ಬೆಳ್ತಂಗಡಿ: ಮುಂದುವರಿದ ಭಾರೀ ಮಳೆ; ಜನಜೀವನ ಅಸ್ತವ್ಯಸ್ತ

ಬೆಳ್ತಂಗಡಿ, ಆ. 14: ತಾಲೂಕಿನಲ್ಲಿ ಮಂಗಳವಾರವೂ ಭಾರೀ ಮಳೆ ಮುಂದುವರಿದಿದ್ದು ನೇತ್ರಾವತಿ, ಫಲ್ಗುಣಿ, ಕಪಿಲಾ, ಅಣಿಯೂರು ಹಳ್ಳ, ಸೋಮಾವತಿ, ಸೇರಿದಂತೆ ಬಹುತೇಕ ನದಿಗಳು ಹಾಗೂ ಹಳ್ಳಗಳು ದಡಮೀರಿ ಹರಿಯುತ್ತಿದೆ. ವಿವಿಧೆಡೆ ನದಿಗಳು ಉಕ್ಕಿ ಹರಿದಿದ್ದು ,ತೋಟಗಳಿಗೆ ನೀರು ನುಗ್ಗಿದೆ. ಹಲವೆಡೆ ಸೇತುವೆಗಳು ಮುಳುಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.
ಶಿಶಿಲ ಗ್ರಾಮದ ಶಿಶಿಲೇಶ್ವರ ದೇವಸ್ಥಾನಕ್ಕೆ ಇಂದೂ ನೀರು ನುಗ್ಗಿದ್ದು ಸೇತುವೆ ಮುಳುಗಡೆಯಾಗಿದೆ. ಶಿಶಿಲ ಗ್ರಾಮದ ಹೆಚ್ಚಿನ ಪ್ರದೇಶದ ಜನರು ಹೊರ ಜಗತ್ತಿನೊಂದಿಗೆ ಸಂಪರ್ಕ ಕಳೆದುಕೊಂಡಿದ್ದಾರೆ. ಕಪಿಲಾ ನದಿಯು ದಡಮೀರಿ ಹರಿಯುತ್ತಿದ್ದು ತೂಗು ಸೇತುವೆಯ ಮಟ್ಟದಲ್ಲಿ ನೀರು ಹರಿಯುತ್ತಿದೆ. ದೇವಸ್ಥಾನ ಸಂಪೂರ್ಣ ಜಲಾವೃತವಾಗಿದೆ. ನದಿಯ ಎರಡೂ ಬದಿಯಲ್ಲಿರುವ ತೋಟಗಳಿಗೆ ಹಾಗೂ ಗದ್ದೆಗಳಿಗೆ ನೀರು ನುಗ್ಗಿದ್ದು ತೋಟದಲ್ಲಿಯೇ ನೀರು ನಿಂತಿರುವುದರಿಂದ ಕೃಷಿಗೂ ಹಾನಿಯಾಗಿದೆ. ಗದ್ದೆಗಳಿಗೂ ನೀರು ನುಗ್ಗಿದ್ದು ಭಾರೀ ಪ್ರಮಾಣದಲ್ಲಿ ನಷ್ಟ ಸಂಭವಿಸಿದೆ.
