ಮೈತ್ರಿ ಸರಕಾರದ ಪ್ರಮಾಣ ವಚನ ಸಮಾರಂಭಕ್ಕೆ 42 ಲಕ್ಷ ರೂ.ವೆಚ್ಚ !
ಬೆಂಗಳೂರು, ಆ. 9: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದಲ್ಲಿ ಎಚ್.ಡಿ. ಕುಮಾರಸ್ವಾಮಿ ಸಿಎಂ, ಡಾ.ಜಿ.ಪರಮೇಶ್ವರ್ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಲಕ್ಷಾಂತರ ರೂ.ಹಣವನ್ನು ವೆಚ್ಚ ಮಾಡಿರುವುದು ಇದೀಗ ಆರ್ಟಿಇ ಕಾರ್ಯಕರ್ತರೊಬ್ಬರು ಪಡೆದ ಮಾಹಿತಿಯಿಂದ ತಿಳಿದುಬಂದಿದೆ.
ನೂತನ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಪರಮೇಶ್ವರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭವು ಬಿಜೆಪಿ ವಿರುದ್ಧ ಬಲ ಪ್ರದರ್ಶನ ಹಾಗೂ ತೃತೀಯ ರಂಗದಲ್ಲಿನ ಪ್ರಾದೇಶಿಕ ಪಕ್ಷಗಳ ಬಲ ಪ್ರದರ್ಶನಕ್ಕೂ ವೇದಿಕೆಯಾಗಿತ್ತು.
ನಾಯ್ಡು ಬಿಲ್ಲು 8.72 ಲಕ್ಷ ರೂ.: ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಾಜ್ ವೆಸ್ಟ್ ಎಂಡ್ ಹೊಟೇಲ್ನಲ್ಲಿ ಉಳಿದುಕೊಂಡಿದ್ದು, ಅವರ ಖರ್ಚಿನ ಬಾಬ್ತು 8.72 ಲಕ್ಷ ರೂ.ಗಳಾಗಿದೆ. ಮೇ 23ರ ಬೆಳಗ್ಗೆ 9:45ಕ್ಕೆ ಹೊಟೇಲ್ಗೆ ಬಂದ ಅವರು ಮೇ 24ರ ಬೆಳಗ್ಗೆ 5:35ರ ಸುಮಾರಿಗೆ ಹಿಂದಿರುಗಿದ್ದಾರೆಂದು ಗೊತ್ತಾಗಿದೆ.
ಆಮ್ ಆದ್ಮಿ ಪಕ್ಷದ ಮುಖಂಡ ಹಾಗೂ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಊಟ ಮತ್ತು ಪಾನಿಯಗಳಿಗೆ 76,025ರೂ. ಖರ್ಚಾಗಿದೆ. ಚಿತ್ರನಟ ಹಾಗೂ ತಮಿಳುನಾಡಿನ ಮಕ್ಕಳ ನೀತಿ ಮಯ್ಯಂ ಪಕ್ಷದ ಕಮಲ್ ಹಾಸನ್-1.02ಲಕ್ಷ ರೂ., ಉತ್ತರ ಪ್ರದೇಶ ಮಾಜಿ ಸಿಎಂ ಅಖಿಲೇಶ್ ಯಾದವ್- 1ಲಕ್ಷ ರೂ., ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ-1.41ಲಕ್ಷ ರೂ.
ಕೇರಳ ಸಿಎಂ ಪಿಣರಾಯಿ ವಿಜಯನ್-1 ಲಕ್ಷ ರೂ., ಕಾಂಗ್ರೆಸ್ ಮುಖಂಡ ಅಶೋಕ್ ಗೆಹ್ಲೋಟ್-1 ಲಕ್ಷ ರೂ., ಸಿಪಿಎಂ ಮುಖಂಡ ಸೀತಾರಾಮ್ ಯಚೂರಿ-64 ಸಾವಿರ ರೂ., ಜಾರ್ಖಂಡ್ ಮಾಜಿ ಸಿಎಂ ಹೇಮಂತ್ ಸೋರೆನ್-38,400 ರೂ., ಎನ್ಸಿಪಿ ಮುಖಂಡ ಶರದ್ ಪವಾರ್- 64 ಸಾವಿರ ರೂ., ಎಐಎಂಐಎಂ ಮುಖ್ಯಸ್ಥ ಅಸಾದ್ದುದ್ದೀನ್ ಉವೈಸಿ-38,400 ರೂ.ಗಳನ್ನು ವೆಚ್ಚ ಮಾಡಲಾಗಿದೆ ಎಂದು ತಿಳಿದುಬಂದಿದೆ.