ಹಸಿರು ನ್ಯಾಯಾಧಿಕರಣದ ಅಧ್ಯಕ್ಷ ಸ್ಥಾನದಿಂದ ನಿವೃತ್ತ ನ್ಯಾಯಮೂರ್ತಿ ಗೋಯಲ್ ಅಮಾನತಿಗೆ ಆಗ್ರಹ
ಹೊಸದಿಲ್ಲಿ, ಜು. 29: ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಅಧ್ಯಕ್ಷ ಸ್ಥಾನದಿಂದ ನ್ಯಾಯಮೂರ್ತಿ (ನಿವೃತ್ತ) ಎ.ಕೆ. ಗೋಯಲ್ ಅವರನ್ನು ವಜಾಗೊಳಿಸುವಂತೆ ಕೇಂದ್ರ ಸಚಿವ ರಾಮದಾಸ್ ಅಠಾವಳೆ ಆಗ್ರಹಿಸಿದ್ದಾರೆ. ಎ.ಕೆ. ಗೋಯಲ್ ಅವರು ಸುಪ್ರೀಂ ಕೋರ್ಟ್ ಪೀಠದ ನ್ಯಾಯಾಧೀಶರಾಗಿದ್ದಾಗ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಕುರಿತು ತಪ್ಪು ತೀರ್ಪು ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕು ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಅಧ್ಯಕ್ಷ ಅಥಾವಳೆ ಹೇಳಿದ್ದಾರೆ. ಅವರ ನೇಮಕಾತಿ ಬಗ್ಗೆ ದಲಿತ ಸಮುದಾಯದಲ್ಲಿ ಅಸಮಾಧಾನವಿದೆ. ತಪ್ಪು ತೀರ್ಪು ನೀಡಿದ ಪೀಠದ ಸದಸ್ಯರಲ್ಲಿ ಅವರು ಕೂಡ ಒಬ್ಬರಾಗಿದ್ದರು ಎಂದು ಅವರು ಹೇಳಿದರು. ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಾಧೀಶ ಎ.ಕೆ. ಗೋಯಲ್ ಅವರನ್ನು ಜುಲೈ 6ರಂದು 5 ವರ್ಷಕ್ಕೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಈ ವಿಷಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ತಿಳಿಸಿದ್ದೇನೆ ಎಂದು ಕೇಂದ್ರದ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಖಾತೆಯ ಸಹಾಯಕ ಸಚಿವ ಅಠಾವಳೆ ಹೇಳಿದ್ದಾರೆ.