ಬ್ಯಾರಿ ಭವನ ಅನುದಾನಕ್ಕಾಗಿ ಸಚಿವರಿಗೆ ಮನವಿ

ಮಂಗಳೂರು, ಜು. 26: ಮಂಗಳೂರಿನಲ್ಲಿ ಬ್ಯಾರಿ ಅಕಾಡೆಮಿ ಕಚೇರಿ, ಸಭಾಭವನ ಸಹಿತ ಬ್ಯಾರಿ ಭವನ ನಿರ್ಮಾಣಕ್ಕಾಗಿ ವಿಶೇಷ ಅನುದಾನ ಮಂಜೂರು ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಡಾ. ಜಯಮಾಲಾ ಅವರಿಗೆ ಬ್ಯಾರಿ ಅಕಾಡೆಮಿಯಿಂದ ಮನವಿ ಸಲ್ಲಿಸಲಾಯಿತು.
ಬ್ಯಾರಿ ಅಕಾಡೆಮಿ ಅಧ್ಯಕ್ಷ ಕರಂಬಾರ್ ಮೊಹಮ್ಮದ್ ನೇತೃತ್ವದಲ್ಲಿ ಸಚಿವರನ್ನು ಭೇಟಿ ಮಾಡಿ, ಅಕಾಡೆಮಿ ಒಂಬತ್ತು ವರ್ಷಗಳಿಂದ ಬಾಡಿಗೆ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದೆ. ಬ್ಯಾರಿ ಭವನ ನಿರ್ಮಿಸಲು ಕೆಎಚ್ಬಿ ಬಡಾವಣೆಯಲ್ಲಿ ೨೫ ಸೆಂಟ್ಸ್ ಜಾಗ ಖರೀದಿಸಲಾಗಿದೆ. ಭವನ ನಿರ್ಮಿಸಲು ಎಂಟು ಕೋಟಿ ರೂ. ವಿಶೇಷ ಅನುದಾನ ಮಂಜೂರು ಮಾಡುವಂತೆ ಮನವಿ ಮಾಡಲಾಯಿತು.
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಬ್ಯಾರಿ ಭಾಷಾ ಅಧ್ಯಯನ ಪೀಠ ಸ್ಥಾಪಿಸುವ ಆದೇಶವನ್ನು ಸರಕಾರ ಮಾಡಿದೆ. ಪೀಠ ಕಾರ್ಯಾಚರಣೆಗೆ ಅಗತ್ಯವಾಗಿರುವ ಎರಡು ಕೋಟಿ ರೂ. ಅನುದಾನ ಬಿಡುಗಡೆ ಮಾಡಬೇಕಾಗಿ ಕೋರಲಾಯಿತು.
ಮತ್ತು ಅಕಾಡೆಮಿಯ ಹಿತದೃಷ್ಟಿಯಿಂದ ಉಮರಬ್ಬ ಅವರನ್ನು ಪೂರ್ಣಕಾಲಿಕ ರಿಜಿಸ್ಟ್ರಾರ್ ಆಗಿ ನೇಮಕ ಮಾಡಬೇಕು. ಬ್ಯಾರಿ ಭಾಷೆ, ಕಲೆ, ಸಂಸ್ಕೃತಿಯ ಅಭಿವೃದ್ಧಿ ದೃಷ್ಟಿಯಿಂದ ಜಿಲ್ಲೆಯಾದ್ಯಂತ ಪಸರಿಸುವ ಉದ್ದೇಶದಿಂದ ಮಂಗಳೂರು ಆಕಾಶವಾಣಿಯಲ್ಲಿ ಬ್ಯಾರಿ ವಾರ್ತೆ ಪ್ರಸಾರ ಮಾಡಲು ಸಂಬಂಧಪಟ್ಟ ಅಕಾರಿಗಳಿಗೆ ಶಿಫಾರಸು ಮಾಡುವಂತೆ ವಿನಂತಿ ಮಾಡಲಾಯಿತು.
ಅಕಾಡೆಮಿ ಸದಸ್ಯರಾದ ಬಶೀರ್ ಬೈಕಂಪಾಡಿ, ಹುಸೈನ್ ಕಾಟಿಪಳ್ಳ, ಪಿ.ಎಂ.ಹಸನಬ್ಬ, ಸಲೀಮ್ ಬಾರಿಮಾರು, ಕೆ.ಎಂ.ಮೊಹಮ್ಮದ್ ಅನ್ಸಾರ್, ತನ್ಸೀಫ್ ಬಿ.ಎಂ., ಅಬ್ದುಲ್ ರಹ್ಮಾನ್ ಕುತ್ತೆತ್ತೂರು, ಆಯಿಶಾ ಯು.ಕೆ., ಜಮಾಲ್ ಬೇಲೂರ್, ಮರಿಯಂ ಇಸ್ಮಾಯಿಲ್, ಮೊಹಮ್ಮದ್ ಆರಿಫ್, ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ. ಉಪಸ್ಥಿತರಿದ್ದರು.