ಕಾನೂನು ಬಾಹಿರವಾಗಿ ಜಾನುವಾರುಗಳ ವಶ: ನ್ಯಾಯ ಒದಗಿಸುವಂತೆ ಮುಖ್ಯಮಂತ್ರಿಗೆ ವ್ಯಾಪಾರಿಗಳ ಮನವಿ
ಬೆಂಗಳೂರು, ಆ.5: ವ್ಯಾಪಾರಕ್ಕಾಗಿ ಖರೀದಿಸುವ ಜಾನುವಾರುಗಳನ್ನು ಕೆಲವು ಸಂಘಟನೆಗಳು ಕಾನೂನು ಬಾಹಿರವಾಗಿ ವಶಕ್ಕೆ ಪಡೆದುಕೊಂಡು ವ್ಯಾಪಾರಿಗಳಿಗೆ ಕಿರುಕುಳ ನೀಡುತ್ತಿರುವುದನ್ನು ತಪ್ಪಿಸಿ, ನ್ಯಾಯ ಒದಗಿಸಿಕೊಡಬೇಕು ಎಂದು ಜಮೀಯತ್ ಉಲ್ ಖುರೇಷ್ ಬೀಫ್ ಮರ್ಚೆಂಟ್ಸ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಏಜಾಝ್ ಖುರೇಷಿ ಮನವಿ ಮಾಡಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯನ್ನು ಮಾಜಿ ಸಚಿವ ರೋಷನ್ಬೇಗ್ ನೇತೃತ್ವದಲ್ಲಿ ಭೇಟಿ ಮಾಡಿದ ಖುರೇಷಿ ಸಮುದಾಯದ ಮುಖಂಡರು ತಮಗೆ ಆಗುತ್ತಿರುವ ಕಿರುಕುಳ ಕುರಿತು ಮನವರಿಕೆ ಮಾಡಿಕೊಟ್ಟರು.
ನಮ್ಮ ಖುರೇಷಿ ಸಮುದಾಯದವರು ವ್ಯಾಪಾರಕ್ಕಾಗಿ ಬೆಂಗಳೂರು ಜಿಲ್ಲೆಯ ಸುತ್ತಮುತ್ತಲಿನ ಪ್ರದೇಶಗಳಿಂದ ಜಾನುವಾರುಗಳನ್ನು ಖರೀದಿಸುವುದು ಹಾಗೂ ಮಾರಾಟ ಮಾಡುವ ವೃತ್ತಿಯನ್ನು ಅವಲಂಬಿಸಿದ್ದಾರೆ. ನಾವು ಶಾಂತಿಪ್ರಿಯ ಜನ. ಸಮಾಜದ ಆರ್ಥಿಕ, ಸಾಮಾಜಿಕ ಶ್ರೇಯೋಭಿವೃದ್ದಿಗಾಗಿ ಶ್ರಮಿಸುತ್ತಿದ್ದೇವೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ನಾವು ಜಾನುವಾರುಗಳನ್ನು ಸಾಗಿಸುವ ವಾಹನಗಳನ್ನು ಕೆಲವು ಸಮಾಜಘಾತುಕ ಶಕ್ತಿಗಳು ಹಣಕ್ಕಾಗಿ ತಡೆದು ಹಿಂಸುತ್ತಿರುವುದು ನಿರಂತರವಾಗಿ ನಡೆಯುತ್ತಿದೆ. ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಸುವುದಲ್ಲದೆ, ಅವಾಚ್ಯಶಬ್ಧಗಳಿಂದ ನಿಂದಿಸುತ್ತಾರೆ. ಇವರಿಗೆ ಜಾನುವಾರುಗಳ ರಕ್ಷಕರು ಎಂದು ಕರೆಯಲ್ಪಡುವ ಕೆಲವು ಸಂಘಟನೆಗಳು ಬೆಂಬಲ ನೀಡುತ್ತಿವೆ ಎಂದು ಅವರು ದೂರಿದರು.
ಇತ್ತೀಚಿನ ಕೆಲವು ತಿಂಗಳುಗಳಿಂದ ತನ್ನನ್ನು ಜಾನುವಾರುಗಳ ರಕ್ಷಕಿ ಎಂದು ಬಿಂಬಿಸಿಕೊಳ್ಳುತ್ತಿರುವ ಮಹಿಳೆಯೊಬ್ಬರು, ಈ ಸಮಾಜಘಾತುಕ ಶಕ್ತಿಗಳೊಂದಿಗೆ ಸೇರಿ ನಮ್ಮ ವಾಹನಗಳನ್ನು ತಡೆದು, ಅದರಲ್ಲಿರುವ ಜಾನುವಾರುಗಳನ್ನು ವಶಪಡಿಸಿ =ಕೊಳ್ಳುತ್ತಿದ್ದಾರೆ. ವ್ಯಾಪಾರಿಗಳು ತಮ್ಮ ಜಾನುವಾರುಗಳನ್ನು ಕಳೆದುಕೊಂಡು ಅಸಹಾಯಕರಾಗಿ, ತಮ್ಮ ಜೀವನೋಪಾಯವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಮುಖ್ಯಮಂತ್ರಿಗೆ ಅವರು ತಿಳಿಸಿದರು.
