ಮುಳುವಾರೆ: ದಲಿತರ ನಡುವಿನ ನಿವೇಶನ ಜಾಗ ವಿವಾದ; ಸ್ಥಳೀಯರಿಗೆ ನಿವೇಶನ ಕಲ್ಪಿಸಲು ಒತ್ತಾಯಿಸಿ ಡಿಸಿಗೆ ಮನವಿ

ಚಿಕ್ಕಮಗಳೂರು, ಆ.2: ತಾಲೂಕಿನ ಆಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಮುಳುವಾರೆ ಗ್ರಾಮದಲ್ಲಿ ಸ್ಥಳೀಯ ದಲಿತರೇ ಕಾಯ್ದುಕೊಂಡು ಬಂದ ನಿವೇಶನ ಜಾಗವನ್ನು ಸ್ಥಳೀಯ ನಿವೇಶನ ರಹಿತ ದಲಿರಿಗೆ ನೀಡಬೇಕೆಂದು ಒತ್ತಾಯಿಸಿ ಮುಳುವಾರೆ ಗ್ರಾಮದ ದಲಿತ ಕಾಲನಿ ನಿವಾಸಿಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಗ್ರಾಮದ 100ಕ್ಕೂ ಹೆಚ್ಚು ನಿವಾಸಿಗಳು ಗುರುವಾರ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದು, ತಾವು ಕಳೆದ 25 ವರ್ಷಗಳಿಂದ ಆಣೂರು ಗ್ರಾಪಂ ವ್ಯಾಪ್ತಿಯ ಸ.ನಂ210ರಲ್ಲಿರುವ 186 ಎಕರೆ ಗೋಮಾಳ ಜಾಗದ ಪೈಕಿ 3 ಎಕರೆಯಷ್ಟು ಖಾಲಿ ಜಾಗವನ್ನು ಮುಳುವಾರೆ ಗ್ರಾಮದಸ್ಥಳೀಯ ನಿವೇಶನ ರಹಿತರಿಗೆ ನಿವೇಶನ ಕಲ್ಪಿಸುವ ಉದ್ದೇಶದಿಂದ ಕಾಯ್ದುಕೊಂಡು ಬಂದಿದ್ದು, ಪ್ರಸಕ್ತ ಗ್ರಾಮ ಪಂಚಾಯತ್ ನಿವೇಶನ ರಹಿತರ ಪಟ್ಟಿ ತಯಾರಿಸುವ ಸಂದರ್ಭದಲ್ಲಿ ಮುಳುವಾರೆ ಪಕ್ಕದ ಗ್ರಾಮದವಾದ ಕೆಸರಿಕೆ ಗ್ರಾಮದ ಕೆಲ ದಲಿತ ಮುಖಂಡರು ತಾವು ಮೀಸಲಿಟ್ಟ ಜಾಗದಲ್ಲೇ ನಿವೇಶನ ಕಲ್ಪಿಸಬೇಕೆಂದು ಪಟ್ಟು ಹಿಡಿದಿದ್ದಾರೆ. ಇದರಿಂದಾಗಿ ಸ್ಥಳೀಯರು ನಿವೇಶನ ಸೌಲಭ್ಯದಿಂದ ವಂಚಿತರಾಗುವ ಭೀತಿ ಎದುರಾಗಿದೆ. ಈ ಸಮಸ್ಯೆ ಸಂಬಂಧ ಗ್ರಾಪಂ ಅಧಕಾರಿಗಳು, ಜನಪ್ರತಿನಿಧಿಗಳು ಮೌನವಹಿಸಿದ್ದು, ಜಿಲ್ಲಾಧಿಕಾರಿ ಸೂಕ್ತ ಕ್ರಮವಹಿಸಿ ಸ್ಥಳೀಯರಿಗೆ ಈ ಜಾಗದಲ್ಲಿ ನಿವೇಶನ ನೀಡಬೇಕೆಂದು ಮನವಿಯಲ್ಲಿ ಕೋರಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಳುವಾರೆ ಗ್ರಾಮದ ಮುಖಂಡರು, ತಾವು ಅನಾದಿಕಾಲದಿಂದಲೂ ಮುಳುವಾರೆ ಗ್ರಾಮದಲ್ಲಿ ವಾಸಿಸುತ್ತಿದ್ದೇವೆ. ಇಲ್ಲಿನ ನಿವಾಸಿಗಳು ಬಹುತೇಕ ಕೂಲಿ ಕಾರ್ಮಿಕರಾಗಿದ್ದು, ಸೂಕ್ತ ನಿವೇಶನ, ಆಶ್ರಯಮನೆಯ ಸೌಲಭ್ಯವಿಲ್ಲದೇ ಕಾಲನಿಯ ಒಂದೇ ಮನೆಯಲ್ಲಿ ಮೂರು, ನಾಲ್ಕು ಕುಟುಂಬಗಳು ವಾಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ತಮ್ಮ ಕಾಲನಿಯ ಹಿರಿಯರು ಕಾಲನಿ ಸಮೀಪದ ಸ.