ಎಳೆಯ ಮಕ್ಕಳಲ್ಲಿ ಸಂಸ್ಕೃತಿಯ ಬೀಜ ಬಿತ್ತುವ ಕೆಲಸವಾಗಬೇಕು: ಕವಿ ವೆಂಕಟೇಶ್ ಮೂರ್ತಿ
ಮೈಸೂರು,ಆ.7: ಪುಸ್ತಕ ಮಸ್ತಕಕ್ಕೆ ಬರದೇ ಸಾರ್ಥಕತೆ ಪಡೆಯಲಾರದು, ಅದಕ್ಕಾಗಿ ಎಳೆಯ ಮಕ್ಕಳಲ್ಲಿ ಸಂಸ್ಕೃತಿಯ ಬೀಜ ಬಿತ್ತುವ ಕೆಲಸವಾಗಬೇಕು ಎಂದು ಖ್ಯಾತ ಕವಿ, ಲೇಖಕ ಡಾ.ಹೆಚ್.ಎಸ್.ವೆಂಕಟೇಶಮೂರ್ತಿ ತಿಳಿಸಿದರು.
ವಿಜಯನಗರದ ಮೊದಲನೇ ಹಂತದಲ್ಲಿರುವ ಭಾರತೀಯ ವಿದ್ಯಾಭವನ ಭವನ್ಸ್ ಪ್ರಿಯಂವದಾ ಬಿರ್ಲಾ ಇನ್ಸಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ವತಿಯಿಂದ ಸಂಸ್ಥೆಯ ಮಂಗಳವಾರ ನಾ.ರಾಮಾನುಜ ರಚಿತ ನಗೆ ನಾಟಕ 'ಗ್ರೀನ್ ರೂಂ ಗಲಾಟೆ' ಕೃತಿ ಲೋಕಾರ್ಪಣೆಗೊಳಿಸಿ, ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ರಾಮಾನುಜ ಅವರು ನಿಜವಾಗಿಯೂ ಸೊಗಸಾಗಿ ನಾಟಕಗಳನ್ನು ಬರೆಯುವವರು. ಇದಕ್ಕೂ ಹೆಚ್ಚಿನ ಹಾಸ್ಯ ನಾಟಕ ಬರೆಯುವ ಸಾಮರ್ಥ್ಯ ಅವರಲ್ಲಿದೆ. ಅವರು ಬದುಕನ್ನು ಕುರಿತು ಬರೆದರೂ ಅದು ಅದ್ಭುತ ಕೃತಿಯಾಗಲಿದೆ. ಕನ್ನಡ ಸಂಸ್ಕೃತಿಯನ್ನು ಕಟ್ಟಿಕೊಡುವ ಅದ್ಭುತ ಕಲಾಪ್ರಯೋಗ ಅದು. ಪಟ್ಟು ಹಿಡಿದು ಇಂಥ ಕೃತಿ ಬರೆಸಿ ಎಂದರು. ವೆಂಕಣಯ್ಯ ಅವರ ಹೆಸರಿನಲ್ಲಿ ಗ್ರಂಥಮಾಲೆ ತೆರೆದು ಅವರ ನೆನಪನ್ನು ಚಿರಂತನವಾಗಿಸುವ ಕೆಲಸ ಸಂಸ್ಥೆ ಮಾಡುತ್ತಿದೆ. ಮರಣಹೊಂದಿದವರನ್ನು ಚಿರಂತನವಾಗಿರಿಸುವುದೇ ಸ್ಮರಣೆ ಎಂಬುದು ನನ್ನ ಭಾವನೆ. ಇಲ್ಲಿನ ಹಿರಿಯರು ಕನ್ನಡವನ್ನು ಇನ್ನೂ ಜೀವಂತವಾಗಿರಿಸಿದ್ದಾರೆ. ಹಿರಿಯರ ಜೊತೆ ಕಿರಿಯರು ಕೂಡ ಸಮಪಾಲು ತೆಗೆದುಕೊಳ್ಳಬೇಕು. ಕಿರಿಯರು ದೊಡ್ಡ ಪರಂಪರೆಯ ವಾರಸುದಾರರು. ದೊಡ್ಡವರು ಮಾತನಾಡುವಾಗ ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದರು.
ಎಳೆಯ ಮಕ್ಕಳಲ್ಲಿ ಸಂಸ್ಕೃತಿಯ ಬೀಜ ಬಿತ್ತುವ ಕೆಲಸವಾಗಬೇಕು. ಅವರಿಗೆ ಬೇಕೋ, ಬೇಡವೋ, ಬಲವಂತವಾಗಿಯಾದರೂ ಈ ಬಿತ್ತನೆ ಕೆಲಸ ನಡೆಯಬೇಕು. ಅವಮಾನವಾದರೂ ಸರಿಯೇ, ಅಪಹಾಸ್ಯಕ್ಕೀಡಾದರೂ ಚಿಂತೆಯಿಲ್ಲ. ನಾವು ಮಾಡಬಹುದಾದ ಕೆಲಸವನ್ನು ದೃಢವಾಗಿ ಮಾಡಬೇಕಿದೆ. ಹಾಗೆ ಮಾಡದಿದ್ದಲ್ಲಿ ನಮ್ಮ ದೇಶದ ಭವಿಷ್ಯ ಅಂಧಕಾರವಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು ಎಂದರು.
ಕದಂಬ ರಂಗ ವೇದಿಕೆ ಅಧ್ಯಕ್ಷ ರಾಜಶೇಖರ್ ಕದಂಬ ಮಾತನಾಡಿ, ಗ್ರೀನ್ ರೂಂ ಗಲಾಟೆ ನಾಟಕದಲ್ಲಿ ತಿಳಿಯಾದ ಹಾಸ್ಯವಿದೆ. ಚಿಕ್ಕದಾದರೂ ಚೊಕ್ಕದಾಗಿದೆ. ಪೂರ್ಣ ಅವಧಿಯ ನಾಟಕ ಸೃಷ್ಟಿ ಮಾಡಿಕೊಟ್ಟರೆ ನಮ್ಮ ವೇದಿಕೆಯಿಂದ ರಂಗದ ಮೇಲೆ ತರುತ್ತೇವೆ. ಅಂಥಹ ನಾಟಕ ಮಾಡಿಕೊಡಿ, ಕಾಮಿಡಿ ಕಿಲಾಡಿಗೆ ಪುಸ್ತಕವನ್ನು ಕಳುಹಿಸಿ ಕೊಟ್ಟು ಅಲ್ಲಿ ನಟಿಸುವಂತೆ ಸಲಹೆ ನೀಡುತ್ತೇನೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾರತೀಯ ವಿದ್ಯಾಭವನದ ಅಧ್ಯಕ್ಷ ಡಾ.ಎ.ವಿ.ನರಸಿಂಹಮೂರ್ತಿ, ಎಂ.ಚಂದ್ರಶೇಖರ್, ಟಿ.ಎಸ್.ಛಾಯಾಪತಿ ಡಾ.ಎ.ಟಿ.ಭಾಷ್ಯಂ, ಕೃತಿಯ ಕರ್ತೃ ನಾ.ರಾಮಾನುಜ ಮತ್ತಿತರರು ಉಪಸ್ಥಿತರಿದ್ದರು.