ಜಾನುವಾರುಗಳ ಅಕ್ರಮ ಸಾಗಣೆ ತಡೆಗೆ ಕ್ರಮ ಕೈಗೊಳ್ಳಲಾಗಿದೆ: ಹೈಕೋರ್ಟ್ಗೆ ಸರಕಾರದ ಹೇಳಿಕೆ
ಬೆಂಗಳೂರು, ಆ.20: ಜಾನುವಾರುಗಳ ಅಕ್ರಮ ಸಾಗಣೆ, ಮಾರಾಟ ಹಾಗೂ ವಧೆ ತಡೆಗೆ ಸಂಬಂಧಿಸಿದಂತೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯ ಸರಕಾರ ಹೈಕೋರ್ಟ್ಗೆ ತಿಳಿಸಿದೆ.
ಜಾನುವಾರುಗಳ ಅಕ್ರಮ ಸಾಗಣೆ ತಡೆಯುವವರ ಮೇಲೆ ಹಲ್ಲೆ ನಡೆಯುತ್ತಿವೆ ಹಾಗೂ ನಮ್ಮ ದೂರುಗಳನ್ನು ಪೊಲೀಸರು ಸರಿಯಾಗಿ ದಾಖಲಿಸಿಕೊಳ್ಳುತ್ತಿಲ್ಲ ಎಂದು ಆಕ್ಷೇಪಿಸಿ ಹೊಸದಿಲ್ಲಿಯ ಗೋ ಗ್ಯಾನ್ ಪ್ರತಿಷ್ಠಾನದ ಜೋಷಿನೆ ಆಂಟೋನಿ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್.ಪೊನ್ನಣ್ಣ, ರಾಜ್ಯದಾದ್ಯಂತ ಜಾನುವಾರಗಳ ಅಕ್ರಮ ಸಾಗಣೆ ತಡೆಗೆ ವಿಶೇಷ ಕಾರ್ಯಪಡೆ ರಚಿಸಲಾಗಿದೆ. ದೂರುಗಳನ್ನು ದಾಖಲಿಸಲು ಸಹಾಯ ವಾಣಿ, ಕಾಲ್ ಸೆಂಟರ್ ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸಲಾಗಿದೆ ಎಂದು ತಿಳಿಸಿದರು.
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಅಕ್ರಮ ಸಾಗಣೆ ತಡೆಯಲು ಬಾಬು ಜಗಜೀವನ ರಾಂ ನಗರ, ದೇವರ ಜೀವನಹಳ್ಳಿ ಮತ್ತು ಶಿವಾಜಿನಗರ ಪ್ರದೇಶಗಳಲ್ಲಿ ವಿಚಕ್ಷಣಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದೂ ಪೊನ್ನಣ್ಣ ಹೇಳಿದರು. ಪ್ರತಿವಾದಿಗಳಿಗೆ ನೋಟಿಸ್ ಜಾರಿಗೆ ಆದೇಶಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿದೆ.