ಗುಂಪು ಥಳಿತ ಪ್ರಕರಣಗಳಿಗೆ ಅಂತ್ಯ ಹಾಡಲು ನೀಡಿದ ಆದೇಶವನ್ನು ಒಂದು ವಾರದೊಳಗೆ ಪಾಲಿಸಿ
ಕೇಂದ್ರ, ರಾಜ್ಯಗಳಿಗೆ ಸುಪ್ರೀಂ ಆದೇಶ
ಹೊಸದಿಲ್ಲಿ, ಸೆ.7: ಗುಂಪು ಥಳಿತ ಪ್ರಕರಣಗಳನ್ನು ತಡೆಯಲು ಒಂದು ನಿರ್ದಿಷ್ಟ ವ್ಯವಸ್ಥೆಯನ್ನು ಜಾರಿಗೆ ತರುವಂತೆ ತಾನು ನೀಡಿರುವ ತೀರ್ಪನ್ನು ಜಾರಿಗೊಳಿಸಲು ಸುಪ್ರೀಂ ಕೋರ್ಟ್ ರಾಜ್ಯಗಳಿಗೆ ಒಂದು ವಾರದ ಕಾಲಾವಕಾಶ ನೀಡಿದೆ.
ಭವಿಷ್ಯದಲ್ಲಿ ಗುಂಪು ಥಳಿತ ಪ್ರಕರಣಗಳನ್ನು ನಿಲ್ಲಿಸುವ ಸಲುವಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ನಿವಾರಣೋಪಾಯಗಳ ಜತೆಗೆ ಕಠಿಣ ಕ್ರಮಗಳು ಹಾಗೂ ಪರಿಹಾರೋಪಾಯಗಳನ್ನು ಕೈಗೊಳ್ಳಬೇಕೆಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹಾಗೂ ನ್ಯಾಯಮೂರ್ತಿಗಳಾದ ಎ.ಎಂ. ಖನ್ವಿಲಕರ್ ಹಾಗೂ ಡಿ.ವೈ. ಚಂದ್ರಚೂಡ್ ಅವರನ್ನೊಳಗೊಂಡ ಪೀಠ ಜುಲೈ ತಿಂಗಳಲ್ಲಿ ಆದೇಶಿಸಿತ್ತು.
ಸುಪ್ರೀಂ ಕೋರ್ಟ್ ಈ ನಿಟ್ಟಿನಲ್ಲಿ ನೀಡಿರುವ ಹಲವಾರು ಸೂಚನೆಗಳನ್ನು ಪಾಲಿಸಿದ ಬಗ್ಗೆ ವರದಿ ಸಲ್ಲಿಸುವಂತೆಯೂ ಮುಖ್ಯ ನ್ಯಾಯಮೂರ್ತಿ ಮಿಶ್ರಾ ರಾಜ್ಯ ಸರಕಾರಗಳು ಹಾಗೂ ಕೇಂದ್ರಕ್ಕೆ ಹೇಳಿದ್ದಾರೆ.
ಗುಂಪು ಥಳಿತ ಪ್ರಕರಣಗಳಲ್ಲಿ ಭಾಗಿಯಾಗುವವರಿಗೆ ಕಠಿಣ ಶಿಕ್ಷೆ ವಿಧಿಸಲು ಅನುವಾಗಲೆಂದು ಪ್ರತ್ಯೇಕ ಕಾನೂನು ಜಾರಿಗೊಳಿಸುವಂತೆಯೂ ಸುಪ್ರೀಂ ಕೋರ್ಟ್ ಸಂಸತ್ತಿಗೆ ಸೂಚಿಸಿದೆ. ಇಂತಹ ಗುಂಪು ಥಳಿತ ಪ್ರಕರಣಗಳನ್ನು ಸಹಿಸುವ ಪ್ರಶ್ನೆಯೇ ಇಲ್ಲ, ಯಾವುದೇ ನಾಗರಿಕ ಕಾನೂನನ್ನು ಕೈಗೆತ್ತಿಕೊಳ್ಳುವ ಹಾಗಿಲ್ಲ, ಗುಂಪು ಥಳಿತ ಪ್ರಕರಣಗಳನ್ನು ಕಠಿಣ ಕ್ರಮಗಳ ಮೂಲಕ ನಿಯಂತ್ರಿಸಬೇಕಿದೆ ಎಂದು ನ್ಯಾಯಾಲಯ ಹೇಳಿದೆ.