ತಾಲೂಕಿನ ಮೇಲಂತಬೆಟ್ಟು ಗ್ರಾಮದ ಪಂಚಾಯತು ಬಳಿ ನಿವಾಸಿ ಕವಿತ ಎಂಬವರ ಮನೆಯ ಹಿಂಭಾಗದ ಗುಡ್ಡೆ ಜರಿದು ಬಿದ್ದು ಮನೆಗೆ ಹಾನಿಯಾಗಿದೆ. ಮನೆಯ ಹಿಂದಿರುವ ಬೃಹತ್ ಮರಗಳೊಂದಿಗೆ ಭಾರೀ ಪ್ರಮಾಣದಲ್ಲಿ ಮಣ್ಣು ಜರಿದಿದ್ದು ಮನೆಯ ಒಳಗೆ ನೀರು ಹಾಗೂ ಮಣ್ಣು ತುಂಬಿದೆ. ಮನೆಯ ಹಿಂಭಾಗದ ಗುಡ್ಡ ಇನ್ನೂ ಜರಿಯುವ ಭೀತಿಯಿದ್ದು ದೊಡ್ಡ ಗಾತ್ರದ ಮರಗಳೂ ಇದೆ. ಇನ್ನೂ ಮಣ್ಣು ಕುಸಿದರೆ ಮನಗೆ ಅಪಾಯವಿದೆ. ಇವರು ಹೊಸ ಮನೆ ನಿರ್ಮಿಸಿದ್ದು ಕೆಲಸ ಪೂರ್ಣಗೊಳಿಸುತ್ತಾ ಬಂದಿದ್ದಾರೆ, ಇನ್ನೂ ಗೃಹಪ್ರವೇಶವಾಗಿಲ್ಲ ಅದರ ಮೊದಲೇ ಮನೆಗೆ ಹಾನಿಯಾಗಿದ್ದು ಕೂಲಿ ಕಾರ್ಮಿಕರ ಕುಟುಂಬ ತೀರಾ ಸಂಕಷ್ಟಕ್ಕೆ ಸಿಲುಕಿದಂತಾಗಿದೆ.
ಉಜಿರೆ ಗ್ರಾಮದ ಅನುಗ್ರಹ ಶಾಲೆಯ ಸಮೀಪ ಯೋಗೀಶ್ ಆಚಾರ್ಯ ಎಂಬವರ ಮನೆಯ ಮೇಲ್ಛಾವಣಿ ಭಾಗಶ ಕುಸಿದಿದ್ದು ಇಡೀ ಮನೆಯೇ ಕುಸಿದು ಬೀಳುವ ಸ್ಥಿತಿಯಲೊಲಿದೆ. ಉಜಿರೆ ಸಮೀಪ ನಿಡಿಗಲ್ ಎಂಬಲ್ಲಿ ಪ್ರಭಾಕರ ಶೆಣೈ ಅವರ ಮನೆ ಭಾಗಶ ಕುಸಿದಿದ್ದು ಮನೆಯಲ್ಲಿ ವಾಸಿಸುವುದು ಅಸಾಧ್ಯ ವಾಗಿದೆ. ಮನೆ ಕುಸಿತಕ್ಕೆ ಒಳಗಾದ ಪ್ರದೇಶಗಳಿಗೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಲಾಯಿಲ ಗ್ರಾಮದ ಲಾಯಿಲ ಬೈಲು ಎಂಬಲ್ಲಿ ಮಳೆಗೆ ಗುಡ್ಡವೊಂದು ಕುಸಿದು ತೋಡಿಗೆ ಬಿದ್ದಿದ್ದು ತೋಡು ತನ್ನ ಪಾತ್ರವನ್ನು ಬದಲಿಸಿ ತೋಟವೊಂದರ ಮೂಲಕ ಹರಿಯಲಾರಮಭಿಸಿದೆ. ಚಿತ್ತರಂಜನ್ ಹೆಗ್ಡೆ ಎಂಬವರ ತೋಟಕ್ಕೆ ನೀರು ಹಾಗೂ ಮಣ್ಣು ನುಗ್ಗಿ ಭಾರೀ ಪ್ರಮಾಣದ ನಷ್ಟ ಸಂಭವಿಸಿದೆ. ನೇತ್ರಾವತಿ ನದಿ ದಡಮೀರಿ ಹರಿಯುತ್ತಿದ್ದು ಮಿತ್ತಬಾಗಿಲು ಹಾಗೂ ಕಡಿರುದ್ಯಾವರ ಗ್ರಾಮದಲ್ಲಿ ನದಿ ತುಂಬಿ ಹರಿಯುತ್ತಿದ್ದು ಹಲವಾರು ತೋಟಗಳಿಗೆ ನೀರು ನುಗ್ಗಿದೆ. ಕಡಿರುಧ್ಯಾವರ ಗ್ರಾಮದ ಕೊಪ್ಪದ ಗಂಡಿ ಸಮಿಪವಿರುವ ಸೇತುವೆ ಸಂಪೂರ್ಣ ಮುಳುಗಿದ್ದು ಸೇತುವೆಯ ಮೇಲಿನಿಂದ ನೀರು ಹರಿಯುತ್ತಿದೆ.
