ಚೆರ್ಕಳಂ ಅಬ್ದುಲ್ಲ ನಿಧನಕ್ಕೆ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಸಂತಾಪ

ಚೆರ್ಕಳಂ ಅಬ್ದುಲ್ಲ
ಬೆಂಗಳೂರು, ಜು. 27: ಕಾಸರಗೋಡಿನ ಚೆರ್ಕಳಂ ಅಬ್ದುಲ್ಲ ಅವರ ನಿಧನಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಸಂತಾಪ ವ್ಯಕ್ತಪಡಿಸಿದ್ದಾರೆ.
ಚರ್ಕಳಂ ಅಬ್ದುಲ್ಲ ಅವರು ಕಾಸರಗೋಡಿನ ಮಂಜೇಶ್ವರ ಕ್ಷೇತ್ರದಿಂದ ಕೇರಳ ವಿಧಾನಸಭೆಗೆ 1987ರಲ್ಲಿ ಆಯ್ಕೆಯಾಗಿ, ಮೊಟ್ಟ ಮೊದಲಿಗೆ ಕೇರಳ ವಿಧಾನಸಭೆಯಲ್ಲಿ ಕನ್ನಡದ ಧ್ವನಿ ಮೊಳಗಿಸಿದ ಹೆಮ್ಮೆಯ ಕನ್ನಡಿಗರು ಎಂದು ಸಿದ್ದರಾಮಯ್ಯ ಸ್ಮರಿಸಿದ್ದಾರೆ.
ಕಾಸರಗೋಡಿನಲ್ಲಿ ಕನ್ನಡ ಇವತ್ತಿಗೂ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸಾಧ್ಯವಾಗಿದ್ದರೆ ಅದು ಚರ್ಕಳಂ ಅಬ್ದುಲ್ಲ ಅಂತಹವರ ಹೋರಾಟದ ಫಲವಾಗಿ ಎನ್ನುವುದು ಪ್ರತಿಯೊಬ್ಬ ಕನ್ನಡಿಗನೂ ಅರಿಯಬೇಕಾದ ಸಂಗತಿ. ಸಚಿವರಾಗಿ, ಹಿಂದುಳಿದ ವರ್ಗಗಳ ಕಲ್ಯಾಣ ಸಮಿತಿಯ ಅಧ್ಯಕ್ಷರಾಗಿ ಜನಪರ ಸೇವೆಯಿಂದ ಎಲ್ಲರಿಗೂ ಬೇಕಾದವರಾಗಿದ್ದ ಚೆರ್ಕಳಂ ಅಬ್ದುಲ್ಲರವರು ಜನಪ್ರತಿನಿಧಿಯೊಬ್ಬರು ಸಾರ್ವಜನಿಕ ಕ್ಷೇತ್ರದಲ್ಲಿ ಯಾವ ರೀತಿ ಇರಬೇಕೆನ್ನುವುದಕ್ಕೆ ಮಾದರಿಯಂತಿದ್ದರು ಎಂದು ಅವರು ಉಲ್ಲೇಖಿಸಿದ್ದಾರೆ.
ಅವರು ಇಂದು ನಮ್ಮ ನಡುವೆ ಇಲ್ಲವಾದರೂ ಅವರ ಹೋರಾಟದ ನಡೆ ನಮ್ಮೆಲ್ಲರಿಗೂ ದಾರಿ ದೀವಿಗೆಯಂತಿರುತ್ತದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡಿಗರೆಲ್ಲರ ಪರವಾಗಿ ಚೆರ್ಕಳ ಅಬ್ದುಲ್ಲ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಶ್ರೀಯುತರ ನಿಧನದಿಂದ ಉಂಟಾಗಿರುವ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗಕ್ಕೆ ಭಗವಂತನು ನೀಡಲಿ ಎಂದು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.





