ಮಂಗಳೂರು: ಪ. ಬಂಗಾಳದ ವಿದ್ಯಾರ್ಥಿ ನಾಪತ್ತೆ
ಮಂಗಳೂರು, ಜು.27: ಮಣಿಪಾಲ ಕಾಲೇಜಿಗೆ ದಾಖಲಾತಿಗೆ ತಂದೆಯ ಜತೆ ಬಂದಿದ್ದ ಪಶ್ಚಿಮ ಬಂಗಾಳದ ವಿದ್ಯಾರ್ಥಿಯೊಬ್ಬ ನಾಪತ್ತೆಯಾದ ಬಗ್ಗೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಶ್ಚಿಮ ಬಂಗಾಳ ನಿವಾಸಿ ಅಭಿಜಿತ್ ದೇ (22) ನಾಪತ್ತೆಯಾದ ವಿದ್ಯಾರ್ಥಿ. ಈತ ತನ್ನ ತಂದೆ ದೇವ್ಕುಮಾರ್ ದೇ ಜತೆ ಪಶ್ಚಿಮ ಬಂಗಾಳದಿಂದ ವಿಮಾನ ಮೂಲಕ ಮಂಗಳೂರಿಗೆ ಬಂದಿದ್ದ. ಅಲ್ಲಿಂದ ಟ್ಯಾಕ್ಸಿ ಮೂಲಕ ಇವರಿಬ್ಬರು ಕುಳೂರಿಗೆ ಬಂದು ಮಣಿಪಾಲ ಎಕ್ಸ್ಪ್ರೆಸ್ ಬಸ್ಗಾಗಿ ಕಾಯುತ್ತಿದ್ದರು. ಈ ವೇಳೆ ವಿದ್ಯಾರ್ಥಿ ಸಿಗರೇಟು ಸೇವನೆ ಮಾಡಿ ಬರುತ್ತೇನೆಂದು ತಂದೆಯ ಬಳಿ ಹೇಳಿ ಹೋದವ ಮರಳಿ ಬಾರದೆ ನಾಪತ್ತೆಯಾಗಿದ್ದಾನೆ.
ತುಂಬಾ ಹೊತ್ತಿನ ಬಳಿಕವೂ ಬಾರದೆ ಇರುವುದನ್ನು ಕಂಡ ದೇವ್ಕುಮಾರ್ ದೇ ಅವರು ಮಗನ ಮೊಬೈಲ್ಗೆ ಕರೆ ಮಾಡಿದ್ದಾರೆ. ಆದರೆ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಕೂಡಲೇ ಸ್ಥಳೀಯರಿಗೆ ವಿಷಯ ತಿಳಿಸಿ ಸುತ್ತಮುತ್ತ ಹುಡುಕಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ಬಳಿಕ ಕಾವೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.





