ಹಲವು ಇಲಾಖೆಗಳಲ್ಲಿ ಹರಿಜನ, ಗಿರಿಜನ ಪದ ಬಳಕೆ: ದಲಿತ ಮುಖಂಡರ ಆಕ್ಷೇಪ
ಪರಿಶಿಷ್ಟ ಜಾತಿ-ಪಂಗಡ ಕುಂದು ಕೊರತೆ ನಿವಾರಣ ಸಭೆ

ಬಂಟ್ವಾಳ, ಜು. 25: ಕಂದಾಯ ಇಲಾಖೆ ಸೇರಿದಂತೆ ಸರಕಾರದ ವಿವಿಧ ಇಲಾಖೆಗಳಲ್ಲಿ ಈಗಲೂ ನಿಷೇಧಿತ ಹರಿಜನ ಹಾಗೂ ಗಿರಿಜನ ಪದ ಬಳಕೆಗೆ ಬಂಟ್ವಾಳ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಂದು ಕೊರತೆ ನಿವಾರಣ ಸಭೆಯಲ್ಲಿ ದಲಿತ ಮುಖಂಡರು ಖಂಡಿಸಿ, ಆಕ್ಷೇಪ ವ್ಯಕ್ತಪಡಿಸಿದರು.
ಈ ಬಗ್ಗೆ ಪ್ರಸ್ತಾಪಿಸಿದ ದಲಿತ ಮುಖಂಡ ಹೊನ್ನಪ್ಪ ಕುಂದರ್ ಅವರು, ಆಕಾಶವಾಣಿಯ ಕಾರ್ಯಕ್ರಮದಲ್ಲಿ ನ್ಯಾಯಧೀಶರೊಬ್ಬರು ಈ ರೀತಿಯ ಪದ ಬಳಕೆ ಮಾಡಿದ್ದಾರೆ. ಇದು ಅಸ್ಪ್ರಶ್ಯತೆಯ ಇನ್ನೊಂದು ಮುಖವಾಗಿದ್ದು, ಸಂವಿಧಾನ ಬಾಹಿರವಾಗಿದೆ. ಅಲ್ಲದೆ ಕಂದಾಯ ಇಲಾಖೆಯ ಪಹಣಿ ಪತ್ರ ಮೊದಲಾದ ದಾಖಲೆಗಳಲ್ಲೂ ಇದೇ ಪದ ಚಾಲ್ತಿಯಲ್ಲಿದೆ. ಈ ಪದ ಬಳಕೆ ಮಾಡದಿರುವ ಬಗ್ಗೆ ಈ ಹಿಂದೆ ಜಿಲ್ಲಾಧಿಕಾರಿ ಅವರು ಆದೇಶ ಹೊರಡಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ವಿಷಾದನೀಯ ಎಂದರು.
ಇದಕ್ಕೆ ತಾಪಂ ಕಾರ್ಯ ನಿರ್ವಹಣಾಧಿಕಾರಿ ರಾಜಣ್ಣ ಅವರು ಪ್ರತಿಕ್ರಿಯಿಸಿ, ಇಲಾಖೆಯ ಕಡತಗಳಲ್ಲಿ ಇದುವರೆಗೆ ಬಳಕೆ ಮಾಡಿರುವ ಪದಗಳ ಬದಲು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಎಂದು ನಮೂದು ಮಾಡುವಂತೆ ಹಾಗೂ ಈ ಬಗ್ಗೆ ಎಲ್ಲ ಇಲಾಖೆಗಳಿಗೆ ಸೂಚಿಸುವಂತೆ ನಿರ್ಣಯ ಕೈಗೊಳ್ಳುವುದಾಗಿ ತಿಳಿಸಿದರು.
