ಪೂಜೆಯ ನೆಪದಲ್ಲಿ ನಟಿಗೆ ವಂಚನೆ: ದೂರು ದಾಖಲು
ಬೆಂಗಳೂರು, ಆ.27: ಪೂಜೆಯೊಂದನ್ನು ಮಾಡಿಬಿಟ್ಟರೆ, ಸಿನೆಮಾ ರಂಗದಲ್ಲಿ ಒಳ್ಳೆಯ ಹೆಸರು ಬರಲಿದೆ ಎಂದು ನಂಬಿಸಿ ಸಿನೆಮಾ ಸಹ ನಿರ್ಮಾಪಕ ನಾಗೇಶ್ ಎಂಬಾತ ನಟಿಯೊಬ್ಬಾಕೆಗೆ 8 ಲಕ್ಷ ರೂ. ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ಇಲ್ಲಿನ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಚೇತನಾ ಎಂಬಾಕೆ ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಿಸಿರುವ ಗಿರಿನಗರ ಪೊಲೀಸರು ಆರೋಪಿ ಸಹ ನಿರ್ಮಾಪಕ ನಾಗೇಶ್ ಹಾಗೂ ಗೌರಿ ಎಂಬವರ ಪತ್ತೆಗಾಗಿ ಶೋಧ ನಡೆಸಿದ್ದಾರೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಡಾ.ಶರಣಪ್ಪತಿಳಿಸಿದ್ದಾರೆ.
ಹೊಸಕೋಟೆ ಮೂಲದ ನಾಗೇಶ್ ಸಿನಿಮಾಗೆ ಸಹ ನಿರ್ಮಾಪಕ ಆಗಿದ್ದು, ನಟಿ ಚೇತನಾಗೆ ಮಂಜಿನಹನಿ ಸಿನಿಮಾದಲ್ಲಿ ನಾಯಕನ ತಂಗಿಯ ಪಾತ್ರಕ್ಕೆ ಅವಕಾಶ ಕಲ್ಪಿಸಿಕೊಟ್ಟಿದ್ದ. ಬಳಿಕ, ಸಿನಿಮಾರಂಗದಲ್ಲಿ ದೊಡ್ಡಮಟ್ಟದಲ್ಲಿ ಬೆಳೆಯಬೇಕು. ಒಳ್ಳೆ ಹೆಸರು ಮಾಡಬೇಕಾದರೆ ಗೌರಿ ಎಂಬಾಕೆಯನ್ನು ಭೇಟಿಯಾಗು ಎಂದು ಹೇಳಿದ್ದ ಎನ್ನಲಾಗಿದೆ.
ಮೊಬೈಲಿನಲ್ಲಿ ಗೌರಿಯೊಂದಿಗೆ ನಟಿ ಚೇತನ ಮಾತನಾಡಿದಾಗ, ನಿನ್ನ ಹೆಸರಲ್ಲಿ ಪೂಜೆ ಮಾಡಿಸಬೇಕು ಎಂದು ನಂಬಿಸಿ ನಾಗೇಶ್ ಕಳೆದ 3 ವರ್ಷಗಳಿಂದ ನಟಿಯಿಂದ ಸುಮಾರು 8 ಲಕ್ಷ ಹಣ ಪಡೆದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪ್ರಕರಣ ದಾಖಲು: ನಾಗೇಶ್ ಆ.1ರಂದು ವೀಣಾ ಎಂಬಾಕೆಯ ಬ್ಯಾಂಕ್ ಖಾತೆಗೆ 50 ಸಾವಿರ ಜಮಾ ಮಾಡಿಸಿಕೊಂಡಿದ್ದಾರೆ. ನಂತರ ನಟಿಯ ಮೊಬೈಲ್ ಕರೆಗೂ ಸಿಗದೇ ತಲೆ ಮರೆಸಿಕೊಂಡಿದ್ದಾರೆ. ಈ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿರುವ ಗಿರಿನಗರ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ನಟಿ ಚೇತನಾ ತಿಳಿಸಿದ್ದಾರೆ.