ಬಂಟ್ವಾಳ: ಜಾಕ್ ಮೂಲಕ ಮನೆಯನ್ನೇ ಮೇಲಕ್ಕೆತ್ತಲು ತಯಾರಾದ ಮಾಲಕ !
ಪ್ರವಾಹದ ನೀರು ನುಗ್ಗದಿರಲು ಹೀಗೊಂದು ಉಪಾಯ
ಬಂಟ್ವಾಳ,ಸೆ.4: ಮಳೆಗಾಲ ಶುರುವಾಯಿತೆಂದರೆ ಬಹುತೇಕ ಮಂದಿಗೆ ತಲೆಬಿಸಿ ಶುರುವಾಗುತ್ತದೆ. ತಗ್ಗು ಪ್ರದೇಶದ ಜನರಿಗಂತೂ ಕಷ್ಟಕಾಲ ಆರಂಭವಾಗುತ್ತದೆ. ಮಳೆ ನೀರು ಮನೆಗೆ ನುಗ್ಗಿ ವಾಸಿಸಲೂ ಆಗದೇ ಬೇರೆಡೆಗೆ ತಾತ್ಕಾಲಿಕ ಸ್ಥಳಾಂತರ ಮಾಡಬೇಕಾಗುತ್ತದೆ. ಅಲ್ಲದೇ ಎಲೆಕ್ಟ್ರಾನಿಕ್ ವಸ್ತುಗಳ ಜೊತೆ ಇನ್ನಿತರ ವಸ್ತುಗಳನ್ನೂ ಬೇರೆಡೆಗೆ ಸಾಗಿಸಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಆದರೆ ಇಷ್ಟೆಲ್ಲ ಕಷ್ಟಗಳನ್ನು ಪ್ರತಿ ವರ್ಷವೂ ಅನುಭವಿಸುವ ಸಜೀಪನಡು ಗ್ರಾಮದ ಬೈಲಗುತ್ತು ನಿವಾಸಿ ರಿಯಾಝ್ ಎಂಬವರು ಇದಕ್ಕೊಂದು ಪರಿಹಾರವನ್ನು 'ಹೌಸ್ ಲಿಫ್ಟಿಂಗ್' ಮೂಲಕ ಕಂಡುಕೊಳ್ಳಲು ಹೊರಟಿದ್ದಾರೆ.
ಭಾರೀ ಮಳೆ ಸುರಿದ ಸಂದರ್ಭ ನೇತ್ರಾವತಿ ನದಿ ನೀರು ಗ್ರಾಮದ ಕೆಲ ಮನೆಗಳಿಗೆ ನುಗ್ಗುತ್ತದೆ. ಬೈಲಗುತ್ತು, ಬೋಳಮೆ ನಿವಾಸಿಗಳು ಇದರಿಂದ ತೊಂದರೆಗೆ ಒಳಗಾಗುತ್ತಾರೆ. ಅಲ್ಲಿನ ರಸ್ತೆ ಸಂಪರ್ಕವೂ ಕಡಿತಗೊಳ್ಳುತ್ತದೆ. ಈ ವೇಳೆ ಅನ್ಯ ದಾರಿಯಿಲ್ಲದೇ ಬೇರೆಡೆಗೆ ತಾತ್ಕಾಲಿಕ ಸ್ಥಳಾಂತರವಾಗಬೇಕಾಗುತ್ತದೆ. ಇದರಿಂದ ಬೇಸತ್ತ ರಿಯಾಝ್ ರವರು ಸೂಕ್ತ ಪರಿಹಾರದ ದಾರಿ ಹುಡುಕುವ ವೇಳೆ ಸ್ಥಳೀಯರಿಂದ 'ಹೌಸ್ ಲಿಫ್ಟಿಂಗ್' ಕುರಿತು ಮಾಹಿತಿ ಲಭಿಸಿದೆ. ಅದರಂತೆ ದೆಹಲಿ ಮೂಲದ 'ಹರಿ ಓಂ ಶಿವ ಹೌಸ್ ಲಿಫ್ಟಿಂಗ್ & ಕನ್ಸ್ ಟ್ರಕ್ಷನ್ ಪ್ರೈ.ಲಿ. ಬಗ್ಗೆ ಮಾಹಿತಿ ಪಡೆದು, ಅವರ ಮೂಲಕ ಮನೆಯನ್ನೆ ಮೇಲಕ್ಕೆತ್ತುವ ಸಾಹಸಕ್ಕೆ ಕೈ ಹಾಕಿದ್ದಾರೆ.
