ಅಂಗನವಾಡಿಗಳನ್ನು ಬಲಿಷ್ಠಗೊಳಿಸಲು ಯೋಜನೆ ರೂಪಿಸಲಾಗುವುದು: ಸಚಿವೆ ಜಯಮಾಲ

ಕೊಣಾಜೆ, ಜು. 26: ಸರಕಾರ ಅಂಗನವಾಡಿ ಶಿಕ್ಷಕಿಯರು ಹಾಗೂ ಸಹಾಯಕರಿಗೆ ಕಳೆದ ಫೆಬ್ರವರಿಯಲ್ಲಿ ವೇತನ ಪರಿಷ್ಕರಣೆ ಮಾಡಿದೆ. ಪೋಷಕರು ಮಕ್ಕಳ ಆರೋಗ್ಯದ ಕುರಿತು ನಿಗಾ ಇಡುವಂತೆಯೇ ಅಂಗನವಾಡಿಯಲ್ಲಿ ನೈರ್ಮಲ್ಯ ಕಾಪಾಡುವುದು ಶಿಕ್ಷಕಿಯರು ಹಾಗೂ ಸಹಾಯಕಿಯರ ಆದ್ಯ ಕರ್ತವ್ಯ. ಅಂಗನವಾಡಿಯನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಮಹತ್ವಪೂರ್ಣ ಯೋಜನೆ ರೂಪಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಡಾ. ಜಯಮಾಲ ಅಭಿಪ್ರಾಯಪಟ್ಟರು.
ಬಂಟ್ವಾಳ ತಾಲೂಕಿನ ಬಾಳೆಪುಣಿ ಗ್ರಾಮದ ಹೂ ಹಾಕುವ ಕಲ್ಲು ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ಸಭಾಭವನದಲ್ಲಿ ಗುರುವಾರ ನಡೆದ "ಆಟಿಡೊಂಜಿ ದಿನ" ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಾವು ಹಾಲು ಉಪ್ಪಿಟ್ಟಿಗಾಗಿಯೇ ಅಂಗನವಾಡಿಗೆ ಹೋಗುತ್ತಿದ್ದೆವು. ಅದರಿಂದ ನೆನಪಿನ ಶಕ್ತಿ ವೃದ್ಧಿಸುತ್ತದೆ. ಹಿಂದಿನ ಸರ್ಕಾರ ಮಕ್ಕಳಿಗೆ ಹಾಲು, ಮೊಟ್ಟೆ ಯೋಜನೆ ಜಾರಿಗೆ ತಮದು ಮಕ್ಕಳಲ್ಲಿ ಪೌಷ್ಠಿಕಾಮಶ ಹೆಚ್ಚಿಸುವ ಕೆಲಸ ಮಾಡಿದೆ. ಅತಿ ಮುಖ್ಯವಾಗಿ ಹಿಂದಿನ ಸರಕಾರದ ಆಡಳಿತ ನೇತೃತ್ವ ವಹಿಸಿದ್ದ ಸಿದ್ಧರಾಮಯ್ಯ ಅವರು ಅಧಿಕಾರಕ್ಕೆ ಬಂದ ತಕ್ಷಣ ಅನ್ನಭಾಗ್ಯ ಯೋಜನೆ ಜಾರಿಗೆ ತರುವ ಮೂಲಕ ಹಸಿವು ಮುಕ್ತ ಕರ್ನಾಟಕ ಮಾಡಿದರು ಎಂದು ಹೆಳಿದರು.
