ದಾವಣಗೆರೆ: ಕಾಂಗ್ರೆಸ್ ವತಿಯಿಂದ ಕ್ವಿಟ್ ಇಂಡಿಯಾ ಚಳವಳಿ 76ನೇ ವರ್ಷಾಚರಣೆ

ದಾವಣಗೆರೆ,ಆ.09: ಕ್ವಿಟ್ ಇಂಡಿಯಾ ಚಳವಳಿಯ 76ನೇ ವರ್ಷಾಚರಣೆ ಅಂಗವಾಗಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಘಟಕದಿಂದ ನಗರದಲ್ಲಿ ಗುರುವಾದ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.
ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ತ್ರಿವರ್ಣ ಧ್ವಜದೊಂದಿಗೆ ನಗರದ ಜಯದೇವ ವೃತ್ತ, ಪಿ.ಬಿ. ರಸ್ತೆ ಮಾರ್ಗವಾಗಿ ಮಹಾ ನಗರ ಪಾಲಿಕೆಯನ್ನು ಕಾಂಗ್ರೆಸ್ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಘೋಷಣೆ ಕೂಗುತ್ತಾ ಸಾಗಿದರು.
ನಂತರ ಪಾಲಿಕೆ ಆವರಣದ ಹುತಾತ್ಮರ ಪ್ರತಿಮೆ ಬಳಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ. ಮಂಜಪ್ಪ, 9.8.1942 ರಂದು ಮಹಾತ್ಮ ಗಾಂಧಿ ಕರೆ ನೀಡಿದ್ದ ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಕರೆಯು ದೇಶಾದ್ಯಂತ ದೊಡ್ಡ ಆಂದೋಲನವಾಗಿ ರೂಪುಗೊಂಡಿತ್ತಲ್ಲದೇ, ದಾವಣಗೆರೆಯಲ್ಲೂ ಆರು ಮಂದಿ ಸ್ವಾತಂತ್ರ್ಯ ಹೋರಾಟಗಾರರು ಆಂಗ್ಲರು ನಡೆಸಿದ ಗೋಲಿಬಾರ್ ಗೆ ಹುತಾತ್ಮರಾಗಿದ್ದರು ಎಂದರು.
ಪಕ್ಷದ ಮುಖಂಡರಾದ ಮೇಯರ್ ಶೋಭಾ ಪಲ್ಲಾಗಟ್ಟೆ, ಸದಸ್ಯರಾದ ಲಿಂಗರಾಜ, ಎ. ನಾಗರಾಜ ಇದ್ದರು.





