ಕೊಡಗು ಸಂತ್ರಸ್ತರ ನೆರವಿಗೆ ಮುಂದಾದ ಸುತ್ತೂರು ಮಠ: ಸಿಎಂ ಗೆ 50 ಲಕ್ಷ ರೂ. ಚೆಕ್ ಹಸ್ತಾಂತರ
ಮೈಸೂರು,ಆ.28: ಕೊಡಗನ್ನು ಪುನರ್ ನಿರ್ಮಾಣ ಮಾಡಲು ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ಸುತ್ತೂರು ಮಠದ ವತಿಯಿಂದ 50 ಲಕ್ಷ ರೂ.ಗಳ ಚೆಕ್ನ್ನು ಸುತ್ತೂರು ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಹಸ್ತಾಂತರಿಸಿದರು.
ಸುತ್ತೂರು ಶ್ರೀಕ್ಷೇತ್ರದಲ್ಲಿ ಮಂಗಳವಾರ ನಡೆದ ಜಗದ್ಗುರು ಡಾ.ಶಿವರಾತ್ರಿ ರಾಜೇಂದ್ರ ಸ್ವಾಮಿಗಳವರ 103ನೇ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಿಗೆ ನೀಡಿದರು.
ಸುತ್ತೂರು ಮಠದ ಎಲ್ಲಾ ಶಾಲಾ ಕಾಲೇಜು ಇನ್ನಿತರ ಸಂಸ್ಥೆಗಳಿಂದ ಆಚರಿಸುತ್ತಿದ್ದ ರಾಜೇಂದ್ರ ಸ್ವಾಮೀಜಿಗಳ ಜಯಂತಿ ಕಾರ್ಯಕ್ರಮಕ್ಕೆ ಖರ್ಚು ಮಾಡಲಾಗುತ್ತಿದ್ದ ಹಣ ಮತ್ತು ಸಂಸ್ಥೆಯ ಎಲ್ಲಾ ನೌಕರರ ಒಂದು ದಿನದ ಸಂಬಳವನ್ನು ನೀಡುತ್ತಿರುವುದಾಗಿ ಹೇಳಿದರು. ಅದೇ ರೀತಿ ನೆರೆಯ ರಾಜ್ಯ ಕೇರಳದಲ್ಲಿಯೂ ಸಹ ಕಷ್ಟ ನಷ್ಟ ಸಂಭವಿಸಿದ್ದು, ಸುಖದ ಜೀವನ ನಡೆಸುತ್ತಿದ್ದ ಅದೆಷ್ಟೋ ಮಂದಿ ನಿರಾಶ್ರಿತರಾಗಿದ್ದಾರೆ. ಅವರಿಗೂ ಸಹ ಮಠದ ವತಿಯಿಂದ ಇನ್ನೆರಡು ದಿನಗಳಲ್ಲಿ 10 ಲಕ್ಷ ರೂ. ಪರಿಹಾರ ನೀಡುವುದಾಗಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.