ಮಮತಾ ಬ್ಯಾನರ್ಜಿ ವಿರುದ್ಧ ದೂರು ದಾಖಲು
ಗುವಾಹಟಿ,ಆ.1: ರಾಷ್ಟ್ರೀಯ ಪೌರತ್ವ ರಿಜಿಸ್ಟರ್(ಎನ್ಆರ್ಸಿ)ನ್ನು ತನ್ನ ರಾಜ್ಯಕ್ಕೆ ವಿಸ್ತರಿಸಿದರೆ ಅದು ನಾಗರಿಕ ಯುದ್ಧ ಮತ್ತು ರಕ್ತಪಾತಕ್ಕೆ ಕಾರಣವಾಗಲಿದೆ ಎಂಬ ಹೇಳಿಕೆಗಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವಿರುದ್ಧ ಬಿಜೆಪಿಯ ಯುವಘಟಕವಾಗಿರುವ ಭಾರತೀಯ ಜನತಾ ಯುವ ಮೋರ್ಚಾ ಅಸ್ಸಾಮಿನ ದಿಬ್ರುಗಡದ ನಹರ್ಕಾಟಿಯಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
ದೂರನ್ನು ಗುವಾಹಟಿಯಲ್ಲಿರುವ ಪೊಲೀಸ್ ಮುಖ್ಯಕಚೇರಿಗೆ ರವಾನಿಸಲಾಗುವುದು ಎಂದು ದಿಬ್ರುಗಡ ಪೊಲೀಸರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಮಂಗಳವಾದ ದಿಲ್ಲಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಎನ್ಆರ್ಸಿ ಕುರಿತು ಮಾತನಾಡುತ್ತ ಈ ಹೇಳಿಕೆ ನೀಡಿದ್ದ ಬ್ಯಾನರ್ಜಿ,ಜಾರ್ಖಂಡ್ನಲ್ಲಿ ಮಿಷನರೀಸ್ ಆಫ್ ಚ್ಯಾರಿಟೀಸ್ ಭಾಗಿಯಾಗಿರುವ ಮಕ್ಕಳ ಕಳ್ಳ ಸಾಗಣೆ ನಡೆದಿದೆ. ದೇಶದಲ್ಲಿ ಗುಂಪಿನಿಂದ ಹತ್ಯೆಗಳು,ದಲಿತರು ಮತ್ತು ಮುಸ್ಲಿಮರ ವಿರುದ್ಧ ದೌರ್ಜನ್ಯಗಳು ನಡೆಯುತ್ತಿವೆ. ನಾವು ಇವುಗಳನ್ನು ಬೆಂಬಲಿಸುವುದಿಲ್ಲ. ಇದು ಹೀಗೆಯೇ ಮುಂದುವರಿದರೆ ನಾಗರಿಕ ಯುದ್ಧ ಮತ್ತು ರಕ್ತಪಾತಕ್ಕೆ ಕಾರಣವಾಗುತ್ತದೆ ಎಂದು ಹೇಳಿದ್ದರು.