ಅಧಿಕ ಶುಲ್ಕ ಸಂಗ್ರಹ ಆರೋಪ
ಬಂಟ್ವಾಳ ಪುರಸಭೆ ಸ್ವಚ್ಛತೆಗಾಗಿ ಪ್ರಶಸ್ತಿ ಪಡೆದುಕೊಂಡಿದ್ದರೂ, ಇಲ್ಲಿ ಸರಿಯಾಗಿ ಕಸವಿಲೇವಾರಿಯಾಗುವುದಿಲ್ಲ. ಗುತ್ತಿಗೆದಾರ ಪ್ರತಿ ತಿಂಗಳು 5 ಲಕ್ಷ ರೂ. ಜೊತೆಗೆ ಮನೆಮನೆಯಿಂದ 30ರಂತೆ ಶುಲ್ಕ ಸಂಗ್ರಹ ಮಾಡಿ ಸರ್ವಾಧಿಕಾರಿಯಂತೆ ವರ್ತಿಸುತ್ತಾನೆ ಎಂದು ದಲಿತ ಮುಖಂಡ ದಿನೇಶ್ ಅಮ್ಟೂರು ಆರೋಪಿಸಿದರು.
ಈ ಬಗ್ಗೆ ಪುರಸಭಾ ಸಮುದಾಯ ಸಂಘಟಕ ಅಧಿಕಾರಿ ಮತ್ತಡಿಯವರು ಸಮಸ್ಯೆಯ ಸೂಕ್ಷತೆಯ ಬಗ್ಗೆ ವಿವರಿಸಿದರು. ಆದರೆ ಇದರಿಂದ ತೃಪ್ತರಾಗದ ದಿನೇಶ್ ಅಮ್ಟೂರು ಸಭೆಗೆ ಮುಖ್ಯಾಧಿಕಾರಿ ಬಾರದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ತನ್ನ ಸ್ಥಾನದಿಂದ ಸಭಾಧ್ಯಕ್ಷರ ಬಳಿಗೆ ತೆರಳಿದ ಅವರು ಬಂಟ್ವಾಳ ಪುರಸಭೆಯಲ್ಲಿ ಸಾಕಷ್ಟು ಅವ್ಯವಹಾಗಳು ನಡೆಯುತ್ತಿವೆ. ಪುರಸಭೆಗೆ ಸಂಬಂಧಪಟ್ಟ ಸಾಕಷ್ಟು ಸಮಸ್ಯೆಗಳನ್ನು ಚರ್ಚಿಸಲು ಇದೆ. ಆದರೆ ಮೂರು ತಿಂಗಳಿಗೊಮ್ಮೆ ನಡೆಯುವ ಸಭೆಗೆ ಮುಖ್ಯಾಧಿಕಾರಿ ಬಾರದೆ ಕೆಳ ಅಧಿಕಾರಿಗಳನ್ನು ಕಳುಹಿಸುವುದು ಸರಿಯಲ್ಲ ಎಂದು ಅಸಮಾಧಾನ ತೋಡಿಕೊಂಡರು.
ಅಮ್ಟೂರು ಗ್ರಾಮದ ಶಾಂತಿಪಳಿಕೆ ಎಂಬಲ್ಲಿ ಪ.ಜಾತಿ. ಪ.ಪಂಗಡವರ ಕಾಲನಿಗೆ ಸಂಪರ್ಕಿಸುವ ರಸ್ತೆಯನ್ನು ಖಾಸಗಿ ವ್ಯಕ್ತಿ ಅತಿಕ್ರಮಿಸಿದ್ದು, ಅದನ್ನು ಶೀಘ್ರ ತೆರವುಗೊಳಿಸುವಂತೆ ದಿನೇಶ್ ಅಮ್ಟೂರು ಆಗ್ರಹಿಸಿದರು. ಪರಾರಿ ದಲಿತಕಾಲನಿಗೆ ಇನ್ನೂ ರಸ್ತೆ ನಿರ್ಮಾಣವಾಗದಿರುವ ಬಗ್ಗೆ ಗಂಗಾಧರ ಕೋಟ್ಯಾನ್ ಆಕ್ರೋಶ ವ್ಯಕ್ತಪಡಿಸಿದರು.
