ತುಮಕೂರು: ಸಿ.ಚನ್ನಿಗಪ್ಪ ಕಾಲೇಜಿನಲ್ಲಿ ಕೊಡಗಿನ 100 ಸಂತ್ರಸ್ಥರಿಗೆ ಉಚಿತ ತಾಂತ್ರಿಕ ಶಿಕ್ಷಣ

ತುಮಕೂರು,ಆ.27: ಕೊಡಗಿನ ಸಂತ್ರಸ್ತರಿಗೆ ಮಾಜಿ ಸಚಿವ ಸಿ.ಚನ್ನಿಗಪ್ಪ ಒಡೆತನದ ಡಾ.ಶ್ರೀಶಿವಕುಮಾರ ಸ್ವಾಮೀಜಿ ಇಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ಕಾಲೇಜಿನಲ್ಲಿ 100 ವಿದ್ಯಾರ್ಥಿಗಳಿಗೆ ಊಟ, ವಸತಿ, ಇನ್ನಿತರ ಸೌಲಭ್ಯಗಳೊಂದಿಗೆ ಉಚಿತ ಶಿಕ್ಷಣ ನೀಡುವುದಾಗಿ ಕಮ್ಮಗೊಂಡನಹಳ್ಳಿ ಶ್ರೀ ಮಾರುತಿ ಸೇವಾ ಸಂಸ್ಥೆಯ ಅಧ್ಯಕ್ಷ ಸಿ.ಚನ್ನಿಗಪ್ಪ ತಿಳಿಸಿದ್ದಾರೆ.
ತಮ್ಮ ಆಡಳಿತ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಳೆಯ ರೌದ್ರಾವತಾರಕ್ಕೆ ಇಡೀ ಕೊಡಗಿನ ಬದುಕೇ ಮೂರಾಬಟ್ಟೆಯಾಗಿದೆ. ಅನ್ನ, ನೀರು, ವಸತಿ ಇಲ್ಲದೆ ಪರದಾಡುತ್ತಿದ್ದಾರೆ. ಇಂತಹ ಹೊತ್ತಿನಲ್ಲಿ ಅವರಿಗೆ ನೆರವು ನೀಡುವ ನಿಟ್ಟಿನಲ್ಲಿ ಇಂದಿನಿಂದಲೇ ಕೊಡಗಿನಿಂದ ಪ್ರವೇಶ ಪಡೆಯುವ ನೂರು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ನೀಡಲು ತೀರ್ಮಾನ ಕೈಗೊಂಡಿದ್ದು, ಈ ಸಂಬಂಧ ಶಿಕ್ಷಣ ಇಲಾಖೆ, ಸರಕಾರಕ್ಕೆ ಪತ್ರ ಬರೆಯಲಾಗಿದೆ ಎಂದರು.
ನನ್ನ ಇಂದಿನ ಸ್ಥಿತಿಗೆ ಸಿದ್ದಗಂಗಾ ಮಠಾಧ್ಯಕ್ಷರಾದ ಡಾ.ಶ್ರೀಶಿವಕುಮಾರಸ್ವಾಮೀಜಿ ಅವರೇ ಕಾರಣ. ನಾನು ಮಠದ ಅನ್ನ ತಿಂದು ಬೆಳೆದಿದ್ದೇನೆ. ಅದನ್ನು ತೀರಿಸುವ ಉದ್ದೇಶದಿಂದ ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ.ದೇವೇಗೌಡರ ನೆನಪಿನಲ್ಲಿ ಮುಂದಿನ ನಾಲ್ಕು ವರ್ಷ ಇಂಜಿನಿಯರಿಂಗ್ ನಲ್ಲಿ ಮೆಕಾನಿಕಲ್, ಐಎಸ್, ಇಇಇ, ಇಸಿ, ಸಿವಿಲ್ ಸೇರಿ 30, ಎಂ.ಟೆಕ್ ನಲ್ಲಿ ಮೆಕಾನಿಕಲ್, ಇಸಿ ಸೇರಿ 20 ಹಾಗೂ ಡಿಪ್ಲಮೋದಲ್ಲಿ ಮೆಕಾನಿಕಲ್, ಇಸಿ, ಸಿವಿಲ್, ಇಇಇ, ಸಿ.ಎಸ್.ಸೇರಿ 50 ಸೀಟು, ಒಟ್ಟು 100 ಸೀಟುಗಳಿಗೆ ಮುಂದಿನ ನಾಲ್ಕು ವರ್ಷ ಊಟ, ವಸತಿ, ಬಟ್ಟೆ, ಪುಸ್ತಕ, ಚಪ್ಪಲಿ ಸಮೇತ ಎಲ್ಲಾ ವಸ್ತುಗಳನ್ನು ಉಚಿತವಾಗಿ ನೀಡಿ, ಶಿಕ್ಷಣ ನೀಡಲಾಗುವುದು. ಸರಕಾರ ಈ ಸಂಬಂಧ ಓರ್ವ ನೋಡಲ್ ಅಧಿಕಾರಿಯನ್ನು ನೇಮಿಸಿದರೆ ಹೆಚ್ಚು ಉಪಕಾರ ಮಾಡಿದಂತಾಗುತ್ತದೆ. ಮುಂದಿನ ಸೆಪ್ಟಂಬರ್ 10ವರೆಗೆ ಇಂಜಿನಿಯರ್ ಹಾಗೂ ಇತರೆ ಕೊರ್ಸುಗಳಿಗೆ ಪ್ರವೇಶಕ್ಕೆ ಅವಕಾಶವಿದ್ದು, ಕೊಡಗಿನ ನೆರೆ ಸಂತ್ರಸ್ತ ಜನರು ಇದರ ಉಪಯೋಗ ಪಡೆದುಕೊಳ್ಳುಬಹುದಾಗಿದೆ ಎಂದು ಸಿ.ಚನ್ನಿಗಪ್ಪ ಮನವಿ ಮಾಡಿದರು.
