ಮೂಡುಬಿದಿರೆ: ಹಣಕಾಸಿನ ವಿಚಾರ- ವ್ಯಕ್ತಿಗೆ ಹಲ್ಲೆ, ಬೆದರಿಕೆ
ಮೂಡುಬಿದಿರೆ, ಜು.25: ವ್ಯಕ್ತಿಯೋರ್ವ ಹಣಕಾಸಿನ ವಿಚಾರಕ್ಕೆ ಸಂಬಂಧಪಟ್ಟಂತೆ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ ಘಟನೆ ನಡೆದಿದ್ದು, ಗಾಯಾಳು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಗಂಟಾಲ್ಕಟ್ಟೆಯ ವಿಶ್ವನಾಥ್ ಶೆಟ್ಟಿ ಪ್ರಕರಣದ ಆರೋಪಿ. ಈತ ಅಳಿಯೂರಿನ ವಿಶ್ವನಾಥ್ ಸಾಲ್ಯಾನ್ ಎಂಬವರಿಗೆ ಒಂದು ಲಕ್ಷ ರೂಪಾಯಿ ಹಣವನ್ನು ಬಡ್ಡಿಗೆ ಹಣ ನೀಡಿದ್ದ ಎನ್ನಲಾಗಿದ್ದು, ಪ್ರತಿಯಾಗಿ ವಿಶ್ವನಾಥ್ ಸಾಲ್ಯಾನ್ ಪ್ರತಿ ತಿಂಗಳು ಬಡ್ಡಿ ನೀಡುತ್ತಿದ್ದರು. ಇತ್ತೀಚೆಗೆ ವಿಶ್ವನಾಥ್ ಶೆಟ್ಟಿ, ಸಾಲ್ಯಾನ್ ಬಳಿ ಪೂರ್ತಿ ಹಣ ಹಿಂತಿರುಗಿಸುವಂತೆ ಒತ್ತಾಯಿಸಿದ್ದ ಎನ್ನಲಾಗಿದೆ. ಇದಕ್ಕೆ ವಿಶ್ವನಾಥ್ ಸಾಲ್ಯಾನ್ ತಾನು ಬಡ್ಡಿ ಕಟ್ಟುತ್ತಿದ್ದು ಅವಧಿ ಬಳಿಕ ಹಿಂತಿರುಗಿಸುವುದಾಗಿ ಉತ್ತರಿಸಿದ್ದರೆನ್ನಲಾಗಿದೆ.
ಇತ್ತೀಚೆಗೆ ಮೂಡುಬಿದಿರೆ ಪೇಟೆಯಲ್ಲಿ ಆರೋಪಿ ವಿಶ್ವನಾಥ್ ಸಾಲ್ಯಾನ್ನನ್ನು ತಡೆದು ನಿಲ್ಲಿಸಿ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದು, ಸೋಡಾ ಬಾಟಲಿಯಿಂದ ಹಲ್ಲೆ ನಡೆಸಿದ್ದಾನೆ. ಘಟನೆಯಲ್ಲಿ ಸಾಲ್ಯಾನ್ಗೆ ತೀವ್ರ ಗಾಯಗಳಾಗಿದ್ದು, ಜನ ಜಮಾಯಿಸುವುದನ್ನು ಗಮನಿಸಿದ ಆರೋಪಿ ಪರಾರಿಯಾಗಿದ್ದು, ಮುಂದೊಂದು ದಿನ ನಿನ್ನನ್ನು ಮುಗಿಸುವುದಾಗಿ ಬೆದರಿಕೆ ಒಡ್ಡಿರುವುದಾಗಿ ದೂರಲಾಗಿದೆ. ಗಾಯಾಳು ಚಿಕಿತ್ಸೆ ಪಡೆಯುತ್ತಿದ್ದು, ಮೂಡುಬಿದಿರೆ ಪೊಲೀಸರು ಆರೋಪಿಯ ಹುಡುಕಾಟದಲ್ಲಿ ನಿರತರಾಗಿದ್ದಾರೆ.