ಕಚೇರಿ ಅವಧಿಯಲ್ಲಿ ಸಂಚಾರಿ ಆರೋಗ್ಯ ಘಟಕದ ಬಾಗಿಲು ಬಂದ್
ಬಿ.ಸಿ.ರೋಡಿನಲ್ಲಿರುವ ಸಂಚಾರಿ ಆರೋಗ್ಯ ಘಟಕದ ಗ್ರೂಪ್ ಡಿ ನೌಕರ ಕೇಶವ ಎಂಬವರು ಕಚೇರಿ ಅವಧಿಯಲ್ಲಿ ಇಲ್ಲದಿರುವುದು ಹಾಗೂ ಕಚೇರಿ ಅವಧಿಯಲ್ಲಿ ಬಾಗಿಲುಗಳನ್ನು ಹಾಕಿರುವುದು ಕಂಡು ಬಂದಿದೆ. ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತದೆ ಎಂದು ದಲಿತ ಮುಖಂಡ ವಿಶ್ವನಾಥ ಚೆಂಡ್ತಿಮಾರ್ ಸಭೆಯ ಗಮನಸೆಳೆದರು.
ಇದಕ್ಕೆ ಆರೋಗ್ಯ ಅಧಿಕಾರಿ ಡಾ.ದೀಪಾಪ್ರಭು ಅವರು ಪ್ರತಿಕ್ರಿಯಿಸಿ, ಈ ಬಗ್ಗೆ ತಮ್ಮ ಗಮನಕ್ಕೂ ಬಂದಿದ್ದು, ನೌಕರ ಕೇಶವ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಇಲಾಖೆಗೆ ಮಾಹಿತಿ ನೀಡಲಾಗಿದೆ. ಅಲ್ಲದೇ, ಅವರ ವಿರುದ್ಧ ಮೂರು ಸಲ ನೋಟೀಸು ಜಾರಿ ಮಾಡಲಾಗಿದೆ. ಇದೀಗ ಕರ್ತವ್ಯ ಲೋಪದ ಬಗ್ಗೆ ಇಲಾಖಾ ವಿಚಾರಣಾ ಪ್ರಕ್ರಿಯೆ ನಡೆಯುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಬಿ.ಸಿ.ರೋಡ್ನಿಂದ ಸರಪಾಡಿ, ಬಿಯಾಪಾದೆ, ವಾಮದಪದವು ಮುಂತಾದ ಕಡೆಗೆ ತೆರಳುವ ಸರಕಾರಿ ಬಸ್ಗಳು ಬಂಟ್ವಾಳದ ಬಡ್ಡಕಟ್ಟೆಯಲ್ಲಿ ಒಂದು ನಿಮಿಷ ಮಾತ್ರ ನಿಲ್ಲುತ್ತಿದೆ. ಈ ಬಗ್ಗೆ ಗಮನ ಹರಿಸಿ ಕನಿಷ್ಠ 5 ನಿಮಿಷವಾದರೂ ಬಸ್ ನಿಲ್ಲಿಸುವಂತೆ ವಿಶ್ವನಾಥ ಚೆಂಡ್ತಿಮಾರ್ ಮನವಿ ಮಾಡಿದರು.
ಇದಕ್ಕೆ ಟ್ರಾಫಿಕ್ ಎಸ್ಸೈ ಯಲ್ಲಪ್ಪ ಅವರು ಪ್ರತಿಕ್ರಿಯಿಸಿ, ಬಂಟ್ವಾಳ ಬಡ್ಡಕಟ್ಟೆಯು ಜನನಿಬಿಡ ಪ್ರದೇಶವಾಗಿದ್ದು, ಬಸ್ಗಳು 5 ನಿಮಿಷ ನಿಲ್ಲಿಸಿದಾಗ ಟ್ರಾಫಿಕ್ ಸಮಸ್ಯೆ ಉಂಟಾಗುತ್ತದೆ. ಇದನ್ನು ಸರಿಪಡಿಸಲು ಸುಮಾರು ಒಂದು ತಾಸಾದರೂ ಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.
