ರಫೇಲ್ ವಿವಾದ: ಸೆ. 27ರಂದು ಪ್ರಧಾನಿ ರಾಜೀನಾಮೆಗೆ ಆಗ್ರಹಿಸಿ ರ್ಯಾಲಿ
ಮುಂಬೈ, ಸೆ. 22: ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆ ನೀಡುವಂತೆ ಹಾಗೂ ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ನಡೆದ ಭ್ರಷ್ಟಾಚಾರದ ತನಿಖೆ ನಡೆಸಲು ಜಂಟಿ ಸಂಸದೀಯ ಸಮಿತಿ ರೂಪಿಸುವಂತೆ ಆಗ್ರಹಿಸಿ ಸೆಪ್ಟಂಬರ್ 27ರಂದು ಮಹಾರಾಷ್ಟ್ರ ಕಾಂಗ್ರೆಸ್ ಪ್ರತಿಭಟನ ರ್ಯಾಲಿ ನಡೆಸಲಿದೆ.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಹಾರಾಷ್ಟ್ರ ಕಾಂಗ್ರೆಸ್ ವರಿಷ್ಠ ಅಶೋಕ್ ಚವ್ಹಾಣ್, ಪ್ರಧಾನಿ ಅವರಿಗೆ ದೇಶದ ಹಿತಾಸಕ್ತಿಗಿಂತ ಗೆಳೆಯರ ವ್ಯವಹಾರ ಹಿತಾಸಕ್ತಿಯೇ ಮುಖ್ಯವಾಗಿದೆ ಎಂದಿದ್ದಾರೆ. ಮೋದಿ ಹಾಗೂ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಹಾಗೂ ನಂಬಿಕೆಗೆ ವಂಚಿಸುತ್ತಿದ್ದಾರೆ. ಇಬ್ಬರೂ ಕೂಡಲೇ ರಾಜೀನಾಮೆ ನೀಡಬೇಕು. ಈ ಹಗರಣದಿಂದಾಗಿ ಮೋದಿ ಅವರು ಭ್ರಷ್ಟಾಚಾರದ ಮುಖ ಅನಾವರಣವಾಯಿತು ಎಂದು ಅವರು ಹೇಳಿದ್ದಾರೆ.
ಕೇಂದ್ರ ಸರಕಾರ ಸರ್ಜಿಕಲ್ ಸ್ಟ್ರೈಕ್ ದಿನಾಚರಣೆಗೆ ಸಿದ್ಧತೆ ನಡೆಸುತ್ತಿದೆ. ಆದರೆ, ಉಗ್ರರು ಯೋಧರ ತಲೆಗಳನ್ನು ಕತ್ತರಿಸುತ್ತಿದ್ದಾರೆ. ಕಾಶ್ಮೀರದಲ್ಲಿ ಸೇನಾಧಿಕಾರಿಗಳು ಪ್ರತಿ ದಿನ ಹುತಾತ್ಮರಾಗುತ್ತಿದ್ದಾರೆ ಎಂದು ಚವ್ಹಾಣ್ ಹೇಳಿದರು.