ಕರುಣಾನಿಧಿಯನ್ನು ಭೇಟಿಯಾದ ಸಿಎಂ ಪಳನಿಸಾಮಿ
ಚೆನ್ನೈ, ಜು. 30: ತಮಿಳುನಾಡಿನ ಮುಖ್ಯಮಂತ್ರಿ ಇಡಪ್ಪಾಡಿ ಕೆ. ಪಳನಿಸಾಮಿ ಹಾಗೂ ಉಪ ಮುಖ್ಯಮಂತ್ರಿ ಒ. ಪನ್ನೀರ್ಸೆಲ್ವಂ ಅನಾರೋಗ್ಯಕ್ಕೀಡಾಗಿರುವ ಡಿಎಂಕೆ ಅಧ್ಯಕ್ಷ ಎಂ. ಕರುಣಾನಿಧಿ ಅವರನ್ನು ಚೆನ್ನೈಯ ಆಸ್ಪತ್ರೆಯಲ್ಲಿ ಸೋಮವಾರ ಭೇಟಿಯಾದರು.
ಅನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಡಿಎಂಕೆ ವರಿಷ್ಠ ಪಳನಿಸಾಮಿ, ‘‘ನಾವು ಅವರನ್ನು ಕಾವೇರಿ ಆಸ್ಪತ್ರೆಯಲ್ಲಿ ಭೇಟಿಯಾದೆವು. ಅವರು ಆರೋಗ್ಯವಾಗಿದ್ದಾರೆ. ಗುಣಮುಖರಾಗುತ್ತಿದ್ದಾರೆ’’ ಎಂದರು. ಡಿಎಂಕೆ ಅಧ್ಯಕ್ಷ ಕರುಣಾನಿಧಿ ಅವರ ದೊಡ್ಡ ಸಂಖ್ಯೆಯ ಬೆಂಬಲಿಗರು ಕಾವೇರಿ ಆಸ್ಪತ್ರೆಯ ಹೊರಭಾಗದಲ್ಲಿ ಜಮಾಯಿಸಿದ್ದರು ಹಾಗೂ ಡಿಎಂಕೆ ನಾಯಕರ ಮನವಿಯ ಹೊರತಾಗಿಯೂ ಅಲ್ಲಿಂದ ತೆರಳಲು ನಿರಾಕರಿಸಿದರು. ಪೊಲೀಸರು ಲಾಠಿ ಚಾರ್ಜ್ ನಡೆಸಿದ ಹೊರತಾಗಿಯೂ ಬೆಂಬಲಿಗರು ಆಸ್ಪತ್ರೆಯ ಹೊರಭಾಗದಿಂದ ತೆರಳಲಿಲ್ಲ ಹಾಗೂ ತಮ್ಮ ನಾಯಕನ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ನೀಡುವಂತೆ ಆಸ್ಪತ್ರೆಯ ಸಿಬ್ಬಂದಿಯನ್ನು ಆಗ್ರಹಿಸಿದರು. ಆಸ್ಪತ್ರೆಯ ಒಳಗೆ ಪ್ರವೇಶಿಸಲು ಪ್ರಯತ್ನಿಸಿದ ಬೆಂಬಲಿಗರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದರು. ಡಿಎಂಕೆ ವರಿಷ್ಠರ ಗೋಪಾಲಪುರಂ ನಿವಾಸದ ಮುಂದೆ ಕೂಡ ಬೆಂಬಲಿಗರು ಸೇರಿದ್ದರು. ಈ ಹಿನ್ನೆಲೆಯಲ್ಲಿ ಕರುಣಾನಿಧಿ ಅವರ ನಿವಾಸ ಹಾಗೂ ಅವರು ದಾಖಲಾಗಿರುವ ಕಾವೇರಿ ಆಸ್ಪತ್ರೆಗೆ ಬಿಗು ಭದ್ರತೆ ಏರ್ಪಡಿಸಲಾಗಿತ್ತು.