ವಸತಿ ಹಾಗೂ ನಗರಾಭಿವೃದ್ಧಿ ಸಚಿವ ಯು. ಟಿ. ಖಾದರ್ ಮಾತನಾಡಿ ನನ್ನ ವ್ಯಾಪ್ತಿಯಲ್ಲಿ ಸಮಾಜಕ್ಕೆ ದುಷ್ಪರಿಣಾಮ ಬೀರುವ ಕೆಡುಕಾಗುವ ಚಟಗಳಾದ ಗುಟ್ಕಾ ಮೊದಲಾದ ಪದಾರ್ಥಗಳನ್ನು ನಿಷೇಧಿಸುವ ಕುರಿತಾಗಿ ಕಾನೂನನ್ನು ತರುವ ಯೋಜನೆ ಇದ್ದು, ನನ್ನ ಖಾತೆಯಲ್ಲದಿದ್ದರೂ ನನ್ನ ಖಾತೆಯಡಿ ತಂದು ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಪ್ರಯತ್ನ ಪಡಲಿದ್ದೇನೆ. ನಿಷೇಧಕ್ಕೆ ಸಂಬಂಧಿಸಿ ಶೀಘ್ರವೇ ಆ ಕುರಿತಾದ ಕಾನೂನು ಪ್ರಕಟಿಸಲಿದ್ದೇವೆ. ಮಳೆಗಾಲದಲ್ಲಿ ಆಟಿ ತಿಂಗಳಲ್ಲಿ ಅನ್ನಆಹಾರ ತಿಂಡಿ ತಿನಿಸು ಹೇಗಿತ್ತು ಮತ್ತು ಹಿಂದಿನ ಸಂಸ್ಕಾರ ಸಂಸ್ಕೃತಿ ತಿಳಿಯಲು ಇಂತಹ ಕಾರ್ಯಕ್ರಮ ಪೂರಕವಾಗಿದೆ ಎಂದು ನುಡಿದರು.
ಮಾಜಿ ಸಚಿವ ಬಿ. ರಮನಾಥ ರೈ ಮಾತನಾಡಿದರು. ಬಾಳೆಪುಣಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೀಲಾವತಿ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ತಾಲೂಕು ಪಂ. ಅಧ್ಯಕ್ಷ ಚಂದ್ರಹಾಸ ಪಿ. ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಸದಸ್ಯ ಹೈದರ್ ಕೈರಂಗಳ, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಲೀಲ್ ಮೊಂಟುಗೋಳಿ, ಮಾಣಿ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳಾ ಮಾವೆ, ಶಾಲಾ ಗೌರವ ಸಲಹೆಗಾರ ರಮೇಶ್ ಶೇಣವ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಸುಂದರ ಪೂಜಾರಿ, ಕ್ಷೇತ್ರ ಶಿಕ್ಷಣಾಕಾರಿ ಶಿವಪ್ರಕಾಶ್, ಕಾರ್ಯನಿರ್ವಹಣಾಕಾರಿ ರಾಜಣ್ಣ, ಮಂಗಳೂರು ಸಿಡಿಪಿಒ ಶ್ಯಾಮಲಾ, ಬಂಟ್ವಾಳ ತಾಲೂಕು ಸಿಡಿಪಿಒ ಮಲ್ಲಿಕಾ, ಎಪಿಎಂಸಿ ಮಾಜಿ ಸದಸ್ಯ ಉಮ್ಮರ್ ಪಜೀರು, ಹೂ ಹಾಹುಕವ ಕಲ್ಲು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನವೀನ್ ಚಂದ್ರ, ರಾಜಗೋಪಾಲ ಭಟ್, ಅಬೂಬಕ್ಕಾರ್, ಅರುಣ್ ವಿಕ್ಟರ್, ಬಶೀರ್, ನರಿಂಗಾನ ಅಧ್ಯಕ್ಷ ಇಸ್ಮಾಯಿಲ್ ಮೀನಂಕೋಡಿ, ಇರಾ ಗ್ರಾಮ ಪಂಚಾಯಿತಿ ಅಧ್ಯಕ್ಷ ರಝಾಕ್ ಕುಕ್ಕಾಜೆ,ಪಜೀರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸೀತಾರಾಮ ಶೆಟ್ಟಿ ಪಜೀರು ಹಾಗೂ ಹಿರಿಯ ಮುಖಂಡ ಪದ್ಮನಾಭ ನರಿಂಗಾನ, ಉಪಸ್ಥಿತರಿದ್ದರು.
ಶಾಲಾಭಿವೃದ್ದಿ ಸಮಿತಿ ವತಿಯಿಂದ ಸಚಿವೆ ಡಾ. ಜಯಮಾಲ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಪಂಚಾಯತ್ ಸದಸ್ಯೆ ಮಮತಾ ಡಿ. ಎಸ್.ಗಟ್ಟಿ ಸ್ವಾಗತಿಸಿದರು. ವಿಟ್ಲ ಸಿಡಿಪಿಒ ಸುಧಾ ಜೋಷಿ ಕಾರ್ಯಕ್ರಮ ನಿರ್ವಹಿಸಿದರು.