ಕನ್ನಡ ಸಾಹಿತ್ಯ ಪರಿಷತ್: ಇಸ್ರೋ ಮಾಜಿ ಅಧ್ಯಕ್ಷ ಡಾ.ಕಿರಣ್ಕುಮಾರ್ ಜೊತೆ ಸಂವಾದ ಕಾರ್ಯಕ್ರಮ
ಬೆಂಗಳೂರು, ಜು.25: ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಜು.28ರಂದು ಸಂಜೆ 5.30ಕ್ಕೆ ಆಯೋಜಿಸಿರುವ ಸಾಧಕರೊಡನೆ ಸಂವಾದ ಕಾರ್ಯಕ್ರಮದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯ ಮಾಜಿ ಅಧ್ಯಕ್ಷ ಡಾ.ಎ.ಎಸ್.ಕಿರಣ್ಕುಮಾರ್ ಭಾಗವಹಿಸಲಿದ್ದಾರೆ.
ಇನ್ಸಾಟ್ -3ಡಿ, ಮೈಕ್ರೋ ಸ್ಯಾಟಲೈಟ್, ಭೂ ಪ್ರದೇಶ ಮಾಪನಾ ಕ್ಯಾಮರಾ ತಂತ್ರಜ್ಞಾನ ಕ್ಷೇತ್ರದಲ್ಲಿ ಕಿರಣ್ಕುಮಾರ್ ಅವರ ಕೊಡುಗೆ ಅಪಾರ. ಚಂದ್ರಯಾನ ಮತ್ತು ಮಂಗಳಯಾನದ ಯೋಜನೆಯನ್ನು ಬಹುಮುಖ್ಯವಾದ ಪಾತ್ರ ವಹಿಸಿದ್ದಾರೆ. ಮುಖ್ಯವಾಗಿ ಮಂಗಳಯಾನಕ್ಕೆ ಸಂಬಂಧಿಸಿದ ಅನೇಕ ಉಪಕರಣ ತಯಾರಿಕೆ ಮೇಲ್ವಿಚಾರಣೆಯನ್ನು ನಿರ್ವಹಿಸಿದ್ದಾರೆ.
ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿದ ಇವರ ಲೇಖನಗಳು, ಪ್ರಬಂಧಗಳು ಅಂತಾರಾಷ್ಟ್ರೀಯ ಮಟ್ಟದ ಪತ್ರಿಕೆಗಳು, ವಿಚಾರ ಸಂಕಿರಣಗಳಲ್ಲಿ ಪ್ರಕಟನೆಗೊಂಡಿವೆ. ಇವರಿಗೆ ಪದ್ಮಶ್ರೀ, ರಾಜ್ಯೋತ್ಸವ, ಸರ್.ಎಂ.ವಿ, ಗುಜರಾತ್ ಇನೋವೇಷನ್ ಸೊಸೈಟಿಯ ಗುಜರಾತ್ ರತ್ನ ಪ್ರಶಸ್ತಿ ಹಾಗೂ ಹಲವಾರು ಪ್ರತಿಷ್ಠಿತ ವಿವಿಗಳಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ ಸಿಕ್ಕಿವೆ. ಇಂತಹ ಸಾಧಕರೊಂದಿಗೆ ಜು.28ರಂದು ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಕಸಾಪ ಅಧ್ಯಕ್ಷ ಮನು ಬಳಿಗಾರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.