ನಂ.210ರಲ್ಲಿ ಸುಮಾರು 3 ಎಕರೆಯಷ್ಟು ಸರಕರಿ ಗೋಮಾಳ ಜಾಗವನ್ನು ನಿವೇಶನಕ್ಕಾಗಿಯೇ ಕಾಯ್ದುಕೊಂಡು ಬಂದಿದ್ದಾರೆ. ಈ ಜಾಗವನ್ನು ಒತ್ತುವರಿ ಮಾಡಲು ಸ್ಥಳೀಯ ಪ್ರಭಾವಿಗಳು ಮುಂದಾದಾಗಲೂ ಕಾಲನಿ ನಿವಾಸಿಗಳು ಜಾಗ ಒತ್ತುವರಿಯಾಗುವುದನ್ನು ತಡೆದಿದ್ದಾರೆ. ಸದ್ಯ ಮುಳುವಾರೆಯಲ್ಲಿರುವ ಈ ನಿವೇಶನ ಜಾಗದಲ್ಲಿ ಪಕ್ಕದ ಕೆಸರಿಕೆ ಗ್ರಾಮದ ದಲಿತ ಕಾಲನಿಯ ನಿವೇಶನ ರಹಿತರು ನಿವೇಶನ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ. ಹೀಗೆ ಮಾಡಿದಲ್ಲಿ ಮುಳುವಾರೆ ಗ್ರಾಮದಲ್ಲಿರುವ ನೂರಾರು ನಿವೇಶನ ರಹಿತರು ಬೀದಿಪಾಲಾಗುತ್ತಾರೆ. ಆದ್ದರಿಂದ ಈ ತಾವು ಇಷ್ಟು ವರ್ಷ ಕಾಯ್ದುಕೊಂಡು ಬಂದಿರುವ ಜಾಗದಲ್ಲಿ ಸ್ಥಳೀಯರಿಗೇ ನಿವೇಶನ ಕಲ್ಪಿಸಬೇಕು. ಕೆಸರಿಕೆ ಗ್ರಾಮದವರಿಗೆ ಸ.ನಂ.220ರಲ್ಲಿ 13 ಎಕರೆ ಗೋಮಾಳ ಜಾಗ ಖಾಲಿ ಇದ್ದು, ಅಲ್ಲಿ ನಿವೇಶನ ನೀಡಲು ಜಿಲ್ಲಾಡಳಿತ ಅಗತ್ಯ ಕ್ರಮ ವಹಿಸಿ ಈ ಸಮಸ್ಯೆಗೆ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದರು.
ಜಾಗದ ವಿವಾದ ಸಂಬಂಧ ಜಿಲ್ಲಾಧಿಕಾರಿಗೆ ಮನವಿ ನೀಡಿದ್ದೇವೆ. ನಿವೇಶನ ಜಾಗ ಸಂಬಂಧ ಗ್ರಾಮ ಪಂಚಾಯತ್ ಸಭೆಯಲ್ಲಿ ಅನುಮೋದಿಸಿ ಮನವಿಸಲ್ಲಿಸಿದ್ದಲ್ಲಿ ನಿವೇಶನ ಜಾಗವನ್ನು ಸ್ಥಳೀಯರಿಗೆ ಮಂಜೂರು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆಂದು ಇದೇ ವೇಳೆ ಮುಳುವಾರೆ ಗ್ರಾಮಸ್ಥರು ತಿಳಿಸಿದರು.
ಗ್ರಾಮದ ದಲಿತ ಮುಖಂಡರಾದ ಭೈರಪ್ಪ, ಪುಟ್ಟಸ್ವಾಮಿ, ಮಂಜುನಾಥ್, ಮಂಜುಳಾ, ರೋಹಿಣಿ. ಲಕ್ಷ್ಮೀ ಹಾಗೂ ನೂರಾರು ನಿವೇಶನ ರಹಿತರು ಈ ವೇಳೆ ಉಪಸ್ಥಿತರಿದ್ದರು.







