ಆ. 26: 1199 ವಿದ್ಯಾರ್ಥಿಗಳಿಗೆ 92 ಲಕ್ಷ ರೂ. ಸಹಾಯ ಧನ ವಿತರಣೆ
ಉಡುಪಿ, ಆ.24: ಉಡುಪಿ ಯಕ್ಷಗಾನ ಕಲಾರಂಗದ ಅಂಗಸಂಸ್ಥೆ ವಿದ್ಯಾಪೋಷಕ್ನ ಹದಿನಾಲ್ಕನೇ ವರ್ಷದ ವಿನಮ್ರ ಸಹಾಯ ಕಾರ್ಯಕ್ರಮ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಆ. 26ರ ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಜರಗಲಿದೆ.
ಬೆಳಗ್ಗೆ 10 ಕ್ಕೆ ಅದಮಾರು ಮಠಾಧೀಶ ಶ್ರೀವಿಶ್ವಪ್ರಿಯತೀರ್ಥರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ ವಹಿಸಲಿದ್ದಾರೆ. ಅತಿಥಿಗಳಾಗಿ ಸಿಂಡಿಕೇಟ್ ಬ್ಯಾಂಕ್ನ ಜಿಎಂ ಭಾಸ್ಕರ ಹಂದೆ, ಉಡುಪಿ ಜಿಲ್ಲಾ ಎಸ್ಪಿ ಲಕ್ಷ್ಮಣ್ ಬಿ. ನಿಂಬರಗಿ ಭಾಗವಹಿಸಲಿದ್ದು, ಹುಬ್ಬಳ್ಳಿ ಮೈಲೈಪ್ ಸಂಸ್ಥೆಯ ಪ್ರವೀಣ್ ಗುಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿ ನೀಡಲಿದ್ದಾರೆ.
ಅಪರಾಹ್ನ 2:30ಕ್ಕೆ ಜರಗಲಿರುವ ಸಹಾಯಧನ ವಿತರಣಾ ಸಮಾರಂಭದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥರು ಅನುಗ್ರಹ ಸಂದೇಶ ನೀಡಲಿದ್ದು, ಅದಮಾರು ಮಠ ಕಿರಿಯ ಯತಿಗಳಾದ ಶ್ರೀಈಶಪ್ರಿಯ ತೀರ್ಥ ಶ್ರೀಪಾದ ಉಪಸ್ಥಿತರಿರುವರು. ಅಧ್ಯಕ್ಷತೆಯನ್ನು ನಾಡೋಜ ಜಿ.ಶಂಕರ್ ವಹಿಸಲಿದ್ದಾರೆ. ಕರ್ಣಾಟಕ ಬ್ಯಾಂಕ್ನ ಆಡಳಿತ ನಿರ್ದೇಶಕ ಎಂ.ಎಸ್.ಮಹಾಬಲೇಶ್ವರ ಶುಭಾಶಂಸನೆ ಮಾಡಿದರೆ, ಬೆಂಗಳೂರಿನ ಉದ್ಯಮಿ ಗೀತಾ ಎಲ್.ಎನ್.ಶೆಟ್ಟಿ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ವಿದ್ಯಾಪೋಷಕ್ನ ಮೂವರು ಬಡ ವಿದ್ಯಾರ್ಥಿಗಳಿಗೆ ಮನೆ ನಿರ್ಮಿಸಿ ಕೊಡಲಿರುವ ಹಿರಿಯ ಉದ್ಯಮಿ ಮುಂಬೈ ಗಾಣಿಗ ಸಮಾಜದ ಅಧ್ಯಕ್ಷ ಕುತ್ಪಾಡಿ ರಾಮಚಂದ್ರ ಗಾಣಿಗರನ್ನು ಅಭಿನಂದಿಸಲಾಗುವುದು. ಈ ವರ್ಷ ಒಟ್ಟಾರೆಯಾಗಿ 1199 ವಿದ್ಯಾರ್ಥಿಗಳಿಗೆ 92 ಲಕ್ಷ ರೂ.ಸಹಾಯಧನ ವನ್ನು ವಿತರಿಸಲಾಗುವುದು ಎಂದು ಅಧ್ಯಕ್ಷ ಕೆ. ಗಣೇಶ್ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.