ಸೆ.21ಕ್ಕೆ ಕರ್ನಾಟಕ ರೆಡ್ಡಿಜನ ಸಂಘದ ವಿವಿಧ ಕಟ್ಟಡ ಉದ್ಘಾಟನೆ
ಬೆಂಗಳೂರು, ಸೆ.20: ಕರ್ನಾಟಕ ರೆಡ್ಡಿಜನ ಸಂಘದ ನೂತನ ಕಟ್ಟಡಗಳ ಸಮುಚ್ಛಯದ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಸಮಾರಂಭ ಸೆ.21ರಂದು ನಡೆಯಲಿದೆ ಎಂದು ಕರ್ನಾಟಕ ರೆಡ್ಡಿಜನ ಸಂಘದ ಕಾಮಗಾರಿ ಸಮಿತಿ ಅಧ್ಯಕ್ಷ ಶ್ರೀ ವೆಂಕಟಶಿವಾ ರೆಡ್ಡಿ ವಿ. ತಿಳಿಸಿದ್ದಾರೆ.
ಅಂದು ವೇಮನ ತಾಂತ್ರಿಕ ವಿದ್ಯಾಲಯದ ಪ್ರಾಂಗಣದಲ್ಲಿ ನಡೆಯಲಿರುವ ಸಮಾರಂಭದ ದಿವ್ಯ ಸಾನಿಧ್ಯವನ್ನು ರೆಡ್ಡಿ ಗುರುಪೀಠದ ಶ್ರೀ ವೇಮನಾನಂದ ಸ್ವಾಮೀಜಿ ವಹಿಸಲಿದ್ದಾರೆ.
ಮರಸೂರಿನಲ್ಲಿ ನಿರ್ಮಾಣವಾಗಿರುವ ವೇಮನ ಆಸ್ಪತ್ರೆ ಕಟ್ಟಡ, ಜೆ.ಸಿ. ರಸ್ತೆಯಲ್ಲಿ ನಿರ್ಮಿಸಲುದ್ದೇಶಿಸಿರುವ ನೂತನ ಕಟ್ಟಡ, ಮರಸೂರಿನಲ್ಲಿ ಇಂಟರ್ನ್ಯಾಷನಲ್ ಮಾಂಟೆಸರಿ ಶಾಲೆ, ಕೋರಮಂಗಲದಲ್ಲಿ ವಿಐಟಿ ಎಂಜಿನಿಯರಿಂಗ್ ಕಾಲೇಜು, ರೂಪೇನ ಅಗ್ರಹಾರದಲ್ಲಿ ವೇಮನ ವಿದ್ಯಾರ್ಥಿಗಳ ವಸತಿಗೃಹದ ಕಟ್ಟಡ, ಕೋರಮಂಗಲದಲ್ಲಿ ವಿಐಟಿ ವಿದ್ಯಾರ್ಥಿನಿಯರ ವಸತಿಗೃಹದ ಕಟ್ಟಡಗಳ ಉದ್ಘಾಟನೆ ಮತ್ತು ನಿರ್ಮಾಣ ಕಾರ್ಯಕ್ಕೆ ಶಿಲಾನ್ಯಾಸ ನೆರವೇರಿಸಲಾಗುತ್ತದೆ.
ಮುಖ್ಯ ಅತಿಥಿಗಳಾಗಿ ಮಾಜಿ ಗೃಹ ಸಚಿವ ರಾಮಲಿಂಗಾರೆಡ್ಡಿ, ಕೃಷಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ, ಮಾಜಿ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್, ಬೊಮ್ಮನಹಳ್ಳಿ ಶಾಸಕ ಎಂ.ಸತೀಶ್ ರೆಡ್ಡಿ, ರಾಜ್ಯಸಭಾ ಸದಸ್ಯರಾದ ಡಿ.ಕುಪೇಂದ್ರ ರೆಡ್ಡಿ ಮತ್ತು ಕೆ.ಸಿ.ರಾಮಮೂರ್ತಿ, ಬೆಳಗಾವಿಯ ವಿಟಿಯು ಉಪಕುಲಪತಿ ಡಾ.ಎಚ್.ಎನ್.ಜಗನ್ನಾಥ ರೆಡ್ಡಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರೆಡ್ಡಿಜನ ಸಂಘದ ಅಧ್ಯಕ್ಷ ಎಚ್.ಎನ್.ವಿಜಯರಾಘವ ರೆಡ್ಡಿ ವಹಿಸಲಿದ್ದಾರೆ.
ಡಾ.ಕೆ.ಪಿ.ಜೆ.ರೆಡ್ಡಿ, ಎಸ್.ಆರ್.ವಿಶ್ವನಾಥ್, ಬಿ.ವಿ.ರಾಮಚಂದ್ರ ರೆಡ್ಡಿ, ಕೆ.ಬಿ.ಮುನಿವೆಂಕಟ ರೆಡ್ಡಿ, ಎಸ್.ಎನ್.ಸುಬ್ಬಾ ರೆಡ್ಡಿ, ಎಚ್.ಟಿ.ಸೋಮಶೇಖರ ರೆಡ್ಡಿ, ಸೌಮ್ಯ ರೆಡ್ಡಿ ಮತ್ತು ರೆಡ್ಡಿ ಜನ ಸಂಘದ ಆಡಳಿತ ಮಂಡಳಿ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.