ಮಂಗಳೂರು ವಿವಿ ಹಗರಣ ಬಯಲಿಗೆಯಲು ಎಬಿವಿಯಿಂದ ಆಂದೋಲನ
ಮಂಗಳೂರು, ಜು.25: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಡೆದ ಹಲವು ಹಗರಣಗಳಿಂದ ವಿಶ್ವವಿದ್ಯಾನಿಲಯಕ್ಕೆ ಕೆಟ್ಟ ಹೆಸರು ಬರುತ್ತಿದೆ. ಈ ಹಿನ್ನಲೆಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ‘ಮಂಗಳೂರು ವಿವಿ ಉಳಿಸಿ’ ಅಭಿಯಾನವನ್ನು ಹಮ್ಮಿಕೊಳ್ಳಲಿದೆ ಎಂದು ಎಬಿವಿಪಿ ರಾಜ್ಯ ಕಾರ್ಯದರ್ಶಿ ಹರ್ಷ ನಾರಾಯಣ ತಿಳಿಸಿದ್ದಾರೆ.
ನಗರದ ಪ್ರೆಸ್ಕ್ಲಬ್ನಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು ವಿವಿಯ ಎಲ್ಲಾ ಹಗರಣಗಳ ಕುರಿತು ನಿಷ್ಪಕ್ಷಪಾತವಾದ ತನಿಖೆ ನಡೆಸಬೇಕು. ರಾಜ್ಯಪಾಲರು ಉನ್ನತ ಮಟ್ಟದ ಸಮಿತಿಯನ್ನು ರಚಿಸುವ ಮೂಲಕ ಶೀಘ್ರ ಸತ್ಯಾಂಶ ಹೊರತರಬೇಕು. ಹಗರಣದಲ್ಲಿ ಭಾಗಿಯಾದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಹಗರಣಗಳಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಜರಗಿಸುವ ಮೂಲಕ ರಾಜ್ಯಪಾಲರು ವಿಶ್ವವಿದ್ಯಾನಿಲಯದ ಘನತೆಯನ್ನು ಉಳಿಸಬೇಕು. ಎಲ್ಲಾ ಪ್ರಕರಣಗಳ ತನಿಖೆ ನಡೆಸಬೇಕು. ವಿಶ್ವವಿದ್ಯಾನಿಲಯಕ್ಕೆ ಹಗರಣದ ಕಳಂಕ ಶೋಭೆಯಲ್ಲ ಎಂದು ಹರ್ಷ ನಾರಾಯಣ ತಿಳಿದರು.
ಹೊರಗುತ್ತಿಗೆ ಅಕ್ರಮಗಳ ಸರಮಾಲೆ: ಮಂಗಳೂರು ವಿವಿಯ ಕುಲಪತಿ ಪ್ರೊ. ಕೆ.ಭೈರಪ್ಪ ತಮ್ಮ ಜಾತಿ ಬಾಂಧವರೆಂದು ಹೇಳಲಾದ ಬಾಲಕೃಷ್ಣ ನಿಂಗೇಗೌಡರ ಮಾಲಕತ್ವದ ಕ್ಯಾನನ್ ಸೆಕ್ಯೂರಿಟಿ ಸರ್ವಿಸಸ್ಗೆ ಸತತ ಮೂರು ಬಾರಿ ಆದೇಶ ನೀಡಿ ಅಕ್ರಮ ಎಸಗಿದ್ದಾರೆ ಎಂಬ ಆರೋಪವಿದ್ದು, ಈ ಬಗ್ಗೆ ತನಿಖೆ ನಡೆಸಬೇಕು. ಈ ಸಂಸ್ಥೆಯವರು ಕಾರ್ಮಿಕ ಕಾಯ್ದೆಯ ಅನ್ವಯ ಸಿಬ್ಬಂದಿಗಳಿಗೆ ಅನ್ಯಾಯ ಮಾಡಿದ್ದಾರೆ ಎನ್ನಲಾಗಿದೆ. ನ್ಯಾಯಕ್ಕಾಗಿ ಹೋರಾಟ ಮಾಡಿದ ಹಲವು ಕಾರ್ಮಿಕರನ್ನು ಸೇವೆಯಿಂದ ವಜಾ ಮಾಡಿದ್ದಲ್ಲದೆ ವಿಶ್ವವಿದ್ಯಾನಿಲದ ಆಡಳಿತ ಸೌಧದ ಮುಂದೆ ನಡೆದ ಹೋರಾಟಗಳನ್ನು ಹತ್ತಿಕ್ಕುವ ಷಡ್ಯಂತರ ನಡೆಸಿದ್ದಾರೆ ಎಂದಯ ಹರ್ಷ ನಾರಾಯಣ ಆರೋಪಿಸಿದರು.
