ಮಾಲಕರಿಂದ ಬೀಡಿ ಕಾರ್ಮಿಕರಿಗೆ ವಂಚನೆ: ಬಾಲಕೃಷ್ಟ ಶೆಟ್ಟಿ ಆರೋಪ

ಉಡುಪಿ, ಜು.30: ಬೀಡಿ ಕಾರ್ಮಿಕರಿಗೆ 2018ರ ಎ.1ರಿಂದ ಮಾಲಕರು ಕನಿಷ್ಠ ಕೂಲಿ 210ರೂ. ಕೊಡಬೇಕಾಗಿತ್ತು. ಆದರೆ ಇದುವರೆಗೆ ಕೊಡದೆ ಸತಾ ಯಿಸುತ್ತಿದ್ದಾರೆ. 2015ರಲ್ಲಿ 12.75ರೂ. ಜಾರಿಯಾದ ತುಟ್ಟಿಭತ್ಯೆಯನ್ನು ಮಾಲಕರು ಕುಂಟು ನೆಪ ಹೇಳಿ ಕಾರ್ಮಿಕರಿಗೆ ವಂಚಿಸುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಬೀಡಿ ಫೆಡರೇಶ್ ಅಧ್ಯಕ್ಷ ಜೆ.ಬಾಲಕೃಷ್ಣ ಶೆಟ್ಟಿ ತಿಳಿಸಿದ್ದಾರೆ.
ಬನ್ನಂಜೆ ನಾರಾಯಣ ಗುರು ಸಭಾಭವನದಲ್ಲಿ ಇತ್ತೀಚೆಗೆ ನಡೆದ ಬೀಡಿ ಆ್ಯಂಡ್ ಟೊಬೇಕೋ ಲೇಬರ್ ಯೂನಿಯನ್(ಸಿಐಟಿಯು) ಉಡುಪಿ ಇದರ 42ನೆ ವಾರ್ಷಿಕ ಮಹಾಸಭೆಯನ್ನು ಉ್ಘಾಟಿಸಿ ಅವರು ಮಾತನಾಡುತಿದ್ದರು.
ಕೇಂದ್ರ ಹಾಗೂ ರಾಜ್ಯ ಸರಕಾರಗಳು ಶ್ರೀಮಂತರಿಗೆ ಕೋಟಿಗಟ್ಟಲೆ ಸಹಾಯ ಮಾಡುತ್ತವೆ. ಆದರೆ ಬಡ ಬೀಡಿ ಕಾರ್ಮಿಕರಿಗೆ ಯಾವುದೇ ಸೌಲಭ್ಯ ನೀಡದೆ ವಂಚಿಸುತ್ತಿವೆ. ಆದುದರಿಂದ ಬೀಡಿ ಕಾರ್ಮಿಕರು ಎಚ್ಚೆತ್ತುಕೊಂಡು ಸರಕಾರ ಹಾಗೂ ಮಾಲಕರ ವಿರುದ್ಧ ಹೋರಾಟ ನಡೆಸಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ 2018-19ನೆ ಸಾಲಿನ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ರಾಜು ಪೂಜಾರಿ, ಅಧ್ಯಕ್ಷರಾಗಿ ಸುಂದರಿ ಉದ್ಯಾವರ, ಉಪಾಧ್ಯಕ್ಷರುಗಳಾಗಿ ಸುಜಾತ ಶೆಟ್ಟಿ ಹಾಗೂ ಡಿ.ಗಿರಿಜ, ಕಾರ್ಯದರ್ಶಿಯಾಗಿ ಉಮೇಶ್ ಕುಂದರ್, ಜೊತೆ ಕಾರ್ಯದರ್ಶಿಯಾಗಿ ಲಕ್ಷ್ಮೀ ಮತ್ತು ನಳಿನಿ ಎಸ್., ಕೋಶಾಧಿಕಾರಿಯಾಗಿ ಜ್ಯೋತಿ ದೊಡ್ಡಣಗುಡ್ಡೆ ಮತ್ತು 15 ಮಂದಿ ಕಮಿಟಿ ಸದಸ್ಯರನ್ನು ಆರಿಸಲಾಯಿತು.
ಅಧ್ಯಕ್ಷತೆಯನ್ನು ಸುಜಾತ ಶೆಟ್ಟಿ ವಹಿಸಿದ್ದರು. ಸಭೆಯಲ್ಲಿ ಎರಡು ಬೇಡಿಕೆಗಳ ಠರಾವು ಮಂಡಿಸಲಾಯಿತು. ಜಿಲ್ಲಾ ಬೀಡಿ ಫೆಡರೇಶನ್ ಅಧ್ಯಕ್ಷ ಮಹಾಬಲ ವಡೇರಹೋಬಳಿ, ಕುಂದಾಪುರ ಬೀಡಿ ಕೆಲಸಗಾರರ ಸಂಘದ ಕಾರ್ಯದರ್ಶಿ ಬಲ್ಕೀಸ್, ಬ್ರಹ್ಮಾವರ ಸಂಘದ ಕಾರ್ಯದರ್ಶಿ ವಿಠಲ ಪೂಜಾರಿ, ಸಿಐಟಿಯು ಜಿಲ್ಲಾ ಕೋಶಾಧಿಕಾರಿ ಶಶಿಧರ ಗೊಲ್ಲ, ತಾಲೂಕು ಸಮಿತಿ ಸದಸ್ಯ ಗಾಡ್ವಿನ್ ಫೆರ್ನಾಂಡಿಸ್, ಮಲ್ಪೆ ಸಂಘದ ಅಧ್ಯಕ್ಷೆ ಸುಗಂಧಿ, ಕಾರ್ಯದರ್ಶಿ ನಳಿನಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಉಮೇಶ್ ಕುಂದರ್ ಸ್ವಾಗತಿಸಿ ವಂದಿಸಿದರು.







