ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ: ವಿದೇಶಿ ಪ್ರಜೆಗಳ ಸೆರೆ

ಬೆಂಗಳೂರು, ಸೆ.15: ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ನೈಜೀರಿಯನ್, ಉಗಾಂಡ ಮತ್ತು ದಕ್ಷಿಣ ಸುಡಾನ್ ದೇಶಗಳ ಪ್ರಜೆಗಳು ಸೇರಿದಂತೆ ನಾಲ್ವರನ್ನು ಕೊತ್ತನೂರು ಠಾಣಾ ಪೊಲೀಸರು ಬಂಧಿಸಿ, ಒಂದು ಕೆಜಿ ಗಾಂಜಾ ಸೇರಿ ಇನ್ನಿತರೆ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ನಗರದ ಯಲಹಂಕ ಉಪನಗರದ ನೆಲೆಸಿದ್ದ ನೈಜೀರಿಯನ್ ದೇಶದ ಪ್ರಜೆ ಚುಕ್ವುನಾನ್ಸೋ ಅಜ್ಮಮೆಕ್ವೆ (42), ಕಲ್ಯಾಣ ನಗರದ ಬಾಬುಸಾಪಾಳ್ಯದ ಜಿಎನ್ಆರ್ ಗಾರ್ಡನ್ನಲ್ಲಿ ನೆಲೆಸಿದ್ದ ಉಗಾಂಡ ದೇಶದ ಲುತಾಯ ಪ್ಯಾಟ್ರಿಕ್(36). ಕಲ್ಯಾಣ ನಗರದ ಚಳ್ಳಕೆರೆ ಗ್ರಾಮದ ಚಿನ್ನಪ್ಪ ಲೇಔಟ್ನಲ್ಲಿ ವಾಸವಿದ್ದ ದಕ್ಷಿಣ ಸುಡಾನ್ ದೇಶದ ಸಬಾಸಿಯೊ ಪೌಲ್ ಗಿಲ್ಲೊ(22) ಹಾಗೂ ಮಾರುತಿ ಸೇವಾ ನಗರ ವೆಂಕಟರಮಣ ಲೇಔಟ್ ಅಂಚೆ ಕಚೇರಿ ರಸ್ತೆ ನಿವಾಸಿ ಕೇರಳ ಮೂಲದ ಡೊನ್ ಕೆ. ಥಾಮಸ್(24) ಬಂಧಿತರು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಕೊತ್ತನೂರು ಠಾಣಾ ವ್ಯಾಪ್ತಿಯ ಕ್ರಿಸ್ತು ಜಯಂತಿ ಕಾಲೇಜು ಹತ್ತಿರ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಕೊತ್ತನೂರು ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ವಿದೇಶಿ ಆರೋಪಿಗಳ ವಿರುದ್ಧ ಪಾಸ್ಪೋರ್ಟ್ ಕಾಯ್ದೆ, ವಿದೇಶಿಯರ ನೋಂದಣಿ ಕಾಯ್ದೆ ಮತ್ತಿತರ ಕಾಯ್ದೆಗಳಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.
ಬಂಧಿತರಿಂದ 5 ಲಕ್ಷ ರೂ. ಮೌಲ್ಯದ ಒಂದು ಕೆ.ಜಿ.ಗಾಂಜಾ, 25 ಗ್ರಾಂ ಚರಸ್, 110 ಗ್ರಾಂ ತೂಕದ 254 ಎಂಡಿಎಂಎಸ್ ಪಿಲ್ಸ್ ಮಾತ್ರೆ, 6 ಗ್ರಾಂ ಕೊಕೇನ್, 8 ಎಲ್ಎಸ್ಡಿ ಪೇಪರ್ ಪೀಸ್, ಎರಡು ವೇಯಿಂಗ್ ಮೆಷಿನ್, ಮಾದಕ ವಸ್ತುಗಳನ್ನು ಸೇದುವ ಹುಕ್ಕಾ ಸಾಮಗ್ರಿ, 6 ಮೊಬೈಲ್ ಸೇರಿದಂತೆ ಇನ್ನಿತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.