ಲ್ಯಾಪ್ಟಾಪ್ ಹಗರಣ: ಸರಕಾರದ ಆದೇಶದಂತೆ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ನೀಡಲು 2.5 ಕೋ.ರೂ. ಮೊತ್ತದಲ್ಲಿ ಖರೀದಿಸಿದ್ದ ಪ್ರತೀ ಲ್ಯಾಪ್ಟಾಪ್ನ ಮೂಲ ದರ ಅಂದಾಜು 26 ಸಾವಿರ ಇದ್ದರೂ ವಿಶ್ವವಿದ್ಯಾನಿಲಯ ಪ್ರತೀ ಲ್ಯಾಪ್ಟಾಪ್ಗೆ 50 ಸಾವಿರಕ್ಕೂ ಅಧಿಕ ಹಣ ವಿನಿಯೋಗಿಸಿದೆ. ಅಲ್ಲದೆ ಕಳಪೆ ಗುಣಮಟ್ಟದ ಲ್ಯಾಪ್ಟಾಪ್ ಒದಗಿಸಿದೆ. ಇದೊಂದು ದೊಡ್ಡ ಹಗರಣವಾಗಿದ್ದು, ಈ ಕುರಿತು ಸಮಗ್ರ ತನಿಖೆ ಆಗಬೇಕು ಎಂದು ಹರ್ಷನಾರಾಯಣ ಆಗ್ರಹಿಸಿದರು.
ಪರೀಕ್ಷಾ ಗಣಕೀಕರಣದ ಮೌಲ್ಯದ ಬಗ್ಗೆಯೂ ಮೃದು ಧೋರಣೆ ತಳೆದಿರುವುದು ಅನುಮಾನ ಹುಟ್ಟು ಹಾಕಿದೆ. ಕುಲಪತಿಯ ಆಪ್ತವಲಯದ ಸಂಸ್ಥೆಗೆ 2015ನೇ ಸಾಲಿನ ಪರೀಕ್ಷಾ ಗಣಕೀಕರಣದ ಗುತ್ತಿಗೆ ನೀಡಲಾಗಿದೆ. ಈ ಸಂಸ್ಥೆ ಮಾಡಿದ ತಾಂತ್ರಿಕ ಎಡವಟ್ಟಿನಿಂದ ವಿದ್ಯಾರ್ಥಿಗಳು ಸಮಸ್ಯೆಗೆ ಸಿಲುಕಿದ್ದರು. ಆದರೆ ಗುತ್ತಿಗೆಯನ್ನು ರದ್ದುಪಡಿಸಿರಲಿಲ್ಲ. ಅಲ್ಲದೆ ವಿವಿಯಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆಯಲ್ಲೂ ಕೆಟಿಪಿಪಿ ಕಾಯ್ದೆಯನ್ನು ಉಲ್ಲಂಸಲಾಗಿದೆ. ಅನಧಿಕೃತ ಹುದ್ದೆಗಳ ನೇಮಕ ಮತ್ತು ಬೇಕಾಬಿಟ್ಟಿ ಸಂಭಾವನೆ ನೀಡಿ ಸ್ಥಳೀಯರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅನಧಿಕೃತ ತಾತ್ಕಾಲಿಕ ಹುದ್ದೆಗಳನ್ನು ಸೃಷ್ಟಿಸಿ ನಿಯಮಬಾಹಿರ ಸಂಭಾವನೆ ನಿಗದಿ ಮಾಡಿದ್ದು ಯಾರು ಎಂಬುದು ಕೂಡ ಬಯಲಾಗಬೇಕು. ಸೋಲಾರ್ ಬೀದಿದೀಪಗಳ ಅಳವಡಿಕೆಯಲ್ಲೂ ಹಗರಣ ನಡೆದಿರುವ ಸಾಧ್ಯತೆ ಇದೆ ಎಂದು ಹರ್ಷ ನಾರಾಯಣ ಆರೋಪಿಸಿದರು.
ಪರೀಕ್ಷಾ ನೋಂದಾವಣೆಯನ್ನು ಹೊರಗುತ್ತಿಗೆ ನೀಡಿದ ಹಗರಣವೂ ಇಲ್ಲಿ ನಡೆದಿದೆ. ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ವಸತಿನಿಲಯದ ನಿರ್ಮಾಣದಲ್ಲಿ ಅವ್ಯವಹಾರವಾಗಿದೆ. ಓಪನ್ ಹೌಸ್ ಹಗರಣ ಸಹಿತ ವಿವಿಯಲ್ಲಿ ಆದ ಹಲವು ಅಕ್ರಮಗಳ ಸಮಗ್ರ ತನಿಖೆ ಆಗಬೇಕು. ರಾಜ್ಯಪಾಲರು ಈ ನಿಟ್ಟಿನಲ್ಲಿ ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಹರ್ಷನಾರಾಯಣ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಎಬಿವಿಪಿ ಜಿಲ್ಲಾ ಸಂಚಾಲಕ ಸುದೀಪ್ ಶೆಟ್ಟಿ, ನಗರ ಕಾರ್ಯದರ್ಶಿ ರಕ್ಷಿತ್, ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿಕಾಸ್ ಉಪಸ್ಥಿತರಿದ್ದರು.