ತುಮಕೂರು ಸೇರಿದಂತೆ ರಾಜ್ಯದ ವಿವಿಧೆಡೆ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುತ್ತಿದ್ದು, ಕಳೆದ ಮೂರು ತಿಂಗಳಲ್ಲಿ ರೈತರು, ಬಡವರಿಗೆ ಹಲವಾರು ಯೋಜನೆಗಳನ್ನು ಪ್ರಕಟಿಸಿರುವ ಜೆಡಿಎಸ್ ಪಕ್ಷಕ್ಕೆ ಮತದಾರರು ಮತ ನೀಡುವ ಮೂಲಕ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಸಹಕರಿಸುವಂತೆ ಮನವಿ ಮಾಡಿದ ಅವರು, ಚುನಾವಣೆ ನಂತರ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಈ ಹಿಂದಿನಂತೆ ಮುಂದುವರೆಯಲಿದೆ ಎಂದು ಜೆಡಿಎಸ್ ಪಕ್ಷದ ತುಮಕೂರು ಜಿಲ್ಲಾಧ್ಯಕ್ಷರೂ ಆಗಿರುವ ಸಿ.ಚನ್ನಿಗಪ್ಪ ಸ್ಪಷ್ಟಪಡಿಸಿದರು.
ಇಂದು ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲು ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಡಾ.ಜಿ.ಪರಮೇಶ್ವರ್ ಎಲ್ಲರೂ ಕಾರಣ. ಎಂ.ಪಿ.ಚುನಾವಣೆಯಲ್ಲಿ ಕಾಂಗ್ರೆಸ್ನೊಂದಿಗೆ ಮೈತ್ರಿ ಮುಂದುವರೆಯುವ ಕುರಿತು ಪಕ್ಷದ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ. ಹೆಚ್.ಡಿ.ಕೆ. ಒಳ್ಳೆಯ ಕೆಲಸ ಮಾಡಿದರೆ ಅದರ ಕ್ರೆಡಿಟ್ ಕಾಂಗ್ರೆಸ್ ಪಕ್ಷಕ್ಕೂ ಸೇರಲಿದೆ. ಸಮ್ಮಿಶ್ರ ಸರಕಾರದಲ್ಲಿ ಯಾರು ಒಳ್ಳೆಯದನ್ನೇ ಮಾಡಲಿ, ಕೆಟ್ಟದ್ದನ್ನೇ ಮಾಡಲಿ ಅದು ಎರಡು ಪಕ್ಷಗಳಿಗೂ ಸೇರಿದ್ದು ಎಂದರು.
ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಸುರೇಶಗೌಡನ ಬಗ್ಗೆ ನಾನು ಮಾತನಾಡಲ್ಲ. ನನ್ನ ಮಗ ಎಂ.ಎಲ್.ಎ ಆಗಿರುವುದು ತೆರಿಗೆ ಕಟ್ಟಿ, ಕಾನೂನು ಬದ್ದವಾಗಿ, ಜನರಿಂದ ಚುನಾಯಿತನಾಗಿದ್ದಾನೆ. ಆತನಂತೆ ನಕಲಿ ಮಾರ್ಕ್ಸ್ ಕಾರ್ಡು ಮಾರಿ ಬಂದ ಹಣದಿಂದಲ್ಲ ಎಂದು ಲೇವಡಿ ಮಾಡಿದರು.
ಕೇಂದ್ರ ಸಚಿವರ ನಡವಳಿಕೆ ಅಕ್ಷೇಪಾರ್ಹ: ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರಕಾರ, ರಾಜ್ಯ ಸರಕಾರ ಒಗ್ಗೂಡಿ ಕೆಲಸ ಮಾಡಬೇಕಾಗುತ್ತದೆ. ಹಾಗೆಂದ ಮಾತ್ರಕ್ಕೆ ರಾಜ್ಯ ಸರಕಾರ ಕೇಂದ್ರದ ಅಡಿಯಾಳಲ್ಲ. ಸಚಿವರಿಗೆ ಮಿನಿಟ್ ಟು ಮಿನಿಟ್ ಪ್ರೊಗ್ರಾಂ ಮುಖ್ಯವಾಗಿತ್ತೆ ಹೊರತು, ಸಂತ್ರಸ್ಥರ ಕಣ್ಣೀರು ಒರೆಸುವುದಲ್ಲ. ಕೊಡಗು ಉಸ್ತುವಾರಿ ಸಚಿವರ ನಡೆ ಸರಿಯಾಗಿಯೇ ಇದೆ ಎಂದು ಸಾ.ರಾ.ಮಹೇಶ್ ಅವರನ್ನು ಸಮರ್ಥಿಸಿಕೊಂಡರು.







