ಮುತಾಲಿಕ್ ನಡೆಗೆ ಬೇಸತ್ತು ಶ್ರೀರಾಮಸೇನೆ ಕಾರ್ಯಕರ್ತರ ಸಾಮೂಹಿಕ ರಾಜೀನಾಮೆ
ಬೆಳಗಾವಿ, ಸೆ. 2: ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ನಡೆಯಿಂದ ಬೇಸತ್ತು, ಸೇನೆಯ ಒಂದು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ.
ರವಿವಾರ ರಾಜೀನಾಮೆ ಸಲ್ಲಿಸಿದ ಬಳಿಕ ಮಾತನಾಡಿದ ಶ್ರೀರಾಮಸೇನೆಯ ನಿಕಟಪೂರ್ವ ಜಿಲ್ಲಾಧ್ಯಕ್ಷ ರಮಾಕಾಂತ್ ಕೊಂಡುಸ್ಕರ್, ಸೇನೆಗೆ ಸೇರುವ ಮುನ್ನ ಯಾವುದೇ ರಾಜಕೀಯ ಪಕ್ಷಗಳ ಅಡಿಯಲ್ಲಿ ಕೆಲಸ ಮಾಡಬಾರದೆಂದು ಪ್ರಮಾಣ ಮಾಡಿದ್ದೆವು. ಆದರೆ, ಮುತಾಲಿಕ್ ತಮಗೆ ಬೇಕಾದ ರಾಜಕೀಯ ಪಕ್ಷಗಳಿಗೆ ಬೆಂಬಲ ನೀಡುವಂತೆ ಹೇಳುತ್ತಿದ್ದಾರೆ. ಅಲ್ಲದೆ, ಬಿಜೆಪಿಯಲ್ಲಿ ಟಿಕೆಟ್ ನೀಡದಿದ್ದಾಗ, ಬಿಜೆಪಿಗೆ ವಿರೋಧ ಮಾಡಿ ಅನ್ನುತ್ತಾರೆ. ಮತ್ತೊಂದು ದಿನ ಅದೇ ಪಕ್ಷಕ್ಕೆ ಬೆಂಬಲ ನೀಡಬೇಕೇಂದು ಹೇಳುತ್ತಾರೆ. ಹೀಗಾಗಿ ಮುತಾಲಿಕ್ ಅವರ ನಡೆಗೆ ಬೇಸತ್ತು ಸಂಘಟನೆಯಿಂದ ಹೊರಬರಲು ತೀರ್ಮಾನಿಸಿದ್ದೇವೆ ಎಂದರು.
ಮುತಾಲಿಕ್ ಶ್ರೀರಾಮಸೇನೆ ಕಾರ್ಯಕರ್ತರನ್ನು ತಮಗೆ ಬೇಕಾದ ಹಾಗೇ ಬಳಕೆ ಮಾಡಿಕೊಂಡು, ಆಮೇಲೆ ಕೈ ಬಿಡುತ್ತಾರೆ. ಹೀಗಾಗಿ ಜಿಲ್ಲೆಯ ಬಹುತೇಕ ಕಾರ್ಯಕರ್ತರು ಇಂದು ಸಾಮೂಹಿಕ ರಾಜೀನಾಮೆ ನೀಡಿದ್ದೇವೆ ಎಂದು ಅವರು ಹೇಳಿದರು.