ಬಾತುಕೋಳಿಗಳು ಈಜುವುದರಿಂದ ನೀರಿನಲ್ಲಿ ಆಮ್ಲಜನಕದ ಮಟ್ಟ ಹೆಚ್ಚಾಗುತ್ತದೆ ಎಂದ ತ್ರಿಪುರಾ ಸಿಎಂ ದೇಬ್
ಅಗರ್ತಲ, ಆ.28: ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ದೇಬ್ ತನ್ನ ವಿಚಿತ್ರ ಹೇಳಿಕೆಗಳಿಂದಲೇ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಇದೀಗ ಅವರು ಹಳ್ಳಿ ಜನರಿಗೆ ಬಾತುಕೋಳಿಗಳನ್ನು ನೀಡಲು ಮುಂದಾಗಿದ್ದಾರೆ. ಅವರ ಪ್ರಕಾರ ಬಾತುಕೋಳಿಗಳು ಹಳ್ಳಿ ಜನರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ನೆರವಾಗುತ್ತವೆ.
ಬಾತುಕೋಳಿಗಳಿಂದ ಸಾಕಷ್ಟು ಲಾಭವಿದೆ ಎಂದು ಹೇಳಿರುವ ದೇಬ್, ಬಾತುಕೋಳಿಗಳು ನೀರನ್ನು ಶುದ್ದ ಮಾಡುತ್ತವೆ. ಅವುಗಳು ನೀರಿನಲ್ಲಿ ಈಜುವುದರಿಂದ ನೀರಿನ ಆಮ್ಲಜನಕ ಮಟ್ಟ ಹೆಚ್ಚಾಗುತ್ತದೆ ಎಂದು ಹೇಳಿದ್ದಾರೆ.
ರುದ್ರಸಾಗರ್ನಲ್ಲಿ ಸಾಂಪ್ರದಾಯಿಕ ಬೋಟ್ ರೇಸ್ನ್ನು ಉದ್ಘಾಟಿಸಿದ ಬಳಿಕ ದೇಬ್ ಇಂತಹದ್ದೊಂದು ಹೇಳಿಕೆ ನೀಡಿ ಮತ್ತೊಮ್ಮೆ ನಗೆಪಾಟಲಿಗೀಡಾಗಿದ್ದಾರೆ. ತ್ರಿಪುರಾದ ಎಲ್ಲ ಹಳ್ಳಿ ಜನರಿಗೆ ಸುಮಾರು 50,000 ಬಿಳಿ ಬಾತುಕೋಳಿ ಮರಿಗಳನ್ನು ಹಂಚಲು ಯೋಜನೆ ಹಾಕಿಕೊಂಡಿದ್ದಾರೆ.
ಬಾತುಕೋಳಿ ಈಜುವುದರಿಂದ ಆಮ್ಲಜನಕ ಮಟ್ಟ ಹೆಚ್ಚಾಗುತ್ತದೆ ಎಂಬ ಮುಖ್ಯಮಂತ್ರಿ ಹೇಳಿಕೆಗೆ ಪ್ರತಿಕ್ರಿಯಿಸಿದ ತ್ರಿಪುರಾ ಜುಕ್ತಿಬಾದ್ ವಿಕಾಸ್ ಮಂಚ್ ಅಧ್ಯಕ್ಷೆ ಮಿಹಿರ್ ಲಾಲ್, ‘‘ಇದೊಂದು ಅರ್ಥವಿಲ್ಲದ ಹೇಳಿಕೆ. ಇದಕ್ಕೆ ವೈಜ್ಞಾನಿಕ ಹಿನ್ನೆಲೆಯಿಲ್ಲ ಎಂದಿದ್ದಾರೆ.