ಪಿಣರಾಯಿ ವಿಜಯನ್-ವಿದ್ಯಾರ್ಥಿನಿ ಹನನ್ ಭೇಟಿ
ತಿರುವನಂತಪುರಂ, ಆ.1: ಮೀನು ಮಾರಾಟ ಮಾಡಿ ಕೇರಳಾದ್ಯಂತ ಸುದ್ದಿಯಾದ ಕಾಲೇಜು ವಿದ್ಯಾರ್ಥಿನಿ ಹನನ್ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರನ್ನು ಭೇಟಿಯಾಗಿದ್ದಾಳೆ. ಹನನ್ ಗೆ ಕೇರಳ ಸರಕಾರ ನೆರವು ಹಾಗು ರಕ್ಷಣೆ ನೀಡಲಿದೆ ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ.
ಈ ಬಗ್ಗೆ ಪಿಣರಾಯಿ ವಿಜಯನ್, ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದು, ಅಧಿಕಾರಿಗಳಿಗೆ ಈ ಕುರಿತು ಸೂಚನೆಯನ್ನು ನೀಡಿರುವುದಾಗಿ ತಿಳಿಸಿದ್ದಾರೆ. ಧೈರ್ಯದಿಂದ ಮುಂದುವರಿಯುವಂತೆ ತಾನು ಹನನ್ ಗೆ ತಿಳಿಸಿದ್ದೇನೆ ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ
“ಹನನ್ ಬಂದು ಭೇಟಿಯಾಗಿದ್ದಾಳೆ. ಸಚಿವ ಸಂಪುಟದ ಸಭೆ ಮುಗಿಸಿಕೊಂಡು ಬಂದಾಗ ಹನಾನ್ ಭೇಟಿಯಾದಳು. ಆ ಬಾಲಕಿಯ ಮುಖದ ನಗು ಕಂಡಾಗ ಸಂತೋಷವಾಯಿತು. ಶಿಕ್ಷಣ ಹಾಗು ದಿನದೂಡುವುದಕ್ಕಾಗಿ ಕೆಲಸ ಮಾಡುತ್ತಿರುವುದು ವರದಿಯಾದ ನಂತರ ಟ್ರೋಲ್ ದಾಳಿಗೆ ಹನನ್ ತುತ್ತಾಗಿದ್ದಾಳೆ. ಅಂದೇ ಸರಕಾರ ಹನನ್ ಗೆ ಎಲ್ಲ ನೆರವನ್ನು ನೀಡುವ ಮಾತುಕೊಟ್ಟಿದೆ. ತಪ್ಪಿತಸ್ಥರನ್ನು ಬಂಧಿಸಲಾಯಿತು. ಇದಕ್ಕೆ ಕೃತಜ್ಞತೆ ಸಲ್ಲಿಸಲಿಕ್ಕಾಗಿ ಹನನ್ ಬಂದಿದ್ದಳು” ಎಂದು ಪಿಣರಾಯಿ ವಿಜಯನ್ ಪೋಸ್ಟ್ ಮಾಡಿದ್ದಾರೆ.