ನಮ್ಮ ವ್ಯಾಪಾರಿಗಳು ಜಾನುವಾರುಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುವಾಗ ಅವರ ವಾಹನಗಳಿಗೆ ಸೂಕ್ತ ಭದ್ರತೆ ಒದಗಿಸುವಂತೆ ಸಂಬಂಧಪಟ್ಟ ಪೊಲೀಸ್ ಠಾಣೆಗಳಿಗೆ ನಿರ್ದೇಶನ ನೀಡಬೇಕು. ಜಾನುವಾರು ಸಂರಕ್ಷಣಾ ಕಾಯ್ದೆ ದುರುಪಯೋಗಪಡಿಸಿಕೊಂಡು ಲಕ್ಷಾಂತರ ಜಾನುವಾರುಗಳನ್ನು ವಶಕ್ಕೆ ಪಡೆದು ಕೊಳ್ಳುತ್ತಿರುವ ಪ್ರಾಣಿ ದಯಾ ಸಂಘ, ಗೋರಕ್ಷಾ ಸಂತ ಸೇರಿದಂತೆ ಇನ್ನಿತರ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಜಾನುವಾರುಗಳಿಗೆ ಸರಿಯಾದ ರೀತಿಯಲ್ಲಿ ಮೇವು ಹಾಕುವ ಸಾಮರ್ಥ್ಯವನ್ನು ಈ ಸಂಘಟನೆಗಳು ಹೊಂದಿಲ್ಲ. ಅಶಕ್ತರಾಗುವ ಜಾನುವಾರುಗಳನ್ನು ಕೊಂದು ಅವುಗಳ ಉಪ ಉತ್ಪನ್ನಗಳನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಈ ಚಟುವಟಿಕೆಗಳನ್ನು ಮಾಧ್ಯಮಗಳೇ ಹಲವಾರು ಬಾರಿ ಬೆಳಕಿಗೆ ತಂದಿವೆ ಎಂದು ಏಜಾಝ್ ಖುರೇಷಿ ತಿಳಿಸಿದರು.
ಹಾಲು ನೀಡುವ ಹಾಗೂ ಆರೋಗ್ಯಕರವಾಗಿರುವ ಜಾನುವಾರುಗಳನ್ನು ನಮ್ಮ ವ್ಯಾಪಾರಿಗಳು ವಧೆ ಮಾಡುವುದಿಲ್ಲ. ಆದರೂ, ನಮ್ಮ ವಿರುದ್ಧ ಅಪಪ್ರಚಾರ ನಡೆಸಲಾಗುತ್ತಿದೆ. ಸಕ್ಷಮ ಪ್ರಾಧಿಕಾರಗಳಿಂದ ಅನುಮತಿಸಲ್ಪಡುವ ಜಾನುವಾರುಗಳನ್ನು ಮಾತ್ರ ವಧಾಗಾರಗಳಲ್ಲಿ ವಧೆ ಮಾಡಲಾಗುತ್ತಿದೆ. ಆದರೆ, ಈ ಸಂಘಟನೆಗಳು ಅಪಪ್ರಚಾರ ಮಾಡಿ ವ್ಯಾಪಾರಿಗಳು ಮಾರಾಟ ಮಾಡಲು ತಂದಿರುವ ಜಾನುವಾರುಗಳನ್ನು ತಮ್ಮ ವಶಕ್ಕೆ ಪಡೆಯುತ್ತಿದ್ದಾರೆ ಎಂದು ಅವರು ಅಸಮಾಧಾನ ಹೊರ ಹಾಕಿದರು.
ಈ ಸಮಾಜಘಾತುಕ ಶಕ್ತಿಗಳು ಕರ್ನಾಟಕ ಜಾನುವಾರು ಸಂರಕ್ಷಣಾ ಕಾಯ್ದೆ 1964 ಅನ್ನು ತಮ್ಮ ಆಯುಧದಂತೆ ಬಳಸಿಕೊಂಡು ಕಾನೂನು ಪ್ರಕಾರ ಜಾನುವಾರುಗಳ ಸಾಗಾಟ ನಡೆಯುತ್ತಿದ್ದರೂ ಅಪಪ್ರಚಾರದ ಮೂಲಕ ರಾಜ್ಯದಲ್ಲಿ ಕೋಮುಸಾಮರಸ್ಯ ಕದಡುವ ಪ್ರಯತ್ನ ಮಾಡುತ್ತಿವೆ ಎಂದು ಏಜಾಝ್ ಖುರೇಷಿ ದೂರಿದರು.
ತನಿಖಾ ಸಮಿತಿ ರಚಿಸಿ: ಈ ಮೇಲ್ಕಂಡ ಸಂಘಟನೆಗಳ ಅಧೀನದಲ್ಲಿ ಎಷ್ಟು ಜಾನುವಾರುಗಳಿವೆ ?, ವ್ಯಾಪಾರಿಗಳಿಗೆ ಸಂಬಂಧಿಸಿದ ಜಾನುವಾರುಗಳಿಂದ ಈ ಸಂಘಟನೆಗಳು ಮಾಡಿರುವ ಲಾಭವೆಷ್ಟು? ನ್ಯಾಯಾಲಯದ ಆದೇಶದಂತೆ ಈ ಸಂಘಟನೆಗಳು ಎಷ್ಟು ಜಾನುವಾರುಗಳನ್ನು ವ್ಯಾಪಾರಿಗಳಿಗೆ ಮರಳಿಸಿದ್ದಾರೆ ಎಂಬುದರ ಕುರಿತು ವಿವರವಾದ ಮಾಹಿತಿ ಸಂಗ್ರಹಿಸಲು ಒಂದು ತನಿಖಾ ಸಮಿತಿಯನ್ನು ರಚನೆ ಮಾಡಿ ಎಂದು ಮುಖ್ಯಮಂತ್ರಿಗೆ ಏಜಾಝ್ ಖುರೇಷಿ ಮನವಿ ಮಾಡಿದರು.







