ಹನೂರು: ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆ
ಹನೂರು,ಸೆ.23: ರೈತರ ಕಲ್ಯಾಣ ಟ್ರಸ್ಟ್ ಮೂಲಕ ಹಾಲು ಉತ್ಪಾದಕರಿಗೆ 1 ಲಕ್ಷದ ವರೆಗೆ ಜೀವ ವಿಮೆ ಸೌಲಭ್ಯ, ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಉನ್ನತ ಶಿಕ್ಷಣಕ್ಕೆ ಸಹಾಯ ಧನ ಮುಂತಾದ ಸಾಕಷ್ಟು ಸೌಲಭ್ಯ ನೀಡಲಾಗುತ್ತಿದೆ ಎಂದು ಚಾಮುಲ್ ಅಧ್ಯಕ್ಷ ಸಿ.ಎನ್ ಗುರುಮಲ್ಲಪ್ಪ ತಿಳಿಸಿದರು.
ಹನೂರು ಸಮೀಪದ ಸೀರಗೂಡು, ಮಹಾಲಿಂಗನಕಟ್ಟೆ, ಬೆಳ್ಳತ್ತೂರು, ಚೆನ್ನಾಲಿಂಗನಹಳ್ಳಿ ಗ್ರಾಮಗಳಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ 2017-18 ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರೈತರು ಪಶು ಸಂಗೋಪನೆಗೆ ವೈಜ್ಞಾನಿಕ ಪದ್ಧತಿಯನ್ನು ಅನುಸರಿಸಿದರೆ ಮಾತ್ರ ಅಧಿಕ ಲಾಭ ಕಾಣಲು ಸಾಧ್ಯ. ಹಾಲಿನ ಕೊಬ್ಬಿನ ಅಂಶ 3.5 ಕಿಂತ ಹೆಚ್ಚಾಗಿರಬೇಕು. ಹೆಚ್ಚಾದಷ್ಟು ರೈತರು ಉತ್ತಮ ದರ ಪಡೆಯಬಹುದು ಎಂದರು.
ಈಗಾಗಲೇ ಯಶಸ್ವಿನಿ ಯೋಜನೆ ರದ್ದಾಗಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನೋಂದಣಿ ಮಾಡಿಕೊಳ್ಳುವುದರ ಮುಖಾಂತರ ಆರೋಗ್ಯ ಕರ್ನಾಟಕ ಕಾರ್ಡ್ ಪಡೆದುಕೊಳ್ಳಿ ಎಂದು ತಿಳಿಸಿದರು.
ಸಭೆಯ ಪ್ರಾರಂಭದಲ್ಲಿ ಸಂಘಗಳ ವಿಸ್ತರಣಾಧಿಕಾರಿ ಸೋಮಶೇಖರ್ ಹಾಲು ಉತ್ಪಾದಕರ ಸಂಘಗಳ ಅಯವ್ಯಯ, ಜಮಾ ಖರ್ಚು, ನಿವ್ವಳ ಲಾಭ ಮುಂದಿನ ವರ್ಷದ ಬಜೆಟ್ನ್ನು ಮಂಡಿಸಿದರು.
ಈ ಸಂದರ್ಭ ಚಾಮುಲ್ ನಿರ್ದೇಶಕ ನಂಜುಂಡಸ್ವಾಮಿ, ಉಪವ್ಯವಸ್ಥಾಪಕ ಶರತ್ ಕುಮಾರ್, ವಿಸ್ತರಣಾಧಿಕಾರಿ ಸೋಮಶೇಖರ್ ಸಂಘಗಳ ಅಧ್ಯಕ್ಷರುಗಳಾದ ಆರ್.ಹಲಗಪ್ಪ, ಸದಾಶಿವಮೂರ್ತಿ, ಜಯಣ್ಣ, ನಾಗೇಗೌಡ್ರು, ಕಾರ್ಯದರ್ಶಿಗಳಾದ ರಾಜೇಂದ್ರ ಕುಮಾರ್, ರಂಗಸ್ವಾಮಿ, ಶಿವಕುಮಾರ್ ಆರ್.ಜಡೇಸ್ವಾಮಿ ಮತ್ತು ನಿರ್ದೇಶಕರು, ರೈತರು ಹಾಜರಿದ್ದರು.