ಶಾಲಾ ಮಕ್ಕಳಿಗೆ ಸರಕಾರದಿಂದ ಸಿಗುವ ಸವಲತ್ತುಗಳನ್ನು ಶಾಲಾ ಆರಂಭದಲ್ಲಿ ನೀಡಿ ಇಲ್ಲದಿದ್ದರೆ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗುತ್ತದೆ. ಜೊತೆಗೆ ಜವಬ್ದಾರಿ ಸ್ಥಾನವನ್ನು ಅಲಂಕರಿಸಿದ ಶಿಕ್ಷಣ ಸಚಿವರ ನೋಡಿ ಬರೆಯುವ ಹೊಸ ಚಿಂತನೆ ಸರಿಯಲ್ಲ. ಇದರಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುವುದಿಲ್ಲ. ಇದನ್ನು ನಾನು ಖಂಡಿಸುತ್ತೇನೆ ಎಂದು ದಿನೇಶ್ ಅಮ್ಟೂರು ಹೇಳಿದರು.
ಪರಿಶಿಷ್ಟ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಸಿಗುತ್ತಿಲ್ಲ. ವಾಮದಪದವಿನಲ್ಲಿ ಶೌಚಾಲಯದ ವ್ಯವಸ್ಥೆ ಇಲ್ಲದೆ ಸಾರ್ವಜನಿಕರಿಗೆ ಬಹಳ ತೊಂದರೆ ಅಗುತ್ತಿದೆ. ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದೆ ಸೊರಗುತ್ತಿದೆ. ಮಿನಿ ವಿಧಾನಸೌಧದಲ್ಲಿ ಶೌಚಲಾಯ ಸ್ವಚ್ಛತೆ ಇಲ್ಲದೆ ಬಳಕೆದಾರರು ತೊಂದರೆ ಅನುಭವಿಸಬೇಕಾಗಿದೆ ಎನ್ನುವ ದೂರುಗಳು ಸಭೆಯಲ್ಲಿ ಕೇಳಿ ಬಂತು.
ಮುದ್ರಾ ಯೋಜನೆಯಂತಹ ಬ್ಯಾಂಕ್ ಸಾಲ ಸೌಲಭ್ಯ ಯೋಜನೆಯನ್ನು ಕೇಂದ್ರ ಸರಕಾರ ಜಾರಿಗೊಳಿಸಿದರೂ ಬ್ಯಾಂಕ್ ಅಧಿಕಾರಿಗಳಿಂದ ಸರಿಯಾದ ಸ್ಪಂದನೆ ಇಲ್ಲದೆ ಇರುವುದರಿಂದ ಜನರಿಗೆ ಪ್ರಯೋಜನವಾಗುತ್ತಿಲ್ಲ ಎನ್ನುವ ಆರೋಪ ವ್ಯಕ್ತವಾಯಿತು.
ಅಂಬೇಡ್ಕರ್ ಅಭಿವೃದ್ದಿ ನಿಗಮದಡಿ ಕೊಳವೆ ಬಾವಿ ನಿರ್ಮಾಣಗೊಳ್ಳದಿರುವ ಬಗ್ಗೆ ಇಲಾಖಾ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ತಹಶೀಲ್ದಾರ್ ಪುರಂದರ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯನಿರ್ವಾಣಾಧಿಕಾರಿ ರಾಜಣ್ಣ, ಸಮಾಜ ಕಲ್ಯಾಣಾಧಿಕಾರಿ ಮೋಹನ್, ಪ್ರಸಾದ್ ಉಪಸ್ಥಿತರಿದ್ದರು. ದಲಿತ ಮುಖಂಡರಾದ ವಿಶ್ವನಾಥ ಚೆಂಡ್ತಿಮಾರ್, ಸತೀಶ್ ಅರಳ, ಹೊನ್ನಪ್ಪ ಕುಂದರ್, ನಾರಾಯಣ ಪುಂಚಮೆ, ಗಂಗಾಧರ ಪರಾರಿ, ಬೇಬಿ ಮೈರನ ಪಾದೆ, ರಾಜಪಲ್ಲಮಜಲು, ಸೇಸಪ್ಪ ಬೆದ್ರಕಾಡು, ಕೇಶವ ನಾಯ್ಕಿ ಚರ್ಚೆಯಲ್ಲಿ ಪಾಲ್ಗೊಂಡರು.