ಸಮರ್ಪಕ ಕೆಪಿಎಂಇ ಕಾಯ್ದೆ ಜಾರಿಗೆ ಆಗ್ರಹ

ಬೆಂಗಳೂರು, ಸೆ.15: ಕರ್ನಾಟಕ ಖಾಸಗಿ ಆಸ್ಪತ್ರೆಗಳ ಕಾಯ್ದೆ(ತಿದ್ದುಪಡಿ) (ಕೆಪಿಎಂಇ)ಯನ್ನು ರಾಜ್ಯಾದ್ಯಂತ ಕೂಡಲೇ ಸಮರ್ಪಕವಾಗಿ ಅನುಷ್ಠಾನ ಮಾಡಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ಜನಾರೋಗ್ಯ ಚಳವಳಿ ವೇದಿಕೆ ಕಾರ್ಯಕರ್ತರು ನಗರದ ಆನಂದ್ವೃತ್ತದ ಬಳಿಯಿರುವ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು.
ಖಾಸಗಿ ಆಸ್ಪತ್ರೆಗಳ ವೆುೀಲೆ ನಿಯಂತ್ರಣ ಸ್ಥಾಪಿಸುವ ಉದ್ದೇಶದಿಂದ ಸರಕಾರ ಕೆಪಿಎಂಇ ಕಾಯ್ದೆ ಜಾರಿ ಮಾಡಿ 9 ತಿಂಗಳು ಕಳೆದರೂ ಸಮರ್ಪಕವಾಗಿ ಅನುಷ್ಠಾನ ಮಾಡುವಲ್ಲಿ ವಿಫಲವಾಗಿದ್ದಾರೆ. ಇದರಿಂದಾಗಿ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳು ಗಂಭೀರ ಸಮಸ್ಯೆಗಳಿಗೆ ಹೊಣೆಗಾರಿಕೆ ಇಲ್ಲದಂತಾಗಿದೆ. ಅಲ್ಲದೆ, ಖಾಸಗಿ ಆಸ್ಪತ್ರೆಗಳಲ್ಲಿ ನಿಯಮಗಳನ್ನು ಉಲ್ಲಂಘಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಕೆಪಿಎಂಇ ಕಾಯ್ದೆ ಪ್ರಕಾರ ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಯ ಹಕ್ಕುಗಳ ಮಾಹಿತಿ ಫಲಕ ಹಾಕಬೇಕು. ಆಂತರಿಕ ದೂರು ನಿವಾರಣಾ ವ್ಯವಸ್ಥೆಯ ಮಾಹಿತಿ ಪ್ರಕಟಿಸಬೇಕು. ಆಸ್ಪತ್ರೆಯ ಸೇವಾ ಶುಲ್ಕ ವಿವರ ಪ್ರಕಟ ಮಾಡಬೇಕು ಸೇರಿದಂತೆ ಹಲವಾರು ನಿಯಮಗಳನ್ನು ತರಲಾಗಿದೆ. ಆದರೆ, ಇದರಲ್ಲಿ ಒಂದನ್ನು ಯಾವ ಆಸ್ಪತ್ರೆಯೂ ಪಾಲಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕಾಯ್ದೆಯ ನಿಯಮಗಳಿಗೆ ಅನುಗುಣವಾಗಿ ಜಿಲ್ಲಾ ಮಟ್ಟದ ದೂರು ನಿವಾರಣಾ ಪ್ರಾಧಿಕಾರಗಳು ಎಲ್ಲಿಯೂ ರಚನೆಯಾಗಿಲ್ಲ. ಈ ಸಮಿತಿಗಳಲ್ಲಿ ನಾಗರಿಕರ ಪರವಾದ ಒಬ್ಬ ಮಹಿಳಾ ಸದಸ್ಯೆ ಇರಬೇಕೆಂದು ನಿಯಮವಿದೆ. ಆದರೆ, ನಾಗರಿಕ ಪರ ಸದಸ್ಯರ ಗೈರು ಹಾಜರಿಯಲ್ಲಿಯೇ ಹಳೆಯ ಪದ್ಧತಿಯಲ್ಲಿ ಸಮಿತಿಗಳು ಮುಂದುವರೆದಿವೆ. ಖಾಸಗಿ ಆಸ್ಪತ್ರೆಗಳ ನಿಯಮ ಉಲ್ಲಂಘನೆಗಳಿಗೆ ಎಲ್ಲಿ ದೂರು ಸಲ್ಲಿಸಬೇಕು, ಯಾರನ್ನು ಸಂಪರ್ಕಿಸಬೇಕು ಎಂಬುದರ ಬಗ್ಗೆ ಸಾರ್ವಜನಿಕರಲ್ಲಿ ಯಾವುದೇ ಮಾಹಿತಿ ಇಲ್ಲ. ಈ ಕುರಿತು ಯಾವುದೇ ಖಾಸಗಿ ಆಸ್ಪತ್ರೆಗಳಲ್ಲಿ ಮಾಹಿತಿ ಫಲಕಗಳು ಇಲ್ಲ ದೂರಿದರು.
ಆದುದರಿಂದಾಗಿ ಕೂಡಲೇ, ದೂರು ನಿವಾರಣಾ ಪ್ರಾಧಿಕಾರ ರಚಿಸುವ ತನಿಖಾ ತಂಡದಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ತಜ್ಞರನ್ನು ಒಳಗೊಳ್ಳಬೇಕು. ತನಿಖಾ ತಂಡಗಳು ನಿಷ್ಪಕ್ಷಪಾತವಾಗಿ ಸಂತ್ರಸ್ತ ರೋಗಿಗಳಿಗೆ ನ್ಯಾಯ ಒದಗಿಸುವಂತೆ ತನಿಖೆ ನಡೆಸಬೇಕು. ತನಿಖೆಯ ನಂತರ ತನಿಖೆಯ ವರದಿಯ ಪ್ರತಿಯನ್ನು ದೂರುದಾರರಿಗೆ ನೀಡಬೇಕು. ರೋಗಿ ಪರವಾದ ವರದಿಗಳನ್ನು ಆಧರಿಸಿ ಕಾಯ್ದೆಯಡಿ ಶಿಸ್ತು ಕ್ರಮ ಕೈಗೊಳ್ಳಲು ಆರೋಗ್ಯ ಇಲಾಖೆ ಮುಂದಾಗಬೇಕು. ದೂರು ಸಲ್ಲಿಸಿದ 90 ದಿನಗಳೊಳಗೆ ತನಿಖೆಯನ್ನು ಪೂರ್ಣಗೊಳಿಸಿ ಕ್ರಮ ಕೈಗೊಳ್ಳಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.







