ರೈತರ ಸಾಲಮನ್ನಾ ಆಗುವವರೆಗೂ ಹೋರಾಟ ನಿಲ್ಲದು : ಕೆ.ಎಸ್.ಈಶ್ವರಪ್ಪ
ಮಂಡ್ಯ, ಆ.10: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದಂತೆ ರೈತರ ಸಂಪೂರ್ಣ ಸಾಲಮನ್ನಾ ಮಾಡುವವರೆಗೂ ಬಿಜೆಪಿ ಹೋರಾಟ ನಿಲ್ಲುವುದಿಲ್ಲ ಎಂದು ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅವರ ಪಕ್ಷದ ಪ್ರಣಾಕೆಯ ಜಾರಿಗೊಳಿಸುವವರೆಗೂ ಹೋರಾಟ ನಿಲ್ಲುವುದಿಲ್ಲ. ನಾವು ನಿರುದ್ಯೋಗಿಗಳಲ್ಲ, ಹೋರಾಟಗಾರರು ಎಂದರು.
ಬಜೆಟ್ನಲ್ಲಿ ಸ್ಪಷ್ಟತೆ ಇಲ್ಲದಿದ್ದರೂ ಬಿಜೆಪಿ ಒತ್ತಡದಿಂದ ಕುಮಾರಸ್ವಾಮಿ ಸಾಲಮನ್ನಾ ಘೋಷಣೆ ಮಾಡಿದರು. ಆದರೆ, ಅನುಷ್ಠಾನಗೊಳಿಸಲು ಸಾಧ್ಯವಾಗದೆ ಹತಾಶರಾಗಿ ಹೇಳಿಕೆ ನೀಡುತ್ತಿದ್ದಾರೆ ಎಂದು ಅವರು ಟೀಕಿಸಿದರು.
ಗುಮಾಸ್ತನಂತೆ ಸರಕಾರಕ್ಕೆ ಪತ್ರ ಬರೆಯುವುದನ್ನು ಸಿದ್ದರಾಮಯ್ಯ ಅವರು ಬಿಡಬೇಕು. ಗಡುವು ನೀಡಿ ಕೆಲಸ ಮಾಡಿಸಬೇಕು. ಕೆಲಸವಾಗದಿದ್ದರೆ ರಾಜೀನಾಮೆ ನೀಡಿ ಹೊರ ಬರಬೇಕು ಎಂದು ಅವರು ತಾಕೀತು ಮಾಡಿದರು.
ವಿಧಾನಸೌಧಕ್ಕೆ ಹೋದರೆ ಸಚಿವರಿಗೊಬ್ಬರು ಏಜೆಂಟರ್ ಹುಟ್ಟಿಕೊಂಡಿದ್ದಾರೆ. ವರ್ಗಾವಣೆಯಲ್ಲಿ ಇಷ್ಟು ಭ್ರಷ್ಟಾಚಾರ ನಡೆದಿದ್ದು ನಾನು ನೋಡಿಯೇ ಇಲ್ಲ. ಸಿಎಂ ಲೂಟಿ ಮಾಡಲಿ ಎಂಬ ಭಾವನೆಯಲ್ಲಿದ್ದಾರೆ ಎಂದು ಅವರು ಆರೋಪಿಸಿದರು.
ಅವರ ಶಾಸಕರ ಬಗ್ಗೆ ಅವರಿಗೇ ನಂಬಿಕೆ ಇಲ್ಲ. ಸಿದ್ದರಾಮಯ್ಯನವರನ್ನು ಬಿಜೆಪಿಗೆ ಕರೆಯೋ ಗತಿ ಬಂದಿಲ್ಲ. ಕಾಂಗ್ರೆಸ್ನ ಯಾವುದೇ ಶಾಸಕರನ್ನು ನಾವು ಮುಟ್ಟಲು ಹೋಗುವುದಿಲ್ಲ, ಸಮ್ಮಿಶ್ರ ಸರಕಾರ ತಾನಾಗಿಯೇ ಕುಸಿಯಲಿದೆ ಎಂದು ಡಿ.ಕೆ.ಶಿವಕುಮಾರ್, ದಿನೇಶ್ ಗುಂಡುರಾವ್ ಅವರ ಹೇಳಿಕೆಗೆ ಈಶ್ವರಪ್ಪ ಪ್ರತಿಕ್ರಿಯಿಸಿದರು.
ಮಾಜಿ ಸಚಿವ ಲಕ್ಷ್ಮಣ ಸವದಿ, ಶಾಸಕ ಸಿ.ಟಿ.ರವಿ, ಮಾಜಿ ಸಂಸದೆ ತೇಜಸ್ವಿನಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ನಾಗಣ್ಣಗೌಡ, ಮುಖಂಡರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.