ಕೊಡಗಿನ ವಿವಿಧೆಡೆ ‘ಕಾರ್ಗಿಲ್ ವಿಜಯ ದಿವಸ್’ ಆಚರಣೆ
ಮಡಿಕೇರಿ ಜು.26 : ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಜಯ ಸಾಧಿಸಿದ ನೆನಪಿಗಾಗಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸುವ ಮೂಲಕ ‘ಕಾರ್ಗಿಲ್ ವಿಜಯ ದಿವಸ್’ನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ವಿಶ್ವ ಹಿಂದೂ ಪರಿಷದ್ ಹಾಗೂ ಬಜರಂಗದಳದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು, ನಿವೃತ್ತ ಸೇನಾಧಿಕಾರಿಗಳು ಹಾಗೂ ಸಾರ್ವಜನಿಕರು ನಗರದ ಯುದ್ಧ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಅರ್ಪಿಸಿದರು.
ನಿವೃತ್ತ ಸೇನಾಧಿಕಾರಿ, ಹೋಂ ಗಾಡ್ರ್ಸ್ ಕಮಾಂಡೆಂಟ್ ಒ.ಎಸ್.ಚಿಂಗಪ್ಪ, ಬಿಜೆಪಿ ನಗರಾಧ್ಯಕ್ಷ ಮಹೇಶ್ ಜೈನಿ, ಬಿ.ಕೆ.ಅರುಣ್ಕುಮಾರ್, ಬಿ.ಕೆ.ಜಗದೀಶ್ ವಿಶ್ವ ಹಿಂದೂ ಪರಿಷತ್ನ ಐ.ಎಂ. ಅಪ್ಪಯ್ಯ, ಪತ್ರಕರ್ತ ಚಿ.ನಾ.ಸೋಮೇಶ್, ಬಜರಂಗ ದಳದ ಜಿಲ್ಲಾ ಸಹ ಸಂಚಾಲಕ ಚೇತನ್, ವಿನಯ್, ಜಿಲ್ಲಾ ಪಂಚಾಯತ್ ಸದಸ್ಯ ಬಿ.ಜೆ.ದೀಪಕ್, ಸೈನಿಕ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಲೆ.ಕ.ಗೀತಾ ಮತ್ತಿತರರು ಯುದ್ಧ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸುವುದರೊಂದಿಗೆ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು.
ಈ ಸಂದರ್ಭ ಮಾತನಾಡಿದ ಪತ್ರಕರ್ತ ಚಿ.ನಾ.ಸೋಮೇಶ್, ದೇಶರಕ್ಷಣೆಗಾಗಿ ಗಡಿಗಳಲ್ಲಿ ಶತ್ರುಗಳಿಗೆ ಎದೆಗೊಟ್ಟು ನಿಲ್ಲುವ ಯೊಧರ ಸೇವೆ ಅವಿಸ್ಮರಣೀಯ ಎಂದರಲ್ಲದೆ, ನಾವೆಲ್ಲರೂ ಇಂದು ನೆಮ್ಮದಿಯಿಂದ ಇರುವುದಕ್ಕೆ ಸೈನಿಕರೇ ಕಾರಣಕರ್ತರಾಗಿದ್ದು, ಹುತಾತ್ಮರಿಗೆ ಗೌರವ ನೀಡುವುದು ಸ್ವಾಭಿಮಾನದ ಪ್ರತೀಕ ಎಂದು ವಿಶ್ಲೇಷಿಸಿದರು. ದಿನದ ಮಹತ್ವದ ಕುರಿತು ಲೆ.ಕ.ಗೀತಾ ಮಾತನಾಡಿದರು.
ರಕ್ತದಾನ ಶಿಬಿರ: ಕಾರ್ಗಿಲ್ ವಿಜಯ್ ದಿವಸ್ ಪ್ರಯುಕ್ತ ನಗರದ ಅಶ್ವಿನಿ ಆಸ್ಪತ್ರೆಯಲ್ಲಿ ಬಜರಂಗದಳದ ವತಿಯಿಂದ ರಕ್ತದಾನ ಶಿಬಿರ ನಡೆಯಿತು. ಕಾರ್ಯಕ್ರಮದಲ್ಲಿ ಸುಮಾರು 67ಮಂದಿ ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು.
ಗೋಣಿಕೊಪ್ಪದಲ್ಲಿ ಯೋಧರ ಸ್ಮರಣೆ
ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಣೆಯನ್ನು ಕಾಲೇಜು ಆವರಣದಲ್ಲಿರುವ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಜೋಡಿ ಪ್ರತಿಮೆ ಎದುರು ನಡೆಸಲಾಯಿತು.
