ಶಿಕ್ಷಣದ ಮೂಲಕ ಪಶುಗಳನ್ನು ಸೃಷ್ಟಿ ಮಾಡುತ್ತಿದ್ದೇವೆ: ಚಂದ್ರಶೇಖರ ಕಂಬಾರ

ಬೆಂಗಳೂರು, ಆ.23: ಪೋಷಕರು, ಶಿಕ್ಷಕರು, ಸರಕಾರವೂ ಸೇರಿದಂತೆ ಶಿಕ್ಷಣದ ಮೂಲಕ ಪಶುಗಳನ್ನು ಸೃಷ್ಟಿ ಮಾಡುತ್ತಿದ್ದೇವೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ವಿಷಾದ ವ್ಯಕ್ತಪಡಿಸಿದರು.
ಗುರುವಾರ ನಗರದ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಏರ್ಪಡಿಸಿದ್ದ ಕರ್ನಾಟಕ ಸಾಮಾನ್ಯ ಜ್ಞಾನ ಅಕಾಡೆಮಿಯ 13ನೆ ವರ್ಷದ ವಾರ್ಷಿಕೋತ್ಸವದ ಕನ್ನಡ ಸಿರಿ ಉತ್ತಮ ಉಪನ್ಯಾಸಕ ಪ್ರಶಸ್ತಿ ಪ್ರದಾನ ಮತ್ತು ಸಾಮಾನ್ಯ ಜ್ಞಾನ ಪರೀಕ್ಷೆ ಬಹುಮಾನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾವನೆಯ ಕನ್ನಡಿ ಮಾತೃ ಭಾಷೆ. ನಮಗೂ ಪ್ರಾಣಿಗಳಿಗೂ ಭಾವನೆಗಳಿರುತ್ತವೆ, ಸಂಬಂಧಗಳಿರುತ್ತವೆ. ಅದನ್ನು ಮೌಖಿಕವಾಗಿ ಅಭಿವ್ಯಕ್ತಗೊಳಿಸುವುದು ಮಾತ್ರ ಮನುಷ್ಯ. ಮಕ್ಕಳಿಗೆ ಮಾತೃಭಾಷೆಯಲ್ಲಿ ಶಿಕ್ಷಣ ನೀಡದೆ, ಇಂಗ್ಲಿಷ್ ಶಿಕ್ಷಣ ನೀಡುವುದರಿಂದ ಆತನಿಗೆ, ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳೆರಡರಲ್ಲೂ ಸರಿಯಾಗಿ ಭಾವನೆ ವ್ಯಕ್ತಪಡಿಸಲು, ಆಲೋಚನೆ ಮಾಡಲು ಬರುವುದಿಲ್ಲ ಎಂದು ಮಾತೃಭಾಷೆಯ ಅಗತ್ಯತೆಯ ಬಗ್ಗೆ ತಿಳಿಸಿದರು.
ಸಮಾಜದಲ್ಲಿ ಶಿಕ್ಷಕರನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ. ಇತ್ತೀಚೆಗೆ ಸಂಬಳದ ಸಲುವಾಗಿ ಅಧ್ಯಾಪಕ ವೃತ್ತಿ ಆಯ್ಕೆ ಮಾಡಿಕೊಳ್ಳುತ್ತಿರುವುದು ಶೋಚನೀಯವಾಗಿದೆ ಎಂದು ಕಂಬಾರರು ಹೇಳಿದರು.
ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ಮಾತನಾಡಿ ಸ್ವಾತಂತ್ರ ಬಂದು 72 ವರ್ಷ ಆಗಿದೆ. ಆದರೂ ಇನ್ನು ಶೇ.25ರಷ್ಟು ಜನರು ಅನಕ್ಷರಸ್ಥರು ಇದ್ದಾರೆ. ನಮ್ಮದೆ ಕಾಲದಲ್ಲಿ ಸ್ವಾತಂತ್ರ ಪಡೆದ ದೇಶಗಳು, ಕೇವಲ 10 ವರ್ಷಗಳಲ್ಲೇ ಸಂಪೂರ್ಣ ಅಕ್ಷರಸ್ಥ ದೇಶವನ್ನಾಗಿ ನಿರ್ಮಿಸಿಕೊಂಡಿವೆ. ನಮ್ಮ ದೇಶದಲ್ಲಿ ಇನ್ನು ತಿಮ್ಮಣ್ಣ, ಬೊಮ್ಮಣ್ಣ ಎಂದು ಹೆಸರು ಕೂಡ ಬರೆಯೋಕೆ ಬರಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ದೇಶದ ಭವಿಷ್ಯವನ್ನು ಬದಲಿಸಲು ಸರಕಾರದ ಮೂಲಕವೂ ಆಗದ್ದನ್ನು ಶಿಕ್ಷಕರು ಬದಲಾಯಿಸಬಹುದು. ಆದರೆ, ಒಂದು ವರದಿ ಪ್ರಕಾರ ಪಂಜಾಬಿನಲ್ಲಿ ಶೇ.90ರಷ್ಟು ಮಕ್ಕಳಿಗೆ ಭಾರತದ ಭೂಪಟವನ್ನು ಸರಿಯಾಗಿ ಗುರುತಿಸಲು ಬರದೆ ಇರುವುದು, ಇಂದಿನ ಶಿಕ್ಷಣದ ಗುಣಮಟ್ಟವನ್ನು ತಿಳಿಸುತ್ತದೆ ಎಂದು ವಿಷಾದಿಸಿದರು.
ಇಲ್ಲಿಯವರೆಗೂ 1ರಿಂದ 9ನೆ ತರಗತಿಯ ವರೆಗೂ ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸುವಂತಿರಲಿಲ್ಲ. ಆದರೆ, ಕೇಂದ್ರ ಸರಕಾರ 5 ಮತ್ತು 8ನೆ ತರಗತಿಯಲ್ಲಿ ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸುವ ಯೋಜನೆಯನ್ನು ತರುತ್ತಿದ್ದು, ಇದರಿಂದ ಶೇ.25ರಷ್ಟು ಅನಕ್ಷರಸ್ಥರಿರುವ ನಮ್ಮ ದೇಶದಲ್ಲಿ ಶಿಕ್ಷಣದಿಂದ ವಂಚಿತರಾಗುವ ಸಂಖ್ಯೆ ಹಾಗೆಯೆ ಉಳಿಯುತ್ತದೆ ಎಂದು ತಿಳಿಸಿದರು. ..
ಸಮಾಜದಲ್ಲಿ ಜಾತಿ ವ್ಯವಸ್ಥೆ ಇರುವಂತೆ, ಶಿಕ್ಷಣದಲ್ಲೂ ಬೇರೆ ರೂಪದಲ್ಲಿ ಜಾತಿ ವ್ಯವಸ್ಥೆಯಿದೆ.
-ಡಾ.ಎಲ್.ಹನುಮಂತಯ್ಯ, ರಾಜ್ಯಸಭಾ ಸದಸ್ಯ