ಇಷ್ಟರ ತನಕ ಕೇವಲ ಲಾರಿ, ಕಾರು, ಬಸ್ ಗಳಿಗೆ ಹಾಕಲಾಗುತ್ತಿದ್ದ ಜಾಕ್ ಇದೀಗ ಮನೆಯನ್ನು ಮೇಲಕ್ಕೆತ್ತಲು ಬಳಸುತ್ತಿದ್ದು, ಅದರ ಮೂಲಕವೇ ಇಡೀ ಮನೆಯನ್ನು ಗೋಡೆ ಕುಸಿಯದ ರೀತಿಯಲ್ಲಿ ಲಿಫ್ಟ್ ಮಾಡಲಾಗುತ್ತದೆ. ಕೇವಲ ನೆಲ ಅಗೆದು ನಂತರ ಗೋಡೆಯೊಂದಿಗೆ ನಿರ್ದಿಷ್ಟ ಎತ್ತರಕ್ಕೆ ಮನೆಯನ್ನು ಎತ್ತರಿಸಿ ಕಟ್ಟಲಾಗುತ್ತದೆ.
'ಪ್ರತಿ ವರ್ಷ ಮನೆಗೆ ನೀರು ನುಗ್ಗುವುದರಿಂದ ಬೇಸತ್ತು ಈ ಸಾಹಸಕ್ಕೆ ಇಳಿದಿದ್ದೇನೆ. ಸ್ಥಳೀಯರಿಂದ ಮಾಹಿತಿ ಪಡೆದು 'ಹರಿ ಓಂ ಶಿವ ಹೌಸ್ ಲಿಫ್ಟಿಂಗ್ & ಕನ್ಸ್ ಟ್ರಕ್ಷನ್ ಪ್ರೈ.ಲಿ. ಮೂಲಕ ಮನೆಯನ್ನೇ ಮೇಲಕ್ಕೆತ್ತಲಾಗುವುದು. ಈಗಾಗಲೇ ಕೆಲಸ ಶುರುವಾಗಿದ್ದು, ಕೆಲವೇ ದಿನಗಳಲ್ಲಿ ಪೂರ್ತಿಯಾಗಲಿದೆ. 1000 ಚದರ ಮೀ. ನ ಮನೆಗೆ ಸುಮಾರು 2.5 ಲಕ್ಷ ರೂ. ಖರ್ಚಾಗುತ್ತದೆ' ಎಂದು ಮನೆ ಮಾಲಕ ಮುಹಮ್ಮದ್ ರಿಯಾಝ್ ವಿವರಿಸುತ್ತಾರೆ.
'ಸದ್ಯಕ್ಕೆ 1 ಫೀಟ್ ನಷ್ಟು ಮೇಲಕ್ಕೆತ್ತಲಾಗಿದ್ದು, ಇನ್ನೂ ಎರಡೂವರೆ ಫೀಟ್ ಮೇಲಕ್ಕೆ ಎತ್ತರಿಸಬೇಕಾಗಿದೆ. ಸುಮಾರು 180 ರಷ್ಟು ಜಾಕ್ ಗಳನ್ನು ಬಳಸಿ ಕ್ರಮಬದ್ಧವಾಗಿ ಮನೆಯ ನಾಲ್ಕೂ ಕಡೆಗಳಿಂದ ಮೇಲಕ್ಕೇರಿಸಲಾಗುತ್ತದೆ. ಮೇಲೆ ಏರಿಸಿದಂತೆಯೇ ಒಂದೊಂದು ಜಾಕ್ ಗಳನ್ನು ಕಳಚಿ ಕಲ್ಲನ್ನು ಕಟ್ಟಿ ಭದ್ರಪಡಿಸಲಾಗುತ್ತದೆ' ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ಹರಿ ಓಂ ಶಿವ ಹೌಸ್ ಲಿಫ್ಟಿಂಗ್& ಕನ್ಸ್ ಟ್ರಕ್ಷನ್ ಕಂಪೆನಿಯು ಪ್ರಪ್ರಥಮ ಬಾರಿಗೆ ಕರ್ನಾಟಕದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಬೇರೆ ಕನ್ಸ್ ಟ್ರಕ್ಷನ್ ಕಂಪೆನಿಯು ರಾಜ್ಯದ ಒಂದೆರಡು ಕಡೆಗಳಲ್ಲಿ ಮಾತ್ರ ಈ ರೀತಿಯ ಹೌಸ್ ಲಿಫ್ಟಿಂಗ್ ಅಥವಾ ಸ್ಥಳಾಂತರ ಕಾಮಗಾರಿ ಪೂರ್ಣಗೊಳಿಸಿದೆ ಎನ್ನಲಾಗುತ್ತಿದೆ. ಇದುವರೆಗೆ ಹೊರ ರಾಜ್ಯಗಳಲ್ಲಿ ಕಾಣುತ್ತಿದ್ದ ಇಂತಹ ತಂತ್ರಜ್ಞಾನದ ಬಳಕೆ ಕರಾವಳಿ ಭಾಗದಲ್ಲೂ ಕಾರ್ಯ ನಿರ್ವಹಿಸುವ ಮೂಲಕ ತಗ್ಗು ಪ್ರದೇಶದ ನಿವಾಸಿಗಳಿಗೆ ಪ್ರವಾಹದ ಭೀತಿಯನ್ನು ದೂರಮಾಡಲು ಹೊರಟಿದೆ. ಒಟ್ಟಿನಲ್ಲಿ ಪ್ರವಾಹದ ನೀರು ತಗ್ಗು ಪ್ರದೇಶಗಳಿಗೆ ನುಗ್ಗುವುದರಿಂದ ಉಂಟಾಗುವ ಸಮಸ್ಯೆಗಳಿಗೆ ಹೌಸ್ ಲಿಫ್ಟಿಂಗ್ ಪರಿಹಾರ ಒದಗಿಸುತ್ತಿದೆ.
ಮೊದಲು ಗೋಡೆ ಕುಸಿಯುವ ಬಗ್ಗೆ ಭಯವಿತ್ತು. ಆದರೆ ನೀರು ಒಳ ನುಗ್ಗದಿರಲು 'ಹೌಸ್ ಲಿಫ್ಟಿಂಗ್' ಕಾರ್ಯವನ್ನು ಮಾಡಲೇಬೇಕಾಯಿತು. ಇದರ ಜೊತೆಗೆ ನನ್ನ ಸಹೋದರನ ಮನೆಯನ್ನೂ ಕೂಡಾ ಇದೇ ರೀತಿ ಮೇಲಕ್ಕೆತ್ತಲು ತೀರ್ಮಾನಿಸಿದ್ದು, ಆ ಮನೆಯ ಕೆಲಸವೂ ಶುರುವಾಗಿದೆ. ಅದಕ್ಕೆ 3 ಲಕ್ಷ ಖರ್ಚಾಗಲಿದೆ'.
-ಮುಹಮ್ಮದ್ ರಿಯಾಝ್, ಮನೆ ಮಾಲಕ
ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಕೆಲಸ ನಿರ್ವಹಿಸುತ್ತಿದ್ದು, ಕೇರಳ ಸೇರಿದಂತೆ ಇನ್ನಿತರ ರಾಜ್ಯಗಳಲ್ಲಿ ಈಗಾಗಲೇ ಕೆಲಸ ಯಶಸ್ವಿಯಾಗಿ ಮುಗಿಸಿದ್ದೇವೆ. ಇದಕ್ಕೆ ಕೇವಲ 1 ತಿಂಗಳ ಸಮಯದ ಅಗತ್ಯವಿದ್ದು, ಈ ಅವಧಿಯಲ್ಲಿ ನಮ್ಮ ಕಾರ್ಯವನ್ನು ಪೂರ್ತಿಗೊಳಿಸುತ್ತೇವೆ. ಇಲ್ಲಿ ಕೆಲಸ ಶುರು ಮಾಡಿದ ನಂತರ ಈ ಮನೆ ಮಾಲಕನ ಸಹೋದರನ ಮನೆಯನ್ನೂ ಇದೇ ರೀತಿ ಲಿಫ್ಟ್ ಮಾಡಲು ಸೂಚಿಸಿದ್ದು, ಈಗಾಗಲೇ ಕೆಲಸ ಶುರು ಮಾಡಿದ್ದೇವೆ.
-ರಾಹುಲ್ ಚೌಹಾನ್, ಹರಿ ಓಂ ಶಿವ ಹೌಸ್ ಲಿಫ್ಟಿಂಗ್& ಕನ್ಸ್ ಟ್ರಕ್ಷನ್ ಮಾಲಕ