ಗೋಳಿಹೊಳೆ ಕೊಲೆ ಪ್ರಕರಣ: ಆರೋಪಿ ಸಹೋದರರಿಗೆ ಜಾಮೀನು
ಕುಂದಾಪುರ, ಸೆ.19: ಮನೆಯಲ್ಲಿ ಕುಡಿದು ಜಗಳ ಮಾಡುತ್ತಿದ್ದ ಹಿರಿಯ ಸಹೋದರ ಗೋಳಿಹೊಳೆ ಗ್ರಾಮದ ಕಂಬಳಗದ್ದೆಯ ಮುತ್ತಯ್ಯ ನಾಯ್ಕ(35) ಎಂಬವರನ್ನು ಕೊಲೆ ಮಾಡಿ ಸುಟ್ಟು ಹಾಕಿದ ಪ್ರಕರಣದ ಆರೋಪಿಗಳಾದ ಕಿರಿಯ ಸಹೋದರಿಬ್ಬರಿಗೆ ಕುಂದಾಪುರ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಶರ್ತಬದ್ಧ ಜಾಮೀನು ನೀಡಿ ಆದೇಶಿಸಿದೆ.
ಕಂಬಳಗದ್ದೆ ಜಟ್ಟಿಗೇಶ್ವರ ದೇವಸ್ಥಾನದ ಬಳಿಯ ನಿವಾಸಿ ದುರ್ಗಾ ನಾಯ್ಕ (32) ಹಾಗೂ ರಾಘವೇಂದ್ರ ನಾಯ್ಕ(28) ಎಂಬವರು ಜಾಮೀನು ಪಡೆದ ಆರೋಪಿಗಳು. ಪ್ರತಿದಿನ ಕುಡಿದು ಬಂದು ಮನೆಯಲ್ಲಿ ಜಗಳ ಮಾಡುತ್ತಿದ್ದ ಮುತ್ತಯ್ಯ ನಾಯ್ಕರನ್ನು ಇವರಿಬ್ಬರು 2018ರ ಎ.26ರಂದು ಸಂಜೆ ವೇಳೆ ಕೈಕಾಲು ಕಟ್ಟಿ ಕುತ್ತಿಗೆಯನ್ನು ಹಗ್ಗದಿಂದ ಬಿಗಿದು ಕೊಲೆ ಮಾಡಿದ್ದರು.
ಮುತ್ತಯ್ಯ ನಾಯ್ಕರ ಸಾವನ್ನು ಆತ್ಮಹತ್ಯೆ ಎಂಬುದಾಗಿ ಬಿಂಬಿಸಲು ಯತ್ನಿಸಿ, ಅದೇ ದಿನ ರಾತ್ರಿ ಮನೆಯ ಸಮೀಪದ ಹಾಡಿಯಲ್ಲಿ ಮೃತದೇಹವನ್ನು ಸುಟ್ಟು ಹಾಕಿದ್ದರು. ಎ.28ರಂದು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ಗಳ ಪರವಾಗಿ ಕುಂದಾಪುರದ ನ್ಯಾಯವಾದಿ ರವಿಕಿರಣ ಮುರ್ಡೇಶ್ವರ ವಾದಿಸಿ ದ್ದರು.