ಆಳ್ವಾಸ್ ಕಾಲೇಜಿನಲ್ಲಿ ಪತ್ರಿಕೋದ್ಯಮ ದಿನಾಚರಣೆ

ಮೂಡುಬಿದಿರೆ, ಜು. 24: "ಪತ್ರಿಕೋದ್ಯಮದ ಅಸ್ಮಿತೆಯು ಮುದ್ರಣಾ ಮಾದ್ಯಮದಲ್ಲಿ ಅಡಗಿದ್ದು, ಪತ್ರಿಕೋದ್ಯಮದ ವಿದ್ಯಾರ್ಥಿಗಳು ತಮ್ಮ ವೃತ್ತಿ ಜೀವನ ವನ್ನು ಮುದ್ರಣಾ ಮಾದ್ಯಮದಲ್ಲಿ ಪ್ರಾರಂಭಿಸಿದರೆ, ಮಾಧ್ಯಮ ಲೋಕದಲ್ಲಿ ಉನ್ನತ ಸ್ಥಾನವನ್ನು ಏರಬಹುದು ಎಂದು ವಿಜಯ ಕರ್ನಾಟಕ ಪತ್ರಿಕೆಯ ಮಂಗಳೂರು ಸ್ಥಾನಿಕ ಸಂಪಾದಕರಾದ ಯು.ಕೆ. ಕುಮಾರನಾಥ್ ತಿಳಿಸಿದರು.
ಮಂಗಳವಾರ ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವತಿಯಿಂದ, ಕುವೆಂಪು ಸಭಾಭವನದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ’ ಕಾರ್ಯ ಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದಿಟ್ಟತನ ಹಾಗೂ ನೇರವಂತಿಕೆ ಪತ್ರಕರ್ತರಿಗೆ ಇರಬೇಕಾದ ಪ್ರಮುಖ ಗುಣಗಳಾಗಿದ್ದು, ಹೊಸತನದ ಆಳವಡಿಕೆ ಪ್ರತಿ ಹಂತದಲ್ಲೂ ಅಗತ್ಯವಿದೆ. ನವಮಾದ್ಯಮಗಳ ಅನ್ವೇಷಣೆಯಿಂದ ಪತ್ರಿಕೋದ್ಯಮ ಎಂಬ ಕ್ಷೇತ್ರ ವಿಸ್ತಾರವಾಗಿ ’’ಮಾದ್ಯಮ’’ ಎಂಬ ಹೆಸರಿನಿಂದ, ವಿಫುಲ ಅವಕಾಶಗಳಿಗೆ ರಹದಾರಿ ಮಾಡಿಕೊಟ್ಟಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಸ್ವಸ್ಥ ಸಮಾಜದ ನಿರ್ಮಾಣದಲ್ಲಿ ಮಾದ್ಯಮಗಳ ಪಾತ್ರ ಬಹುಮುಖ್ಯವಾಗಿದ್ದು,ಪತ್ರಕರ್ತರು ರಚನಾತ್ಮಕ ಬರವಣಿಗೆಯ ಮೂಲಕ ಸುಸ್ಥಿರ ಸಮಾಜ ನಿರ್ಮಿಸಲು ಶ್ರಮಿಸಬೇಕು ಎಂದರು. ಮಾಧ್ಯಮ ಜನರ ಮನಸ್ಸನ್ನು ಕಟ್ಟುವ ಕೆಲಸಮಾಡಬೇಕೇ ಹೊರತು, ಮನಸ್ಸನ್ನು ಒಡೆಯುವ, ಸಮಾಜದಲ್ಲಿ ಅಶಾಂತಿಯನ್ನು ನಿರ್ಮಿಸುವ ಕೆಲಸದಲ್ಲಿ ತೊಡಗಬಾರದು ಎಂದರು.
ವಿದ್ಯಾರ್ಥಿಗಳ ಪ್ರಾಯೋಗಿಕ ಪತ್ರಿಕೆಗಳಾದ ಆಳ್ವಾಸ್ ಮಿರರ್, ಆಳ್ವಾಸ್ ಮಾದ್ಯಮ, ಬಿತ್ತಿ ಪತ್ರಿಕೆ ಸುದ್ದಿಮನೆ ಇದೇ ಸಂದರ್ಭದಲ್ಲಿ ಬಿಡುಗಡೆ ಗೊಳಿಸಲಾಯಿತು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಕುರಿಯನ್, ಮೂಡಬಿದಿರೆ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜೈಸನ್ ತಾಕೋಡೆ, ಮಾನವಿಕ ವಿಭಾಗದ ಮುಖ್ಯಸ್ಥೆ ಸಂಧ್ಯಾ ಕೆ.ಎಸ್ ಉಪಸ್ಥಿತರಿದ್ದರು.ಪತ್ರಿಕೋದ್ಯಮ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥೆ ಡಾ. ಮೌಲ್ಯ ಜೀವನ್ರಾಮ್ ಸ್ವಾಗತಿಸಿದರು. ಪತ್ರಿಕೋದ್ಯಮ ಪದವಿ ವಿಭಾಗದ ಮುಖ್ಯಸ್ಥೆ ರೇಷ್ಮಾ ಉದಯ್ಕುಮಾರ್ ವಂದಿಸಿದರು. ಪತ್ರಿಕೋದ್ಯಮ ವಿದ್ಯಾರ್ಥಿನಿ ಚೈತಾಲಿ ರೈ ನಿರೂಪಿಸಿದರು.







