ಮೀಸಲಾತಿ ನಿಲ್ಲಲಿ: ಬಿಜೆಪಿ ಎಸ್ಸಿ ಮೋರ್ಚಾ ಆಗ್ರಹ
ಬೆಳ್ತಂಗಡಿ, ಸೆ.6: ಅಂಬೇಡ್ಕರ್ ಹೆಸರಲ್ಲಿ ರೋಲ್ಕಾಲ್ ಗೂಂಡಾಗಿರಿಯನ್ನು ಬೆಳೆಸುತ್ತಾ ಹಿಂದೂ ಸಮಾಜದಲ್ಲಿ ಅರಾಜಕತೆ, ಕಂದಕ ಸೃಷ್ಟಿಸುವುದನ್ನು ನಿಲ್ಲಿಸಿ ಎಂದು ಬಿಜೆಪಿ ಎಸ್ಸಿ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ.ಚಿ.ನಾ.ರಾಮು ಎಚ್ಚರಿಸಿದ್ದಾರೆ.
ಬೆಳ್ತಂಗಡಿ ತಾಲೂಕು ಮಿನಿವಿಧಾನ ಸೌಧದ ಆವರಣದಲ್ಲಿ ಗುರುವಾರ ನಡೆದ ಹಿಂದೂಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು. ಮೀಸಲಾತಿ ಎಂಬುದು ನಿರಂತರ ಅಲ್ಲ ಎಂಬುದನ್ನು ಅಂಬೇಡ್ಕರ್ ಅಂದೇ ಹೇಳಿದ್ದರು. ಮೀಸಲಾತಿಯಿಂದಾಗಿ ಶ್ರೀಮಂತರಾದ ವರ್ಗವೊಂದು ನಿರ್ಮಾಣವಾಗಿದೆ. ಅವರು ಇನ್ನು ಮುಂದೆ ಮೀಸಲಾತಿ ಬಿಟ್ಟುಕೊಡಬೇಕು. ವಾಸ್ತವಿಕವಾಗ ಮೀಸಲಾತಿ ಶೋಷಿತರನ್ನು ಇನ್ನೂ ಅಸಾಹಯಕರನ್ನಾಗಿ ಮಾಡುತ್ತಿದೆ. ಮೀಸಲಾತಿ ಎಂದರೆ ಹಂಚಿಕೊಂಡು ಬಾಳಬೇಕು ಎಂಬುದು ಅಂಬೇಡ್ಕರ್ ಅವರ ಆಶಯವಾಗಿತ್ತು ಆರ್ಥಿಕ ಸಾಮಾಜಿಕ ಮೀಸಲಾತಿ ಆಗಬೇಕು ಎಂದರು.
ಬಿಜೆಪಿ ಮುಖಂಡ ಫಟಾಪಟ್ ಶ್ರೀನಿವಾಸ್, ಶಾಸಕ ಹರೀಶ್ ಪೂಂಜ, ಬಜರಂಗದಳ ಮುಖಂಡ ಮುರಲೀಕೃಷ್ಣ ಹಸಂತ್ತಡ್ಕ, ವಿ.ಹಿಂ.ಪ. ಜಿಲ್ಲಾಧ್ಯಕ್ಷ ಡಾ.ಕೃಷ್ಣ ಪ್ರಸನ್ನ, ಜಿಲ್ಲಾ ಉಪಾಧ್ಯಕ್ಷ ಭಾಸ್ಕರ ಧರ್ಮಸ್ಥಳ ಉಪಸ್ಥಿತರಿದ್ದರು. ವಿಹಿಂಪ ದ ಬೆಳ್ತಂಗಡಿ ಪ್ರಖಂಡ ಅಧ್ಯಕ್ಷ ಸುಬ್ರಹ್ಮಣ ಕುಮಾರ್ ಅಗರ್ತ ಸ್ವಾಗತಿಸಿ, ಪ್ರಸ್ತಾವಿಸಿದರು. ಕಾರ್ಯದರ್ಶಿ ನವೀನ್ ನೆರಿಯ ಕಾರ್ಯಕ್ರಮ ನಿರ್ವಹಿಸಿದರು. ಶಶಾಂಕ ಭಟ್ ಮನವಿ ವಾಚಿಸಿದರು. ಬಳಿಕ ತಹಶೀಲ್ದಾರ್ರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಕೆಲ ದಿನಗಳ ಹಿಂದೆ ಯಾರೋ ಇಲ್ಲಿ ಪ್ರತಿಭಟನೆ ಮಾಡಿದರು. ಅಂಥವರು ಓಟು ಬಂದಾಗ ಕಾಂಗ್ರೆಸ್ನ ಹಿಂದೆ ಹೋಗಿದ್ದಾರೆ. ಅಂಥವರ ಅಗತ್ಯ ನಮಗಿಲ್ಲ. ಓಟು ಬಂದಾಗ ಕಾಂಗ್ರೆಸ್, ಚಂದಾ ಕೇಳುವಾಗ ಹಿಂದುತ್ವ, ಕೇಸರಿ ನೆನಪಾಗುತ್ತದೆ. ನಾಚಿಕೆಯಾಗಬೇಕು ಅವರಿಗೆ. ದ.ಕ. ಜಿಲ್ಲೆಯ ಜನತೆಗೆ ಹಿಂದುತ್ವ ಕಲಿಸಲು ಯಾರೂ ಬರಬೇಕಾಗಿಲ್ಲ. ಕಾಂಗ್ರೆಸ್ನ್ನು ಬೆಂಬಲಿಸುವ ಹಿಂದೂಗಳ ಅಗತ್ಯವೇ ನಮಗಿಲ್ಲ.
ಹರೀಶ್ ಪೂಂಜ, ಬೆಳ್ತಂಗಡಿ ಶಾಸಕ