ಅಕ್ರಮ ವಲಸಿಗರ ಪರ ವಕಾಲತ್ತು ವಹಿಸಿರುವ ಕಾಂಗ್ರೆಸ್, ಟಿಎಂಸಿ ರಾಷ್ಟ್ರಘಾತುಕರು: ಶಾಸಕ ರವಿ ಆಕ್ರೋಶ

ಚಿಕ್ಕಮಗಳೂರು, ಆ.7: ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಪೌರತ್ವ ನೋಂದಣಿ ಅಭಿಯಾನವನ್ನು ಮಾಡಲಾಗುತ್ತಿದೆ. ಅಸ್ಸಾಂ ರಾಜ್ಯವೊಂದರಲ್ಲೇ 40 ಲಕ್ಷಕ್ಕೂ ಹೆಚ್ಚು ಜನ ಅಕ್ರಮ ಬಾಂಗ್ಲಾ ನುಸುಳುಕೋರರು ಇರುವುದು ಅಭಿಯಾನದಿಂದ ಪತ್ತೆಯಾಗಿದೆ. ಅಕ್ರಮ ವಸಿಗರ ಪರ ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ವಕಾಲತ್ತು ವಹಿಸುವ ಮೂಲಕ ರಾಷ್ಟ್ರಘಾತುಕ ಕೆಲಸದಲ್ಲಿ ತೊಡಗಿವೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ಆರೋಪಿಸಿದ್ದಾರೆ.
ಮಂಗಳವಾರ ನಗರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷದವರು ಅಕ್ರಮ ವಲಸಿಗರು ಮತ್ತು ಬಾಂಗ್ಲಾ ನುಸುಳುಕೋರಪರವಾಗಿ ಪರ ವಕಾಲತ್ತು ವಹಿಸಿ ಮಾತನಾಡುತ್ತಿದ್ದಾರೆ. 1972ರಲ್ಲೆ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಅವರು ಸಾರ್ವಜನಿಕವಾಗಿ ಮತ್ತು ಸಂಸತ್ನಲ್ಲಿ ಅಕ್ರಮ ವಲಸಿಗರನ್ನು ತಡೆಗಟ್ಟುವ ವಾಗ್ದಾನ ಮಾಡಿದ್ದರು. 1985ರಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಎನ್.ಆರ್.ಸಿ. ರಚನೆ ಮತ್ತು ಅಕ್ರಮ ವಲಸಿಗರನ್ನು ಗುರುತಿಸಿ ಹೊರ ಹಾಕುವುದಾಗಿ ದೇಶದ ಜನತೆಗೆ ಭರವಸೆ ನೀಡಿದ್ದರು. ಇದನ್ನು ಕಾಂಗ್ರೆಸ್ ಮುಖಂಡರು ಮರೆತಂತಿದೆ. 2002 ಮತ್ತು 2005ರಲ್ಲಿ ಅಕ್ರಮ ವಲಸಿಗರನ್ನು ಹೊರ ಹಾಕುವ ಕುರಿತು ಧ್ವನಿ ಎತ್ತಿದ್ದ ಮಮತಾ ಬ್ಯಾನರ್ಜಿ ಈಗ ಅದನ್ನು ಮರೆತು ಕೇವಲ ರಾಜಕೀಯ ಕಾರಣಕ್ಕಾಗಿ ಅಕ್ರಮ ವಲಸಿಗರ ಪರವಾಗಿ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ಅಕ್ರಮ ವಲಸಿಗರ ಪರವಾಗಿ ಮಾತನಾಡುತ್ತಾ ರಾಷ್ಟ್ರಘಾತುಕ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಪೌರತ್ವ ನೋಂದಣಿ ಅಭಿಯಾನವನ್ನು ದೇಶದಾದ್ಯಂತ ಮಾಡಬೇಕು. ದೇಶದಲ್ಲಿ 3 ಕೋಟಿಗೂ ಅಧಿಕ ಬಾಂಗ್ಲಾ ನುಸುಳುಕೋರರು ಇದ್ದಾರೆ ಎಂಬ ಮಾಹಿತಿ ಇದೆ. ದೇಶಾದ್ಯಂತ ಈ ಅಭಿಯಾನ ನಡೆಸಿ ಅಕ್ರಮ ವಲಸಿಗರನ್ನು ಪತ್ತೆ ಹಚ್ಚಿ ಅಕ್ರಮ ನುಸುಳುಕೋರರನ್ನು ದೇಶದಿಂದ ಹೊರಗಟ್ಟಬೇಕು. ಅವರ ಪರ ವಕಾಲತ್ತು ವಹಿಸುವವರನ್ನೂ ಅವರೊಂದಿಗೆ ದೇಶದಿಂದ ಹೊರದಬ್ಬಬೇಕೆಂದು ಅವರು ತಿಳಿಸಿದ ಅವರು, ಈಗಿನ ಕಾಂಗ್ರೆಸ್ ಪಕ್ಷವು ತಾನು ಭಾರತದ ಪರ ಇಲ್ಲ. ನಾವು ಅಕ್ರಮ ಬಾಂಗ್ಲಾ ನುಸುಳುಕೋರರ ಪರ ಎಂದು ತೋರಿಸುವ ಮೂಲಕ ಸ್ವಾತಂತ್ರ್ಯ ಹೋರಾಟದ ವಾರಸುದಾರ ಎಂದು ಹೇಳಿಕೊಳ್ಳುವ ಹಕ್ಕನ್ನು ಕಳೆದುಕೊಂಡಿದೆ. ಆ ಮೂಲಕ ತಾನು ಓಟಿಗಾಗಿ ಯಾವ ಹಂತಕ್ಕೆ ಬೇಕಾದರೂ ಇಳಿಯಬಲ್ಲೆ ಎಂಬುದನ್ನು ತೋರಿಸಿಕೊಟ್ಟಿದೆ ಎಂದು ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಕೋಟೆ ರಂಗನಾಥ್, ತಮ್ಮಣ್ಣ ಉಪಸ್ಥಿತರಿದ್ದರು.
ಸ್ಥಳೀಯ ಸಂಸ್ಥೆ ಚುನಾವಣೆ ಹಾಗೂ ಸಂಸತ್ ಚುನಾವಣೆಗಳಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳಿಸಬೇಕೆಂಬ ಹಿನ್ನೆಯಲ್ಲಿ ಆ.9ರಿಂದ ಪಕ್ಷದ ಮುಖಂಡರ ನೇತೃತ್ವದಲ್ಲಿ ಮೂರು ತಂಡಗಳು ರಾಜ್ಯಾದ್ಯಂತ ಕೈಗೊಳ್ಳಲಿದೆ. ಯಡಿಯೂರಪ್ಪ, ಗೋವಿಂದ ಕಾರಜೋಳ, ಶೋಭಾ ಕರಂದ್ಲಾಜೆ ನೇತೃತ್ವದ ತಂಡ, ಜಗದೀಶ್ ಶೆಟ್ಟರ್, ಆರ್.ಆಶೋಕ್, ಅರವಿಂದ ಲಿಂಬಾವಳಿ ನೇತೃತ್ವದ ತಂಡ ಹಾಗೂ ಈಶ್ವರಪ್ಪ ಹಾಗೂ ತನ್ನ ನೇತೃತ್ವದಲ್ಲಿ ಮೂರು ತಂಡಗಳನ್ನು ಈಗಾಗಲೇ ರಚಿಸಲಾಗಿದ್ದು, ತಮ್ಮ ತಂಡ ಆ.9ರಿಂದ ಮೈಸೂರಿನಿಂದ ಪ್ರವಾಸ ಆರಂಭಿಸಲಿದ್ದೇವೆ.
- ಸಿ.ಟಿ.ರವಿಭಗವಾನ್ಗೆ ಬುದ್ಧಿ ಭ್ರಮಣೆಯಾಗಿದೆ: ಸ್ವಾಮಿ ವಿವೇಕಾನಂದ ಹಾಗೂ ಬಸವಣ್ಣ ಅವರದ್ದು ಸಹಜ ಸಾವಲ್ಲ, ಅವರನ್ನು ಕೊಲೆ ಮಾಡಲಾಗಿದೆ ಎಂದು ಸಾಹಿತಿ ಭಗವಾನ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿ.ಟಿ.ರವಿ, ಭಗವಾನ್ ಅವರು ಕೇವಲ ಪ್ರಚಾರಕ್ಕಾಗಿ ಈ ರೀತಿಯ ಹೇಳಿಕೆ ನೀಡುತ್ತಿದ್ದಾರಷ್ಟೆ, ಅವರಿಗೆ ಬುಧ್ಧಿ ಭ್ರಮಣೆಯಾಗಿದೆ ಎಂಬುದನ್ನು ತೋರಿಸಿಕೊಳ್ಳಲು ಇಂತಹ ಹೇಳಿಕೆಗಳನ್ನು ಅವರು ಆಗಾಗ್ಗೆ ನೀಡುತ್ತಿದ್ದಾರೆ. ಭಗವಾನ್ ಅವರು ಇಂತಹ ಹೇಳಿಕೆಗಳನ್ನು ನೀಡುವುದು ಹೊಸದೇನಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.