ಕತ್ತಲಲ್ಲಿ ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಾಧ್ಯಂತ ಗಾಳಿ ಮಳೆಗೆ 125 ಕ್ಕೂ ಹೆಚ್ಚು ವಿಧ್ಯುತ್ ಕಂಬಗಳು ನೆಲಕ್ಕುರುಳಿದ್ದು ತಾಲೂಕಿನ ಗ್ರಾಮೀಣ ಪ್ರದೇಶಗಳು ಕಳೆದ ಎರಡು ದಿನಗಳಿಂದ ಕತ್ತಲೆಯಲ್ಲಿದೆ. ಸೋಮವಾರ ಬೆಳಗ್ಗಿನಿಂದ ಬಾರೀ ಗಾಳಿ ಬೀಸುತ್ತಿದ್ದು ಅಲ್ಲಲ್ಲಿ ಮರಗಳು ಮುರಿದು ವಿದ್ಯುತ್ ಲೈನಿನ ಮೇಲೆ ಬಿದ್ದು ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿದೆ. ನಗರ ಪ್ರದೇಶಗಳಲ್ಲಿ ವಿದ್ಯುತ್ ವ್ಯವಸ್ಥೆಯನ್ನು ಸರಿಪಡಿಸಲಾಗಿದ್ದು ಗ್ರಾಮೀಣ ಪ್ರದೇಶಗಳು ಇನ್ನೂ ಕತ್ತಲೆಯಲ್ಲಿದೆ. ಸುಮಾರು 15 ಕ್ಕೂ ಹೆಚ್ಚು ಟ್ರಾನ್ಸ್ಫಾರ್ಮರುಗಳು ಹಾಳಾಗಿದ್ದು ದುರಸ್ತಿ ಕಾರ್ಯವನ್ನು ಮಾಡಲಾಗುತ್ತಿದೆ. ತಾಲೂಕಿನಲ್ಲಿ ವಿದ್ಯುತ್ ವ್ಯವಸ್ಥೆ ಸರಿಪಡಿಸಲು ಇನ್ನೂ ಕನಿಷ್ಟ ಮೂರು ದಿನಗಳಾದರೂ ಬೇಕಾಗಬಹುದು ಎಂದು ಮೆಸ್ಕಾಂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಶಿವಶಂಕರ್ ತಿಳಿಸಿದ್ದಾರೆ.
ಚಾರ್ಮಾಡಿ ಮೂಲಕ ಹಿಂತಿರುಗಿದ ಮುಖ್ಯಮಂತ್ರಿಗಳು:
ಮಳೆಗಾಲದ ಆರಂಭದಲ್ಲಿ ಭೂಕುಸಿತದಿಂದಾಗಿ ಸಮಸ್ಯೆಗೆ ಸಿಲುಕಿದ್ದ ಚಾರ್ಮಾಡಿ ಘಾಟಿ ಈಗ ಸುಸ್ಥಿತಿಯಲ್ಲಿದ್ದು ವಾಹನ ಸಂಚಾರಕ್ಕೆ ಯಾವುದೇ ಅಡೆತಡೆಗಳಾಗಿಲ್ಲ. ಶಿರಾಡಿ ಘಾಟಿ ಬಂದ್ ಆದ ಹಿನ್ನೆಲೆಯಲ್ಲಿ ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾರ್ಮಾಡಿಯ ಮೂಲಕವಾಗಿ ಧರ್ಮಸ್ಥಳಕ್ಕೆ ಆಗಮಿಸಿದ್ದರು. ಇಂದೂ ಅವರು ಸುಬ್ರಮಣ್ಯದಿಂದ ಚಾರ್ಮಾಡಿ ಘಾಟಿಯ ಮೂಲಕವಾಗಿಯೇ ಬೆಂಗಳೂರಿಗೆ ಹಿಂತಿರುಗಿದರು.







