ಸಿದ್ದಕಟ್ಟೆ: 'ಪತ್ರಿಕೋದ್ಯಮದಲ್ಲಿ ಉದ್ಯೋಗಾವಕಾಶ' ಮಾಹಿತಿ ಕಾರ್ಯಾಗಾರ

ಬಂಟ್ವಾಳ, ಜು. 26: ಸಿದ್ದಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಇದರ ಲರ್ನರ್ಸ್ ಫೋರಂ ಹಾಗೂ ಪ್ಲೇಸ್ಮೆಂಟ್ ಸೆಲ್ ವತಿಯಿಂದ ಪತ್ರಿಕಾ ದಿನಾಚರಣೆ ಪ್ರಯುಕ್ತ ಪತ್ರಿಕೋದ್ಯಮದಲ್ಲಿ ಉದ್ಯೋಗಾವಕಾಶ ಕುರಿತು ಮಾಹಿತಿ ಕಾರ್ಯಾಗಾರ ಕಾಲೇಜಿನ ಸಭಾಂಗಣದಲ್ಲಿ ಗುರುವಾರ ನಡೆಯಿತು.
ವರ್ಷ ಕ್ರಿಯೇಷನ್ಸ್ನ ಮುಖ್ಯಸ್ಥರು ಹಾಗೂ ಪತ್ರಕರ್ತ, ಅಂಕಣಕಾರರೂ ಆಗಿರುವ ಹರೀಶ್ ಅದೂರು ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿ, ಒಬ್ಬ ಉತ್ತಮ ಮಾತುಗಾರ ಅಥವಾ ಬರಹಗಾರನಿಗೆ ಅಗತ್ಯವಾದ ಅಂಶವೆಂದರೆ ನಿರಂತರವಾದ ಓದುವಿಕೆ ಹಾಗೂ ಗ್ರಹಿಸುವಿಕೆ ಆ ಮೂಲಕ ಒಳ್ಳೆಯ ವರದಿಗಾರನಾಗಿ ತನ್ನನ್ನು ರೂಪಿಸಿಕೊಳ್ಳಬಹುದು. ಆದ್ದರಿಂದ ವಿದ್ಯಾರ್ಥಿಗಳು ಒಳ್ಳೆಯ ಓದಿನ ಅಭಿರುಚಿಯನ್ನು ರೂಢಿಸಿಕೊಂಡು ಬದುಕಿನಲ್ಲಿ ಯಶಸ್ವಿಯಾಗಬೇಕೆಂದು ಹಾರೈಸಿದರು.
ಹಾಗೆಯೇ ಅವರು ಪತ್ರಿಕೋದ್ಯಮದಲ್ಲಿ ಇರುವ ವಿವಿಧ ಉದ್ಯೋಗಾವಕಾಶಗಳ ಮಾಹಿತಿ, ಪತ್ರಿಕೆಗಳ ಕಾರ್ಯವೈಖರಿ, ಮತ್ತು ಗ್ರಾಮೀಣ ಪರಿಸರದಲ್ಲಿ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆಯ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಸತ್ಯನಾರಾಯಣ ಭಟ್ ಮಾತನಾಡಿ, ಪತ್ರಿಕೆಗಳು ನಮ್ಮ ಬದುಕಿನ ಅವಿಭಾಜ್ಯ ಅಂಗ. ಈ ಮಾಧ್ಯಮದಿಂದ ಸಮಾಜದ ಆಗುಹೋಗುಗಳನ್ನು ನಾವು ತಿಳಿದುಕೊಳ್ಳುತ್ತೇವೆ. ಪತ್ರಿಕೆಗಳ ಓದುವಿಕೆಯಿಂದ ಓದುಗರಲ್ಲಿ ಹೊಸ ಅನುಭವ, ಹೊಸ ವಿಚಾರ ಹಾಗೂ ಬದುಕಿನ ಸವಾಲುಗಳನ್ನು ಎದುರಿಸುವ ಆತ್ಮಸ್ಥೈರ್ಯ ಮೂಡುತ್ತದೆ. ಆದುದರಿಂದ ಪ್ರತಿಯೊಬ್ಬರೂ ಪತ್ರಿಕೆಗಳನ್ನು ಓದುತ್ತಾ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುತ್ತಾ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ವಿಯಾಗಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಸಿದ್ಧಕಟ್ಟೆಯಲ್ಲಿ ಸುಮಾರು 45 ವರ್ಷಗಳಿಂದ ಪತ್ರಿಕಾ ವಿತರಕರಾಗಿ ಸೇವೆ ಸಲ್ಲಿಸುತ್ತಿರುವ ಎಸ್.ವಿ ಶೆಟ್ಟಿಗಾರ್ ಅವರನ್ನು ಸನ್ಮಾನಿ ಸಲಾಯಿತು. ಕಾರ್ಯಕ್ರಮದಲ್ಲಿ ವಿವಿಧ ಧಾರವಾಹಿಗಳಿಗೆ ಛಾಯಾಗ್ರಾಹಕರಾಗಿದ್ದ ಅನಿತ್ ಕುಮಾರ್ ಹಾಗೂ ಗುಬ್ಬಚ್ಚಿ ಗೂಡು ಕಾರ್ಯಕ್ರಮದ ರೂವಾರಿ ನಿತ್ಯಾನಂದ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಯೋಜಕರು ಹಾಗೂ ಸಹಾಯಕ ಪ್ರಾಧ್ಯಾಪಕ ವಿನಯ್ ಎಂ.ಎಸ್ ಪ್ರಾಸ್ತಾವಿಸಿದರು. ವಿದ್ಯಾರ್ಥಿನಿಯರಾದ ರಶ್ಮಿತಾ ಪ್ರಾರ್ಥಿಸಿದರು. ಚೈತ್ರಾ ಸ್ವಾಗತಿಸಿ, ದೀಕ್ಷಿತಾ ವಂದಿಸಿ, ರಂಜಿತಾ ನಿರೂಪಿಸಿದರು. ಕಾಲೇಜಿನ ಎಲ್ಲಾ ಬೋಧಕ/ಬೋಧಕೇತರ ವರ್ಗದವರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.