸನ್ ಡಿಸೋಜ, ವಂ.ರೊನ್ಸನ್ ಡಿಸೋಜ, ವಂ.ವಿಜಯ್ ಡಿಸೋಜ, ಉಡುಪಿ ಧರ್ಮಪ್ರಾಂತ್ಯದ ಐಸಿವೈಎಂ ಅಧ್ಯಕ್ಷ ಡಿಯೋನ್ ಡಿಸೋಜ, ಉದ್ಯಾವರ ಘಟನದ ಸಲಹೆಗಾರ ರಿತೇಶ್ ಡಿಸೋಜ, ಉದ್ಯಾವರ ಚರ್ಚ್ ಪಾಲನಾ ಸಮಿತಿ ಕಾರ್ಯದರ್ಶಿ ಮೈಕಲ್ ಡಿಸೋಜ, ವಲಯ ಅಧ್ಯಕ್ಷ ವಿಲ್ಟನ್ ಡಿಸೋಜ, ಕಾರ್ಯದರ್ಶಿ ಫಿಯೋನಾ ಡಿಸೋಜ, ಘಟಕದ ಅಧ್ಯಕ್ಷ ಡೆಲನ್ ಆರೋಜಾ, ಕಾರ್ಯದರ್ಶಿ ಮೆಲಿಸಾ ದಾಂತಿ, ದಾನಿಗಳಾದ ರಾಜೇಶ್ ಫೆರ್ನಾಂಡಿಸ್, ಎರಿಕ್ ಮಿನೇಜಸ್ ಉಪಸ್ಥಿತರಿದ್ದರು.







