ಅಣೆಕಟ್ಟೆ ನಿರ್ಮಾಣಕ್ಕೆ ಲಕ್ಷ ಕೋಟಿ ರೂ. ದೇಣಿಗೆ ನೀಡಿ: ಪಾಕ್ ಜನತೆಗೆ ಇಮ್ರಾನ್ ಖಾನ್ ಮನವಿ
ಇಸ್ಲಾಮಾಬಾದ್, ಸೆ. 28: ಪಾಕಿಸ್ತಾನದಲ್ಲಿ ಅಗತ್ಯವಾಗಿ ಬೇಕಾದ ಅಣೆಕಟ್ಟುಗಳನ್ನು ನಿರ್ಮಿಸಲು 14 ಬಿಲಿಯ ಡಾಲರ್ (ಸುಮಾರು 1 ಲಕ್ಷದ 1,600 ಕೋಟಿ ಭಾರತೀಯ ರೂಪಾಯಿ) ಮೊತ್ತವನ್ನು ದೇಣಿಗೆ ಮೂಲಕ ನೀಡುವಂತೆ ಪ್ರಧಾನಿ ಇಮ್ರಾನ್ ಖಾನ್ ಜನರಿಗೆ ಕರೆ ನೀಡಿದ್ದಾರೆ.
ಜನರಲ್ಲಿ ಹೊಸದಾಗಿ ತುಂಬಿಕೊಂಡಿರುವ ರಾಷ್ಟ್ರೀಯತೆಯ ಭಾವನೆಯನ್ನು ನಗದೀಕರಿಸುವ ಪ್ರಯತ್ನವನ್ನು ಖಾನ್ ಮಾಡಿರುವುದು ಸ್ಪಷ್ಟವಾಗಿದೆ. ಆದರೆ, ಇಮ್ರಾನ್ರ ಈ ಕಲ್ಪನೆ ಅವಾಸ್ತವಿಕ ಎಂಬುದಾಗಿ ಅವರ ಟೀಕಾಕಾರರು ಗೇಲಿ ಮಾಡಿದ್ದಾರೆ.
ಈ ಮೊತ್ತದ ಸಾರ್ವಜನಿಕ ದೇಣಿಗೆಯನ್ನು ಪಡೆಯುವಲ್ಲಿ ಪಾಕ್ ಸರಕಾರ ಯಶಸ್ವಿಯಾದರೆ ಅದೊಂದು ದಾಖಲೆಯಾಗಲಿದೆ.
ಆದರೆ, ಇಮ್ರಾನ್ ಖಾನ್ರ ಮನವಿಗೆ ಜನರು ಉತ್ಸಾಹದಿಂದಲೇ ಪ್ರತಿಕ್ರಿಯಿಸಿದ್ದಾರೆ. ಆದಾಗ್ಯೂ, ದೇಶದ ತೀವ್ರ ಜಲ ಬಿಕ್ಕಟ್ಟನ್ನು ಪರಿಹರಿಸುವ ನಿಟ್ಟಿನಲ್ಲಿ ಬೇಕಾದ ಹಣಕ್ಕೆ ಹೋಲಿಸಿದರೆ, ಈಗ ಸಂಗ್ರಹವಾಗಿರುವ ಮೊತ್ತ ಸಮುದ್ರದಲ್ಲಿನ ಒಂದು ಬಿಂದಿನಂತೆ.
32 ದಿನಗಳ ಅವಧಿಯಲ್ಲಿ ಕೇವಲ 20 ಮಿಲಿಯ ಡಾಲರ್ (ಸುಮಾರು 145 ಕೋಟಿ ಭಾರತೀಯ ರೂಪಾಯಿ) ಸಂಗ್ರಹವಾಗಿದೆ.