ಉಡುಪಿ: ಇಂದಿರಾನಗರದಲ್ಲಿ ‘ಅಲ್ ಫಲಾಹ್ ಕ್ಲಿನಿಕ್’ ಉದ್ಘಾಟನೆ
ಬಡವರಿಗೆ ಉಚಿತ ಸೇವೆ

ಉಡುಪಿ, ಜು.30: ಜಮೀಯ್ಯತುಲ್ ಫಲಾಹ್ ಪ್ರಾಯೋಜಕತ್ವದಲ್ಲಿ ಕುಕ್ಕಿಕಟ್ಟೆ ಇಂದಿರಾನಗರದ ನಾಲ್ಕನೆ ಕ್ರಾಸ್ನಲ್ಲಿ ಬಡವರಿಗೆ ಉಚಿತ ಸೇವೆಯನ್ನು ನೀಡುವ ಉದ್ದೇಶದಿಂದ ಆರಂಭಿಸಲಾಗಿರುವ ಅಲ್ ಫಲಾಹ್ ಕ್ಲಿನಿಕ್ ಬುಧವಾರ ಉದ್ಘಾಟನೆಗೊಂಡಿತು.
ಕ್ಲಿನಿಕ್ ಉದ್ಘಾಟಿಸಿದ ಉಡುಪಿ ಸಿಎಸ್ಐ ಲೋಂಬಾರ್ಡ್ ಮೆಮೋರಿಯಲ್ ಆಸ್ಪತ್ರೆಯ ವೈದ್ಯ ಡಾ. ಗಣೇಶ್ ಕಾಮತ್ ಮಾತನಾಡಿ, ವೈದ್ಯಕೀಯ ಚಿಕಿತ್ಸೆ ಇಂದು ಬಹಳ ದುಬಾರಿಯಾಗಿರುವ ಸಮಯದಲ್ಲಿ ಬಡವರಿಗೆ ಉಚಿತ ಚಿಕಿತ್ಸೆ ನೀಡುವ ಇಂತಹ ಕ್ಲಿನಿಕ್ ಅತಿ ಅಗತ್ಯವಾಗಿದೆ. ಬಡವರ ಸೇವೆಯಲ್ಲಿ ತೊಡಗಿಸಿಕೊಂಡಿರುವ ಈ ಸಂಘಟನೆ ಇನ್ನಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡಲಿ ಎಂದು ಹಾರೈಸಿದರು.
ನಗರಸಭೆ ಸದಸ್ಯರಾದ ಹೇಮಲಾತ ಹಿಲರಿ ಜತ್ತನ್ನ, ಶಾಂತಾರಾಮ್ ಸಾವಲ್ವಕರ್, ಅಲ್ ಫಲಾಹ್ ಕ್ಲಿನಿಕ್ನ ವೈದ್ಯ ಡಾ. ಮುಹಮ್ಮದ್ ಫಹೀಮ್ ಅಬ್ದುಲ್ಲಾ, ಉಡುಪಿ ಜಿಲ್ಲಾ ವಕ್ಫ್ ಸಲಹಾ ಮಂಡಳಿಯ ಅಧ್ಯಕ್ಷ ಇಬ್ರಾಹಿಂ ಮಟಪಾಡಿ, ಸಿಎಸ್ಐ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ರೋಹಿ ರತ್ನಾಕರ್, ಜಮೀಯ್ಯತುಲ್ ಫಲಾಹ್ ಕಾಪು ಘಟಕದ ಅಧ್ಯಕ್ಷ ಶಭಿ ಅಹ್ಮದ್ ಖಾಝಿ ಮುಖ್ಯ ಅತಿಥಿಗಳಾಗಿದ್ದರು.
ಹಾಫಿಝ್ ಮುಹಮ್ಮದ್ ನದೀಮ್ ಕುರ್ ಆನ್ ಪಠಿಸಿದರು. ಜಮೀಯ್ಯತುಲ್ ಫಲಾಹ್ ಉಡುಪಿ ಘಟಕದ ಅಧ್ಯಕ್ಷ ಖತೀಬ್ ಅಬ್ದುಲ್ ರಶೀದ್ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ಜತೆ ಕಾರ್ಯದರ್ಶಿ ಮುಶೀರ್ ಶೇಖ್, ಸಂಘಟನಾ ಕಾರ್ಯದರ್ಶಿ ನಾಸಿರ್ ಯಾಕೂಬ್, ಕೋಶಾಧಿಕಾರಿ ಸಮೀರ್ ಎಂ. ಉಪಸ್ಥಿತರಿದ್ದರು. ಕಾರ್ಯದರ್ಶಿ ಖಾಸಿಮ್ ಬಾರಕೂರು ಕಾರ್ಯಕ್ರಮ ನಿರೂಪಿಸಿದರು.







