ದೂಡಿ ಹಾಕಿ ಕಟಪಾಡಿ ಠಾಣೆ ಎಎಸ್ಸೈ ಕರ್ತವ್ಯಕ್ಕೆ ಅಡ್ಡಿ: ದೂರು

ಕಾಪು, ಜು.25: ಕಟಪಾಡಿ ಹೊರ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪನಿರೀಕ್ಷಕ ಹರೀಶ್ ಎಂಬವರಿಗೆ ಅವಾಚ್ಯ ಶಬ್ದಗಳಿಂದ ಬೈದು ದೂಡಿ ಹಾಕಿ, ಬೆದರಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉದ್ಯಾವರ ಬೊಳ್ಜೆಯ ಸುಜಾತ ಹಾಗೂ ಲಕ್ಷ್ಮಣ್ ಎಂಬವರ ನಡುವೆ ಹಣಕಾಸಿನ ವ್ಯವಹಾರವಿದ್ದು, ಜು.24ರಂದು ಬೆಳಗ್ಗೆ ಉದ್ಯಾವರದಲ್ಲಿರುವ ಸುಜಾತ ಅವರ ಅಂಗಡಿಗೆ ಬಂದ ಲಕ್ಷ್ಮಣ್ ಹಾಗೂ ರಮೇಶ್ ಎಂಬವರು ಹಣ ನೀಡುವಂತೆ ಬೆದರಿಕೆ ಹಾಕಿದರೆನ್ನಲಾಗಿದೆ. ಈ ಬಗ್ಗೆ ಮಧ್ಯಾಹ್ನ ವೇಳೆ ಸುಜಾತ ದೂರು ನೀಡಲು ಕಟಪಾಡಿ ಹೊರ ಠಾಣೆಗೆ ಹೋಗಿದ್ದರೆಂದು ತಿಳಿದು ಬಂದಿದೆ.
ಅಲ್ಲಿಗೆ ಬಂದ ಆರೋಪಿಗಳು ಸುಜಾತ ಜೊತೆ ಮತ್ತೆ ಗಲಾಟೆ ಮಾಡಿದರೆನ್ನಲಾಗಿದೆ. ಇವರನ್ನು ಸಮಾದಾನಪಡಿಸಿದ ಎಎಸ್ಸೈ ಹರೀಶ್, ಮೂವರನ್ನು ಕಾಪು ಠಾಣೆಗೆ ಕರೆದುಕೊಂಡು ಹೋಗಲು ಠಾಣೆಯಿಂದ ಹೊರ ಬಂದರೆನ್ನಲಾಗಿದೆ. ಆಗ ಹರೀಶ್ ಅವರಿಗೆ ಆರೋಪಿ ಲಕ್ಷ್ಮಣ್ ಸಾರ್ವಜನಿಕರ ಎದುರು ಅವಾಚ್ಯ ವಾಗಿ ಬೈದು ದೂಡಿ ಹಾಕಿ, ಬೆದರಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.