ವಿದ್ಯಾರ್ಥಿ ವೃಂದ ಹಾಗೂ ಉಪನ್ಯಾಸಕ ವರ್ಗದವರು ಪಾಲ್ಗೊಂಡು ಸೈನಿಕರ ಪರವಾದ ಘೋಷಣೆಗಳನ್ನು ಕೂಗಿದರು. ಕಾರ್ಗಿಲ್ ವಿಜಯೋತ್ಸವದ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಯುದ್ಧದಲ್ಲಿ ವೀರ ಮರಣ ಹೊಂದಿದ ಯೋಧರಿಗೆ ಮೌನಾಚರಣೆ ಮೂಲಕ ಗೌರವ ನಮನ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲೆ ಪ್ರೊ.ಎಸ್. ಆರ್. ಉಷಾಲತಾ, ಹಿರಿಯ ಉಪನ್ಯಾಸಕರುಗಳಾದ ಪ್ರೊ. ಎ.ಎಂ. ಕಮಲಾಕ್ಷಿ, ಪ್ರೊ.ಎಂ.ಎಸ್. ಭಾರತಿ ಮತ್ತಿತರರು ಪಾಲ್ಗೊಂಡರು.
ಮೂರ್ನಾಡುವಿನಲ್ಲಿ ಕಾರ್ಗಿಲ್ ವಿಜಯ ದಿವಸ್
ಮೂರ್ನಾಡು ಪದವಿ ಕಾಲೇಜಿನಲ್ಲಿ ಕಾರ್ಗಿಲ್ ವಿಜಯ ದಿವಸವನ್ನು ಆಚರಿಸಲಾಯಿತು. ಮೂರ್ನಾಡು ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಪುದಿಯೊಕ್ಕಡ ಸುಬ್ರಮಣಿ ದೀಪ ಬೆಳಗಿಸಿ, ಪುಷ್ಪಾರ್ಚನೆ ಮಾಡಿದರು. ಕಾರ್ಗಿಲ್ ಯುದ್ದದಲ್ಲಿ ಹುತ್ಮಾರಾದ ಸೈನಿಕರಿಗೆ ಮೌನಾಚಾರಣೆ ಮೂಲಕ ಗೌರವ ಸಲ್ಲಿಸಲಾಯಿತು.
ಈ ಸಂದರ್ಭ ನೆರ್ಪಂಡ ಹರ್ಷ ಮಂದಣ್ಣ ದಿನದ ಮಹತ್ವದ ಕುರಿತು ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ, ಪ್ರಾಧ್ಯಾಪಕ ವೃಂದದವರು ಹಾಜರಿದ್ದರು.
ವೀರಾಜಪೇಟೆಯಲ್ಲಿ ಯೋಧರ ಸ್ಮಾರಕಕ್ಕೆ ಗೌರವ
ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ವೀರಾಜಪೇಟೆ ಸ್ಟೇಟ್ ಬ್ಯಾಂಕ್ ಎದುರಿನಲ್ಲಿರುವ ಯೋಧರ ಸ್ಮಾರಕಕ್ಕೆ ಪುಷ್ಪಗುಚ್ಛ ಇರಿಸುವ ಮೂಲಕ ಶಾಸಕ ಕೆ.ಜಿ.ಬೋಪಯ್ಯ ಅವರು ದೇಶಕ್ಕಾಗಿ ಹೋರಾಡಿ ಹುತಾತ್ಮರಾದ ಯೋಧರಿಗೆ ಗೌರವ ವಂದನೆ ಸಲ್ಲಿಸಿದರು.
ಈ ಸಂದರ್ಭ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಚೇಂದ್ರಿಮಾಡ ಗಣೇಶ್ ನಂಜಪ್ಪ, ಜನರಲ್ ತಿಮ್ಮಯ್ಯ ಹಾಗೂ ಫೀ,ಮಾ.ಕಾರ್ಯಪ್ಪ ಫೋರಂ ಅಧ್ಯಕ್ಷ ಕರ್ನಲ್ ಸುಬ್ಬಯ್ಯ, ಕರ್ನಲ್ ಭರತ್, ಪಟ್ಟಣ ಪಂಚಾಯತ್ ಅಧ್ಯಕ್ಷ ಇ.ಸಿ.ಜೀವನ್, ತಾಲೂಕು ತಹಶೀಲ್ದಾರ್ ಆರ್. ಗೋವಿಂದರಾಜು, ಎಸ್.ಬಿ.ಐ ವ್ಯವಸ್ಥಾಪಕ ರಮೇಶ್ ಭಟ್, ಕಾಫಿ ಮಂಡಳಿ ಉಪಾಧ್ಯಕ್ಷೆ ರೀನಾ ಪ್ರಕಾಶ್, ಪೊಲೀಸ್ ವೃತ್ತ ನಿರೀಕ್ಷಕ ಎನ್.ಕುಮಾರ್ ಆರಾಧ್ಯ, ಗ್ರಾಮಾಂತರ ಠಾಣಾಧಿಕಾರಿ ಸುರೇಶ್ ಬೋಪಣ್ಣ, ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ್ (ರಾಜ), ತಾಲೂಕು ಪಂಚಾಯತ್ ಸದಸ್ಯ ಬಿ.ಎಂ.ಗಣೇಶ್, ಹಿಂದೂ ಜಾಗರಣ ವೇದಿಕೆಯ ಸದಸ್ಯರು, ಮತ್ತು ಕಾವೇರಿ ಲಘು ವಾಹನ ಚಾಲಕ ಮಾಲಕರ ಸಂಘದ ಅಧ್ಯಕ್ಷರು ಮತ್ತು ಸದಸ್ಯರು, ಶ್ರದ್ಧಾಂಜಲಿ ಅರ್ಪಿಸಿದರು.