ಬೆಂಗಳೂರು ಕೆಂದ್ರ ವಿ.ವಿ ಸೆಂಟ್ರಲ್ ಕಾಲೇಜಿನ ಪತ್ರಿಕೋದ್ಯಮ ವಿಭಾಗಕ್ಕೆ ಬೀಗ
ಬೆಂಗಳೂರು, ಆ.1: ಬೆಂಗಳೂರು ಕೆಂದ್ರ ವಿಶ್ವವಿದ್ಯಾಲಯದ ಸೆಂಟ್ರಲ್ ಕಾಲೇಜಿನಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗಕ್ಕೆ ಬೀಗ ಹಾಕಲು ವಿಶ್ವವಿದ್ಯಾಲಯ ನಿರ್ಧರಿಸಿದೆ.
ವಿಶ್ವವಿದ್ಯಾಲಯದ ಈ ನಿರ್ಧಾರದಿಂದಾಗಿ ಪದವೀಧರರಾಗಿ ಹೊರಬಂದಿರುವ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಗಳಿಸುವ ಆಕಾಂಕ್ಷೆ ಹೊಂದಿರುವ ವಿದ್ಯಾರ್ಥಿಗಳಿಗೆ ತೀವ್ರ ಬೇಸರವನ್ನುಂಟು ಮಾಡಿದೆ.
ವಿಭಾಗದಲ್ಲಿ ಅಗತ್ಯ ಬೋಧಕ ಸಿಬ್ಬಂದಿ ಹಾಗೂ ಮೂಲಭೂತ ಸೌಕರ್ಯಗಳ ಕೊರತೆಯಿಂದ ಮುಚ್ಚಲಾಗುತ್ತಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯ ಕಾರಣ ನೀಡುತ್ತಿದೆ. ಈ ವರ್ಷ ಸ್ನಾತಕೋತ್ತರ ಅಧ್ಯಯನಕ್ಕೆ ಅರ್ಜಿಗಳನ್ನು ಆಹ್ವಾನಿಸದೆ, ಕೋರ್ಸ್ ರದ್ದು ಮಾಡಿ ಇತ್ತೀಚಿಗೆ ಅಧಿಸೂಚನೆ ಹೊರಡಿಸಲಾಗಿದೆ. ಇದರಿಂದ ಪದವಿ ಮುಗಿಸಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡಬೇಕೆಂದು ಬಯಸುವ ಬೆಂಗಳೂರು ಉತ್ತರ ಭಾಗದಲ್ಲಿ ನೆಲೆಸಿರುವ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಲಿದೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಬೇಕಾದರೆ ಜ್ಞಾನಭಾರತಿ ಕ್ಯಾಂಪಸ್ ಅಥವಾ ಕೋಲಾರದ ಸ್ನಾತಕೋತ್ತರ ಕೇಂದ್ರದಲ್ಲಿರುವ ಬೆಂಗಳೂರು ಉತ್ತರ ವಿಶ್ವವಿದ್ಯಾಲಯಕ್ಕೆ ಹೋಗಬೇಕಾಗುತ್ತದೆ. ದೂರದಿಂದ ಬರುವ ವಿದ್ಯಾರ್ಥಿಗಳಿಗೆ ಜ್ಞಾನಭಾರತಿ ಬಹಳಷ್ಟು ದೂರವಾಗುತ್ತದೆ. ಅದರ ನಡುವೆ 6 ಗಂಟೆಗಳ ಕಾಲ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುವುದಿಲ್ಲ ಎಂದು ಕೇಂದ್ರ ವಿಶ್ವವಿದ್ಯಾಲಯದ ತೀರ್ಮಾನಕ್ಕೆ ಹಿರಿಯ ಪ್ರಾಧ್ಯಾಪಕರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.
ಈ ವರ್ಷ ದ್ವಿತೀಯ ವರ್ಷದ ಸ್ನಾತಕೋತ್ತರ ಪದವಿ ಪಡೆಯುತ್ತಿರುವವರಿಗೆ ತರಗತಿಗಳು ನಡೆಯುತ್ತಿದ್ದು ಇವರ ತಂಡ ಕೊನೆಯದಾಗಲಿದೆ. ಸೌಲಭ್ಯಗಳ ಕೊರತೆಯಿದೆ ಎಂದು ಹೇಳುವ ವಿವಿ, ಪತ್ರಿಕೋದ್ಯಮ ತರಗತಿಗಳನ್ನು ನಡೆಸಲು ಹೆಚ್ಚಿನ ಮೂಲಭೂತ ಸೌಕರ್ಯಗಳು ಅಗತ್ಯವಿಲ್ಲ. ಪ್ರಯೋಗಾಲಯ, ಸ್ಟುಡಿಯೊಗಳ ಅಗತ್ಯವಿಲ್ಲ. ದೃಶ್ಯ ಮಾಧ್ಯಮಗಳಿಗೆ ಮಾತ್ರ ಬೇಕಾಗಬಹುದು. ಬೇರೆ ಕೋರ್ಸ್ಗಳಿಗೆ ಬೋಧಕ ಸಿಬ್ಬಂದಿಯನ್ನು ನೇಮಕ ಮಾಡುವಂತೆ ಇಲ್ಲಿಯೂ ಮಾಡಬಹುದು. ಅತಿಥಿ ಉಪನ್ಯಾಸಕರನ್ನೂ ನೇಮಕ ಮಾಡಬಹುದು ಎಂದು ಮತ್ತೊಬ್ಬ ಹಿರಿಯ ಉಪನ್ಯಾಸಕರು ಅಭಿಪ್ರಾಯಿಸಿದ್ದಾರೆ.
ಈ ಸಂಬಂಧ ಕೇಂದ್ರ ವಿಶ್ವವಿದ್ಯಾಲಯದ ಅಧಿಕಾರಿಗಳು ಇದು ತಾತ್ಕಾಲಿಕ ಕ್ರಮ ಅಷ್ಟೇ. ಕೋರ್ಸ್ ಅನ್ನು ಶಾಶ್ವತವಾಗಿ ಮುಚ್ಚುವುದಿಲ್ಲ. ಸಿಬ್ಬಂದಿ ಕೊರತೆಯಿಂದ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಮಾತ್ರ ಪ್ರವೇಶಾತಿ ನೀಡಿಲ್ಲ ಎಂದು ಹೇಳಿದ್ದಾರೆ.







